ಹೊಸಪೇಟೆ : ರಸ್ತೆ ನಿಯಮಗಳನ್ನು ಪ್ರಾಮಾಣಿಕವಾಗಿ ಪಾಲಿಸಿದಲ್ಲಿ ಕೇವಲ ಅಪಘಾತಗಳನ್ನು ಮಾತ್ರ ತಡೆಯುವುದಷ್ಟೇ ಅಲ್ಲದೆ ಅಮೂಲ್ಯವಾದ ಜೀವಗಳನ್ನು ಉಳಿಸಲು ಸಾಧ್ಯ ಎಂದು ಸಂಚಾರಿ ವೃತ್ತ ನಿರೀಕ್ಷಕರಾದ ಮಹಾಂತೇಶ ಸಜ್ಜನ್ ಅವರು ಹೇಳಿದರು.
ಹೊಸಪೇಟೆ ನಗರದ ಶ್ರೀಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದರ 159ನೆಯ ಜನ್ಮದಿನಾಚರಣೆಯ ಅಂಗವಾಗಿ ನಡೆದ ರಾಷ್ಟ್ರೀಯ ಯುವ ಸಪ್ತಾಹದಲ್ಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಾಹನ ಚಲಾವಣೆ ಪರವಾನಿಗಿ ಹಾಗೂ ವಾಹನಗಳಿಗೆ ಸಂಬಂಧಿಸಿದಂತೆ ದಾಖಲೆಗಳು ಇರಬೇಕಾದುದು ಮುಖ್ಯವಾದುದು. ಮದ್ಯಪಾನ ಮಾಡಿ ವಾಹನ ಚಲಾಯಿಸುವುದು, ವಾಹನ ಚಲಾಯಿಸುವಾಗ ಮೊಬೈಲ್ ಬಳಸುವುದು ಹಾಗೂ ಮೂರು ಜನರು ದ್ವಿಚಕ್ರವಾಹನಗಳಲ್ಲಿ ಸವಾರಿ ಮಾಡುವುದು ರಸ್ತೆ ನಿಯಮಗಳಿಗೆ ವಿರುದ್ಧವಾದುದು ಎಂದರು.
ರಸ್ತೆ ಅಪಘಾತಗಳಲ್ಲಿ ಮರಣಕ್ಕಿಡಾಗುವವರಲ್ಲಿ ಬಹುತೇಕರು ಯುವಕರೇ ಆಗಿರುವುದು ದುರಂತದ ಸಂಗತಿ ಎಂದರಲ್ಲದೆ, ಜಾಗ್ರತೆಯಿಂದ ರಸ್ತೆ ನಿಯಮಗಳನ್ನು ಪಾಲಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.
ಪ್ರಾಂಶುಪಾಲರಾದ ಡಾ.ಬಿ.ಜಿ.ಕನಕೇಶಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಸಾಂಸ್ಕøತಿಕ ವಿಭಾಗದ ಸಂಚಾಲಕರಾದ ಡಾ.ನಾಗಣ್ಣ ಕಿಲಾರಿ. ಐಕ್ಯೂಎಸಿ ಮುಖ್ಯಸ್ಥರಾದ ಡಾ.ಟಿ.ಎಚ್.ಬಸವರಾಜ್, ರಾಷ್ಟ್ರೀಯ ಸೇವಾ ಯೋಜನೆಯ ಸ್ವ ಆರ್ಥಿಕ ಘಟಕದ ಸಂಚಾಲಕರಾದ ಡಾ.ಕೆ.ವೆಂಕಟೇಶ್, ದೈಹಿಕ ನಿರ್ದೇಶಕರಾದ ಮಂಜುನಾಥ ಆರೆಂಟನೂರ., ಡಿ.ಎಂ.ಮಲ್ಲಿಕಾರ್ಜುನಯ್ಯ ಹಾಗೂ ಇತರರು ಇದ್ದರು.