ಶಿವಮೊಗ್ಗ ನಗರದಲ್ಲಿ ರಸ್ತೆ ಅಗಲೀಕರಣ ಪ್ರಸ್ತಾವನೆ ಸಲ್ಲಿಸಿ: ಜಿಲ್ಲಾಧಿಕಾರಿ ಕೆ.ಎ.ದಯಾನಂದ

Source: so news | By MV Bhatkal | Published on 17th March 2019, 12:11 AM | State News | Don't Miss |

 

ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿ ಸುಗಮ ಸಂಚಾರಕ್ಕೆ ಪೂರಕವಾಗಿ ಅಗಲೀಕರಣಗೊಳಿಸಬಹುದಾದ ರಸ್ತೆಗಳ ಕುರಿತು ಪ್ರಸ್ತಾವನೆಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ತಿಳಿಸಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾತನಾಡಿದರು.
ಲಕ್ಷ್ಮೀ ಟಾಕೀಸ್ ರಸ್ತೆಯಿಂದ ಜೈಲ್ ವೃತ್ತದವರೆಗೆ ವಾಹನ ದಟ್ಟಣೆ ಹೆಚ್ಚಾಗಿದೆ. ಈ ರೀತಿ ಸುಗಮ ಸಂಚಾರಕ್ಕಾಗಿ ಅಗಲೀಕರಣ ಮಾಡಬಹುದಾದ ರಸ್ತೆಗಳ ಪ್ರಸ್ತಾವನೆಯನ್ನು ಸಲ್ಲಿಸಬೇಕು. ನಗರದಲ್ಲಿ ರಸ್ತೆ ಬದಿ ಅತಿಕ್ರಮಣಗಳನ್ನು ತೆರವುಗೊಳಿಸಿ ಅಟೋ ರಿಕ್ಷಾ ನಿಲ್ದಾಣಗಳನ್ನು ನಿರ್ಮಿಸಲಾಗುವುದು. ರಸ್ತೆ ಅತಿಕ್ರಮಣ ಮಾಡಿಕೊಂಡಿರುವ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸುವ ಕಾರ್ಯವನ್ನು ಮಹಾನಗರ ಪಾಲಿಕೆ ವತಿಯಿಂದ ಕೈಗೊಳ್ಳಬೇಕು. ಹೊಳೆ ಬಸ್‍ಸ್ಟಾಪ್‍ನಿಂದ ಬಸ್ ನಿಲ್ದಾಣದವರೆಗೆ ಹಾದು ಹೋಗುವ ಬಿ.ಎಚ್.ರಸ್ತೆಯ ಇಕ್ಕೆಲಗಳಲ್ಲಿ ಪಾದಚಾರಿಗಳ ರಸ್ತೆ ಕಿರಿದಾಗಿದ್ದು ಇದನ್ನು ಅಗಲೀಕರಣಗೊಳಿಸುವ ಅಗತ್ಯವಿದೆ ಎಂದು ಅವರು ಹೇಳಿದರು.
ಖಾಸಗಿ ಬಸ್‍ಗಳ ಹಾಗೂ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ನಗರದ ಖಾಸಗಿ ಬಸ್‍ನಿಲ್ದಾಣದ ಹಿಂಭಾಗ ನಡೆಯುವ ಕಾಯಿಪಲ್ಲೆಗಳ ಸಂತೆಯನ್ನು ಚುನಾವಣೆ ಬಳಿಕ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು. ಇದೇ ರೀತಿ ಖಾಸಗಿ ಬಸ್‍ಗಳ ಟರ್ಮಿನಲ್ ನಿರ್ಮಿಸಲು ಪ್ರಸ್ತುತ ಖಾಸಗಿ ಬಸ್ ನಿಲ್ದಾಣದ ಎದುರು ಇರುವ ನಿವೇಶನದ ತಕರಾರು ಯಾವ ಹಂತದಲ್ಲಿದೆ ಎಂಬುವುದನ್ನು ಪರಿಶೀಲಿಸಿ ವರದಿಯನ್ನು ಸಲ್ಲಿಸುವಂತೆ ಅವರು ಸೂಚಿಸಿದರು.
ಅಪಘಾತ ಪ್ರಮಾಣ ಇಳಿಕೆಗೆ ಕ್ರಮ: ಸುಪ್ರೀಂಕೋರ್ಟ್ ಪ್ರತಿ ವರ್ಷ ಅಪಘಾತ ಪ್ರಮಾಣದಲ್ಲಿ ಶೇ.10ರಷ್ಟು ಕಡಿಮೆಯಾಗುವಂತೆ ನೋಡಿಕೊಳ್ಳಬೇಕು ಎಂದು ಆದೇಶ ನೀಡಿದೆ. ಜಿಲ್ಲೆಯಲ್ಲಿ 2017ರಲ್ಲಿ ಒಟ್ಟು 1741ಅಪಘಾತಗಳು ಸಂಭವಿಸಿದ್ದು ಇದರಲ್ಲಿ 359 ಸಾವಿಗೀಡಾಗಿ 2363 ಮಂದಿ ಗಾಯಗೊಂಡಿದ್ದಾರೆ. 2018ರಲ್ಲಿ 1601 ಅಪಘಾತಗಳಾಗಿದ್ದು, 323 ಸಾವಿಗೀಡಾಗಿ 2069 ಗಾಯಗೊಂಡಿದ್ದಾರೆ. ಈ ವರ್ಷದ ಆರಂಭದ ಎರಡು ತಿಂಗಳಲ್ಲಿ 286 ಅಪಘಾತಗಳು ಸಂಭವಿಸಿದ್ದು, 60 ಮಂದಿ ಸಾವಿಗೀಡಾಗಿ 340 ಮಂದಿ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಸಾವಿಗೀಡಾದವರ ಪ್ರಮಾಣ ಸುಮಾರು ಶೇ.10ರಷ್ಟು ಕಡಿಮೆಯಾಗಿದ್ದರೂ, ಈ ವರ್ಷದ ಎರಡು ತಿಂಗಳಲ್ಲಿ ಅಪಘಾತಗಳಲ್ಲಿ 6ಮಕ್ಕಳು ಸಾವಿಗೀಡಾಗಿದ್ದಾರೆ. 2017ರಲ್ಲಿ 4 ಹಾಗೂ 18ರಲ್ಲಿ 7ಮಕ್ಕಳು ಮಾತ್ರ ಸಾವಿಗೀಡಾಗಿದ್ದರು. ಈ ವರ್ಷ ಸಂಭವಿಸಿರುವ ಅಪಘಾತಗಳಲ್ಲಿ ಮಕ್ಕಳ ಸಾವು ಸಂಭವಿಸಿರುವ ಪ್ರಕರಣಗಳ ಪರಿಶೀಲನೆ ನಡೆಸಿ ವರದಿಯನ್ನು ಸಲ್ಲಿಸಬೇಕು ಎಂದು ಅವರು ಹೇಳಿದರು.
ನಗರದಲ್ಲಿ ವೃತ್ತಗಳ ಅಭಿವೃದ್ಧಿ: ಶಿವಮೊಗ್ಗ ನಗರದ ವೃತ್ತಗಳನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಲು ಪ್ರಸ್ತಾವನೆಯನ್ನು ಸಿದ್ಧಪಡಿಸಬೇಕು. ಈ ಕಾರ್ಯದಲ್ಲಿ ಜಿಲ್ಲಾಡಳಿತದೊಂದಿಗೆ ಕೈಜೋಡಿಸಲು ಬ್ಯಾಂಕುಗಳು, ಖಾಸಗಿ ಆಸ್ಪತ್ರೆಗಳು , ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಆಭರಣ ಅಂಗಡಿಗಳ ಮಾಲಿಕರ ಸಭೆಯನ್ನು ಆದಷ್ಟು ಬೇಗನೆ ಕರೆದು ಅನುಷ್ಟಾನಗೊಳಿಸುವಂತೆ ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರು.
ಶಿವಮೊಗ್ಗ ನಗರ ಯೋಜನೆ ಇಲಾಖೆ ಸಹಾಯಕ ನಿರ್ದೇಶಕ ಪ್ರಜ್ಞಾ ಪ್ರಕಾಶ್ ಅವರು ಶಿವಮೊಗ್ಗ ನಗರದ ಸಂಚಾರ ವ್ಯವಸ್ಥೆ ಸುಗಮಗೊಳಿಸುವ ಕುರಿತು ಸಿದ್ಧಪಡಿಸಿದ ಪ್ರಸ್ತಾವನೆಯನ್ನು ಸಭೆಯ ಮುಂದಿರಿಸಿದರು.
ಬ್ಲಾಕ್‍ಸ್ಪಾಟ್ ಗುರುತಿಸಿ: ಅತಿ ಹೆಚ್ಚು ಅಪಘಾತ ಸಂಭವಿಸುವ ವ್ಯಾಪ್ತಿಯನ್ನು ಗುರುತಿಸಿ ಇದನ್ನು ತಪ್ಪಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪ್ರಸ್ತಾವನೆಯನ್ನು ಸಲ್ಲಿಸಬೇಕು. ಅಂತಹ ರಸ್ತೆಗಳಲ್ಲಿ ಸಿಸಿಟಿವಿ ಅಳವಡಿಕೆ, ಇಂಟರ್‍ಸೆಪ್ಟರ್ ವಾಹನಗಳ ಸಂಖ್ಯೆ ಹೆಚ್ಚಳ ಸೇರಿದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಶಿವಮೊಗ್ಗ ನಗರದಲ್ಲಿ ಅವೈಜ್ಞಾನಿಕವಾಗಿರುವ ರಸ್ತೆ ಉಬ್ಬುಗಳನ್ನು ತೆರವುಗೊಳಿಸಿ ವೈಜ್ಞಾನಿಕವಾದ ಉಬ್ಬುಗಳನ್ನು ನಿರ್ಮಿಸಬೇಕು.
ಸಾರಿಗೆ ಇಲಾಖೆ ಜಂಟಿ ಆಯುಕ್ತ ಶಿವರಾಜ ಪಾಟೀಲ್, ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಡಾ.ಶೇಖರ ಎಚ್.ಟಿ. ಇಲಾಖಾಧಿಕಾರಿಗಳು ಹಾಗೂ ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದರು.

Read These Next

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...