ಹೊಸದಿಲ್ಲಿ: ಸಿಎಎ ಪ್ರತಿಭಟನಾಕಾರರಿಗೆ ಜಾಮೀನು 'ಪ್ರತಿಭಟಿಸುವ ಹಕ್ಕು-ಭಯೋತ್ಪಾದನಾ ಕೃತ್ಯಗಳ ನಡುವೆ ವ್ಯತ್ಯಾಸವಿದೆ' ಕೇಂದ್ರಕೆ ದಿಲ್ಲಿ ಹೈಕೋರ್ಟ್ ತರಾಟೆ

Source: VB | By S O News | Published on 16th June 2021, 1:57 PM | National News |

ಹೊಸದಿಲ್ಲಿ: ಸಾಂವಿಧಾನಿಕವಾಗಿ ಖಾತರಿ ಪಡಿಸಿದ ಪ್ರತಿಭಟಿಸುವ ಹಕ್ಕು ಮತ್ತು ಭಯೋತ್ಪಾದಕ ಕೃತ್ಯದ ಮಧ್ಯೆ ವ್ಯತ್ಯಾಸವಿದೆ ಎಂದು ಹೇಳಿದ ದಿಲ್ಲಿ ಹೈಕೋರ್ಟ್, ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿಭಟನೆ ಸಂದರ್ಭ ದಿಲ್ಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಒಂದು ವರ್ಷಕ್ಕೂ ಅಧಿಕ ಸಮಯದಿಂದ ಬಂಧನದಲ್ಲಿರುವ 3 ಹೋರಾಟಗಾರರಿಗೆ ಜಾಮೀನು ಮಂಜೂರುಗೊಳಿಸಿದೆ.

ಮಹಿಳೆಯರ ಹಕ್ಕುಗಳಿಗೆ ಹೋರಾಡುವ 'ಪಿಂಜರಾತೋಡ್'ನ ಕಾರ್ಯಕರ್ತೆಯರಾದ ನತಾಶಾ ನರ್ವಾಲ್ ಮತ್ತು ದೇವಾಂಗನಾ ಕಲಿತಾ ಹಾಗೂ ಜೆಎಂಐ ವಿದ್ಯಾರ್ಥಿ ಆಸಿಫ್ ಇಕ್ವಾಲ್ ತನ್ಹಾರನ್ನು 2020ರ ಮೇ ತಿಂಗಳಿನಲ್ಲಿ ಬಂಧಿಸಲಾಗಿತ್ತು. 2020ರ ಫೆಬ್ರವರಿಯಲ್ಲಿ ನಡೆದಿದ್ದ ಹಿಂಸಾಚಾರದ ನಿಯೋಜಕರೆಂದು ಇವರ ವಿರುದ್ಧ ಆರೋಪಿಸಲಾಗಿತ್ತು. ಜಾಮೀನು ಕೋರಿ ಈ ಮೂವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು.

ನತಾಶಾ ಮತ್ತು ದೇವಾಂಗನಾ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ನ

740 ಸಾಕ್ಷಿಗಳ ವಿಚಾರಣೆ ಬಾಕಿ

ಆರೋಪಪಟ್ಟಿ ಸಲ್ಲಿಸಲಾಗಿದ್ದರೂ ಅದರಲ್ಲಿ ಉಲ್ಲೇಖಿಸ ಲಾಗಿರುವ ಆರೋಪಗಳ ಬಗ್ಗೆ ವಿಶೇಷ ನ್ಯಾಯಾಲಯ ಇನ್ನೂ ಗಮನಿಸಿಲ್ಲ. ಸ್ಥಳೀಯ ಸಾಕ್ಷಿಗಳು, ಸಂರಕ್ಷಿತ ಸಾಕ್ಷಿಗಳು, ಪೊಲೀಸ್‌ ಸಾಕ್ಷಿಗಳ ಸಹಿತ ಸುಮಾರು 740 ಸಾಕ್ಷಿಗಳಿದ್ದಾರೆ ಎಂದು ಅರ್ಜಿದಾರರು ಹೇಳಿದ್ದಾರೆ. ಇವರಲ್ಲಿ ಒಬ್ಬರನ್ನೂ ಇದುವರೆಗೆ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಲ್ಲ. ಅಲ್ಲದೆ ಕೊರೋನ ಸೋಂಕಿನಿಂದ ಉದ್ಭವಿಸಿರುವ ಪರಿಸ್ಥಿತಿಯಿಂದ ನ್ಯಾಯಾಲಯದ ಕಲಾಪಗಳ ಮೇಲೆಯೂ ಪರಿಣಾಮ ಬೀರಲಿದ್ದು ಈ ಪ್ರಕರಣದ ವಿಚಾರಣೆ ಸುದೀರ್ಘಾವಧಿಗೆ ವಿಸ್ತರಿಸುವ ಸಾಧ್ಯತೆಯಿದೆ ಎಂದು ಜಾಮೀನು ಮಂಜೂರುಗೊಳಿಸಿದ ಹೈಕೋರ್ಟ್ ಹೇಳಿದೆ.

ನ್ಯಾಯಾಧೀಶರಾದ ಸಿದ್ದಾರ್ಥ ಮೃದುಲ್ ಮತ್ತು ಅನೂಪ್ ಜೈರಾಮ್ ಭಂಭಾನಿ ಅವರಿದ್ದ ವಿಭಾಗೀಯ ಪೀಠ 'ಭಿನ್ನಾಭಿಪ್ರಾಯವನ್ನು ನಿಗ್ರಹಿಸುವ ಉತ್ಸುಕತೆಯಲ್ಲಿ, ಸಾಂವಿಧಾನಿಕವಾಗಿ ಖಾತರಿಗೊಳಿಸಿದ ಪ್ರತಿಭಟನೆ ನಡೆಸುವ ಹಕ್ಕು ಮತ್ತು ಭಯೋತ್ಪಾದಕ ಕೃತ್ಯಗಳ ನಡುವಿನ ಗೆರೆಯ ಕುರಿತ ತಿಳುವಳಿಕೆ ಕೇಂದ್ರ ಸರಕಾರದ ಮನಸ್ಸಿನಲ್ಲಿ ಮಸುಕಾದಂತೆ ಕಾಣಿಸುತ್ತಿದೆ ಎಂದು ಹೇಳದೆ ವಿಧಿಯಿಲ್ಲ. ಈ ಮನಸ್ಥಿತಿ ಹೆಚ್ಚಾದರೆ ಅದು ಪ್ರಜಾಪ್ರಭುತ್ವಕ್ಕೆ ಅತ್ಯಂತ ನಿರಾಸೆಯ ದಿನವಾಗಲಿದೆ ಎಂದು ಕೇಂದ್ರವನ್ನು ತರಾಟೆಗೆತ್ತಿಕೊಂಡಿತು.

ಕೇಂದ್ರದ ಅಥವಾ ಸಂಸತ್ತಿನ ಉಪಕ್ರಮಗಳಿಗೆ ವ್ಯಾಪಕ ವಿರೋಧವಿದ್ದಾಗ ಪ್ರಚೋದನಾತ್ಮಕ ಭಾಷಣ, ರಸ್ತೆ ತಡೆ ನಡೆಸುವುದು ಮತ್ತಿತರ ಕೃತ್ಯಗಳು ಅಸಹಜವಲ್ಲ. ಇಂತಹ ಪ್ರತಿಭಟನೆಗಳು ಶಾಂತರೀತಿಯಲ್ಲಿ ಅಹಿಂಸಾತ್ಮಕವಾಗಿ ನಡೆಯಬೇಕು ಎಂಬ ನಿರೀಕ್ಷೆಯಿದ್ದರೂ ಪ್ರತಿಭಟನಾಕಾರರು ಕಾನೂನಿನ ಪ್ರಕಾರ ಮಿತಿ ಮೀರಿ ವರ್ತಿಸುವುದೂ ಅಸಹಜವಲ್ಲ. ಇಲ್ಲಿ ಆರೋಪಿಗಳು ಈ ಮಿತಿಯನ್ನು ಮೀರಿದ್ದಾರೆ ಎಂದು ವಾದಿಸ ಬಹುದಾದರೂ, ಅವರ ಈ ನಡೆ ಯುಎಪಿಎ ಕಾಯ್ದೆಯಡಿ ವ್ಯಾಖ್ಯಾನಿಸಿದ 'ಭಯೋತ್ಪಾದಕ ಕೃತ್ಯ ಅಥವಾ ಷಡ್ಯಂತ್ರ ಅಥವಾ ಭಯೋತ್ಪಾದಕ ಕೃತ್ಯ ನಡೆಸುವುದಕ್ಕೆ ಪೀಠಿಕೆಯಾಗಿ ನಡೆಸಿದ ಕೃತ ಎಂದು ಪರಿಗಣಿಸಲಾಗದು. ಆದ್ದರಿಂದ 2020 ಸೆಪ್ಟೆಂಬರ್ 16ರಂದು ಯುಎಪಿಎ ಕಾಯ್ದೆಯ ಸೆಕ್ಷನ್ 15,17 ಮತ್ತು 18 ಸೆಕ್ಷನ್‌ನಡಿ ದಾಖಲಿಸಿದ ಆರೋಪಪಟ್ಟಿಯಲ್ಲಿರುವ ಅಂಶಗಳು ಮೇಲ್ನೋಟಕ್ಕೆ ಸತ್ಯವಲ್ಲ ಎಂದು ಕಂಡುಬಂದಿದೆ ಎಂದು ಹೇಳಿದ ಹೈಕೋರ್ಟ್, ತಲಾ 50,000 ರೂ. ಮೊತ್ತದ ಒಂದು ವೈಯಕ್ತಿಕ ಬಾಂಡ್, 2 ಜಾಮೀನು ಬಾಂಡ್ ಸಲ್ಲಿಸಬೇಕು, ಪಾಸ್‌ಪೋರ್ಟ್‌ಗಳನ್ನು ಒಪ್ಪಿಸಬೇಕು ಮುಂತಾದ ಶರತ್ತು ವಿಧಿಸಿ ಜಾಮೀನು ಮಂಜೂರುಗೊಳಿಸಿತು.

ಇದಕ್ಕೂ ಮುನ್ನ ಆಸಿಫ್ ಇಕ್ಬಾಲ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಐಪಿಸಿ ಸೆಕ್ಷನ್‌ನಡಿ ಅಪರಾಧ ಕೃತ್ಯ ಎಂದು ವ್ಯಾಖ್ಯಾನಿಸಿದ ಕೃತ್ಯಗಳನ್ನು ಭಯೋತ್ಪಾದಕ ಕೃತ್ಯಗಳೊಂದಿಗೆ ಸಮೀಕರಿಸಲಾಗದು. ಯಾವುದೇ ನಿರ್ದಿಷ್ಟ ಆರೋಪವಿಲ್ಲದ ಕೇವಲ ಶಬ್ದಾಡಂಬರದ ಪ್ರಕರಣಗಳಲ್ಲಿ ಕಾನೂನುಬಾಹಿರ ಕೃತ್ಯ ತಡೆ ಕಾಯ್ದೆಯನ್ನು ಅನ್ವಯಿಸಲಾಗದು ಎಂದು ಹೇಳಿ ಜಾಮೀನು ಮಂಜೂರುಗೊಳಿಸಿದೆ.

ಮೂವರೂ ತನಿಖಾಧಿಕಾರಿಗಳಿಗೆ ತಮ್ಮ ಮೊಬೈಲ್ ನಂಬರ್‌ ಒದಗಿಸಬೇಕು ಮತ್ತು ಫೋನ್ ಸ್ವಿಚ್ ಆಫ್ ಆಗದಂತೆ ನೋಡಿಕೊಳ್ಳಬೇಕು. ವಿಚಾರಣಾ ನ್ಯಾಯಾಲಯದ ದಾಖಲೆಯಲ್ಲಿರುವ ವಿಳಾಸದ ನಿವಾಸವನ್ನು ಬದಲಿಸುವುದಾದರೆ ತನಿಖಾಧಿಕಾರಿಗೆ ಮಾಹಿತಿ ನೀಡಬೇಕು. ಪಾಸ್‌ಪೋರ್ಟ್ ಒಪ್ಪಿಸಬೇಕು ಮತ್ತು ನ್ಯಾಯಾಲಯದ ಅನುಮತಿ ಪಡೆಯದೆ ವಿದೇಶಕ್ಕೆ ತೆರಳಬಾರದು. ಯಾವುದೇ ಸಾಕ್ಷಿಗಳನ್ನು ಸಂಪರ್ಕಿಸಲು ಯತ್ನಿಸಬಾರದು ಅಥವಾ ಅವರಿಗೆ ಬೆದರಿಕೆ ಒಡ್ಡಬಾರದು. ಸಾಕ್ಷ್ಯನಾಶಕ್ಕೆ ಪ್ರಯತ್ನಿಸಬಾರದು ಎಂದು ಷರತ್ತು ವಿಧಿಸಿದೆ.

ಆಸಿಫ್ ಷಡ್ಯಂತ್ರದ ರೂವಾರಿ ಎಂದು ಆರೋಪಪಟ್ಟಿಯಲ್ಲಿ ನಮೂದಿಸಿಲ್ಲ

ಆಸಿಫ್ ಇಕ್ವಾಲ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಆಸಿಫ್‌ ಇತರ ಪಿತೂರಿಗಾರರಿಗೆ ಮಾರ್ಗದರ್ಶಕನಾಗಿದ್ದ ಅಥವಾ ಈತ ಷಡ್ಯಂತ್ರದ ರೂವಾರಿ ಎಂದು ಆರೋಪಪಟ್ಟಿಯಲ್ಲಿ ನಮೂದಿಸಿಲ್ಲ ಎಂದು ಹೇಳಿದೆ. ಆಸಿಫ್ ಜಾಮಿಯಾ ಸಮನ್ವಯ ಸಮಿತಿ(ಜೆಸಿಸಿ)ಯನ್ನು ರೂಪಿಸಿದ್ದ ಅಥವಾ ಈತ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯನ್ನು ಸಂಘಟಿಸುವ ವ್ಯಾಟ್ಸ್‌ ಆ್ಯಪ್ ಗ್ರೂಪ್‌ನ ಅಡ್ಮಿನ್ ಆಗಿದ್ದ ಎಂದು ಎಲ್ಲೂ ಉಲ್ಲೇಖಿಸಿಲ್ಲ. ಇವರು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್ (ಎಸ್‌ಐಒ) ಮತ್ತು ಜೆಸಿಸಿಯ ಕಾರ್ಯಕರ್ತ ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ. ಆದರೆ ಇವು ಯಾವುದೂ ಯುಎಪಿಎ ಕಾಯ್ದೆಯಡಿ ಪಟ್ಟಿ ಮಾಡಿರುವ ನಿಷೇಧಿತ ಉಗ್ರ ಸಂಘಟನೆಗಳಲ್ಲ. ಜೆಸಿಸಿ ಎಂಬುದು ಸಂಘಟನೆಯಲ್ಲ, ಕೇವಲ ಪ್ರಾಸಂಗಿಕ ಸಮಿತಿ ಅಷ್ಟೇ ಎಂದು ನ್ಯಾಯಪೀಠ ಹೇಳಿದೆ.

ಮುಸ್ಲಿಮ್ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳೀಯ ಇಮಾಮ್‌ಗಳನ್ನು ಸಂಘಟಿಸುವ ಮತ್ತು ದಿಲ್ಲಿಯ ವಿವಿಧೆಡೆ ಪ್ರತಿಭಟನೆಗಳನ್ನು ಸಂಘಟಿಸಲು ನೆರವಾಗುವ ಕಾರ್ಯವನ್ನು ಆಸಿಫ್‌ಗೆ ವಹಿಸಲಾಗಿತ್ತು ಎಂಬ ಪೊಲೀಸರ ಆರೋಪವನ್ನು ತಳ್ಳಿಹಾಕಿದ ನ್ಯಾಯಪೀಠ, ಪ್ರತಿಭಟನೆ ಈಶಾನ್ಯ ದಿಲ್ಲಿಗೆ ಮಾತ್ರ ಸೀಮಿತವಾಗಿತ್ತು ಎಂದು ಹೇಳಿದೆ. ಅಲ್ಲದೆ, ಪ್ರತಿಭಟನೆಯು ಸಮುದಾಯದ ಮೇಲೆ ವ್ಯಾಪಕ ಪರಿಣಾಮ ಬೀರಿರುವುದರಿಂದ ಇದು ಭಯೋತ್ಪಾದನಾ ಕೃತ್ಯಕ್ಕೆ ಸಮವಾಗಿದೆ ಎಂದು ಹೇಳುವುದು ಸರಿಯಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಇಲ್ಲಿ ಆಸಿಫ್‌ನ ಒಂದು ಕೃತ್ಯವನ್ನು ಗಮನಿಸಲಾಗಿದೆ. ಆತ ಬೇರೊಬ್ಬರು ನೀಡಿದ ಸಿಮ್ ಕಾರ್ಡ್ ಅನ್ನು ಸಹ ಆರೋಪಿಗೆ ಹಸ್ತಾಂತರಿಸಿದ್ದಾನೆ. ಈ ಸಿಮ್‌ಕಾರ್ಡ್ ಬಳಸಿ ಸಹ ಆರೋಪಿ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಸಂದೇಶ ರವಾನಿಸಿದ್ದಾನೆ. ಈ ಆರೋಪದ ಹೊರತುಪಡಿಸಿ ಇತರ ಯಾವುದೇ ಆರೋಪ ನ್ಯಾಯಾಲಯದ ಗ್ರಹಿಕೆಗೆ ಬಂದಿಲ್ಲ ಎಂದು ನ್ಯಾಯಪೀಠ ಹೇಳಿದೆ.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...