ಹುಬ್ಬಳ್ಳಿ: ಬಲವಂತದಿಂದ ಮತಾಂತರಗಳನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿ ರವಿವಾರ ಬೆಳಗ್ಗೆ ಇಲ್ಲಿಯ ಭೈರಿದೇವರ ಕೊಪ್ಪದಲ್ಲಿರುವ ಚರ್ಚೆಂದಕ್ಕೆ ನುಗ್ಗಿದ ಬಜರಂಗ ದಳ ಮತ್ತು ವಿಹಿಂಪ ಕಾರ್ಯಕರ್ತರು ಭಜನೆಗಳನ್ನು ಹಾಡಿದ ಘಟನೆ ರವಿವಾರ ನಡೆದಿದೆ.
ಚರ್ಚ್ನೊಳಗೆ ನೆಲದಲ್ಲಿ ಕುಳಿತಿದ್ದ ಹಲವಾರು ಪುರುಷರು ಮತ್ತು ಮಹಿಳೆಯರು ತಲೆಯ ಮೇಲೆ ಕೈಗಳನ್ನು ನಮಸ್ಕಾರದ ಭಂಗಿಯಲ್ಲಿ ಎತ್ತಿ ಹಿಡಿದು ಭಜನೆ ಮಾಡುತ್ತಿರುವುದನ್ನು ವೀಡಿಯೊ ತೋರಿಸಿದೆ.
ಈ ಮಧ್ಯೆ ಚರ್ಚ್ನ ಪ್ಲಾಸ್ಟರ್ ಸೋಮು ಅವರಾಧಿ ಬಂಧನಕ್ಕೆ ಆಗ್ರಹಿಸಿ ಸ್ಥಳೀಯ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ನೇತೃತ್ವದಲ್ಲಿ ಕಾರ್ಯಕರ್ತರು ಹೆದ್ದಾರಿ ತಡೆ ನಡೆಸಿದರು.
ಘಟನೆಗೆ ಸಂಬಂಧಿಸಿದಂತೆ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಚರ್ಚ್ನ ಸದಸ್ಯರು ಮತ್ತು ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರು ಪರಸ್ಪರ ಆರೋಪಿಸಿದ್ದಾರೆ. ಅವರಾಧಿ ಮತ್ತು ಅವರ ಕೆಲವು ಸಹವರ್ತಿಗಳು ಸಣ್ಣಪುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ಘಟನೆ ಬಗ್ಗೆ ತಾವು ಸೋಮವಾರ ದೂರು ಸಲ್ಲಿಸಿರುವುದಾಗಿ ಚರ್ಚ್ ಅಧಿಕಾರಿಗಳು ತಿಳಿಸಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ರಕ್ಷಣೆ ಕಾಯ್ದೆ ಮತ್ತು ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಕೃತ್ಯಗಳ ವಿರುದ್ಧ ಕಾಯ್ದೆಯಡಿ ಅವರಾಧಿ ಮತ್ತು ಇತರರ ವಿರುದ್ಧ ದೂರನ್ನು ದಾಖಲಿಸಲಾಗಿದೆ. ಅವರಾಧಿಯವರನ್ನು ಬಂಧಿಸಿರುವ ಪೊಲೀಸರು
ಇತರ ಮೂವರನ್ನು ವಿಚಾರಣೆಯ ಬಳಿಕ ಬಿಡುಗಡೆಗೊಳಿಸಿದ್ದಾರೆ. ಘಟನೆಯನ್ನು ದೃಢಪಡಿಸಿದ ಹುಬ್ಬಳ್ಳಿ-ಧಾರವಾಡ ಪೊಲೀಸ್
ಆಯುಕ್ತ ಲಾಬುರಾಮ ಅವರು, ತನಿಖೆಯು ಪ್ರಗತಿಯಲ್ಲಿದೆ. ಅವರಾಧಿಯವರನ್ನು ಮಾತ್ರ ಬಂಧಿಸಲಾಗಿದೆ. ಈವರೆಗೆ ಚರ್ಚ್ ನಿಂದ ಯಾವುದೇ ದೂರನ್ನು ನಾವು ಸ್ವೀಕರಿಸಿಲ್ಲ' ಎಂದು ತಿಳಿಸಿದರು.
'ವಿಶ್ವನಾಥ ಎಂಬ ವ್ಯಕ್ತಿಯನ್ನು ಮತಾಂತರಕ್ಕಾಗಿ ಚರ್ಚ್ಗೆ ಕರೆತರಲಾಗಿತ್ತು. ಅವರು ಚರ್ಚ್ನಿಂದ ಪೊಲೀಸ್ ಠಾಣೆಗೆ ತೆರಳಿ ಅವರಾಧಿ ಮತ್ತು ಇತರರ ವಿರುದ್ಧ ದೂರು ದಾಖಲಿಸಿದ್ದರು. ಬಳಿಕ ನಮ್ಮ ಕಾರ್ಯಕರ್ತರು ಚರ್ಚ್ನೊಳಗೆ ಸಮಾವೇಶಗೊಂಡು ಹಿಂದೂ ಧರ್ಮದ ಭಜನೆಗಳನ್ನು ಹಾಡುವ ಮೂಲಕ ಪ್ರತಿಭಟಿಸಿದ್ದರು ಎಂದು ಬಜರಂಗ ದಳದ ರಾಜ್ಯ ಸಂಚಾಲಕ ರಾಘು ಸಕಲೇಶಪುರ ಹೇಳಿದ್ದಾರೆ.
ಬಲವಂತದ ಮತಾಂತರದ ಆರೋಪವನ್ನು ಮಾಡಿರುವ ವಿಶ್ವನಾಥ, ಚರ್ಚ್ನ ಪ್ರಾರ್ಥನೆಯ ಬದಲು ತಾನು ಹಿಂದೂ ಪ್ರಾರ್ಥನೆಯನ್ನು ಹಾಡಿದಾಗ ಪ್ಯಾಸ್ಟರ್ ಅವರಾಧಿ ತನ್ನನ್ನು ನಿಂದಿಸಿದ್ದರು ಎಂದೂ ಆರೋಪಿಸಿದ್ದಾರೆ. ಮತಾಂತರದ ಯಾವುದೇ ಪ್ರಯತ್ನಗಳನ್ನು ಚರ್ಚ್ ಅಧಿಕಾರಿಗಳು ನಿರಾಕರಿಸಿದ್ದಾರೆ.
ಸಂಘಪರಿವಾರ ಕಾರ್ಯಕರ್ತರು ಚರ್ಚ್ನಲ್ಲಿ ಭಜನೆಗಳನ್ನು ಹಾಡುತ್ತಿದ್ದಾಗ ಅವರಾಧಿ ಅಲ್ಲಿಗೆ ಬಂದಿದ್ದು, ಅವರಿಗೆ ಮುತ್ತಿಗೆ ಹಾಕಲಾಗಿತ್ತು. ಸ್ಥಳದಲ್ಲಿ ಕೆಲವು ಮಹಿಳೆಯರೂ ಇದ್ದು,ವಾಗ್ವಾದ ಮತ್ತು ತಳ್ಳಾಟಗಳ ವೇಳೆ ಗಾಯಗೊಂಡಿದ್ದಾರೆ ಎಂದು ಚರ್ಚ್ನ ಹಿರಿಯ ಸದಸ್ಯ ಸೆಡ್ರಿಕ್ ಜಾಕೋಬ್ ತಿಳಿಸಿದರು.