ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣ ಕುರಿತಂತೆ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಕುರಿತು ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಶನಿವಾರ ಪರಿಶೀಲನೆ ನಡೆಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್ ಭಟ್, ಡಿಹೆಚ್ಓ ಡಾ. ಸುಧೀರ್ ಚಂಧ್ರ ಸೂಢಾ ಅವರೊಂದಿಗೆ ಜಿಲ್ಲೆಯಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಪಡೆದ ಸಂಸದೆ ಶೋಭಾ ಕರಂದ್ಲಾಜೆ , ತುರ್ತು ಸಂದರ್ಭದಲ್ಲಿ ಕರೋನಾ ಶಂಕಿತರನ್ನು ಮತ್ತು ಪೀಡಿತರನ್ನು ದಾಖಲಿಸಲು ಸೂಕ್ತ ಸ್ಥಳಾವಕಾಶವನ್ನು ಗುರುತಿಸುವಂತೆ ಸೂಚಿಸಿದರು, ಅಲ್ಲದೇ ಮಣಿಪಾಲದ ಕೆಎಂಸಿ ಮತ್ತು ಉದ್ಯಾವರದ ಆಯುರ್ವೇದ ಕಾಲೇಜಿನಲ್ಲಿ ಅಗತ್ಯ ಕೊಠಡಿ ಸಿದ್ದಪಡಿಸಿಟ್ಟುಕೊಳ್ಳುವಂತೆ ತಿಳಿಸಿದರು.
ಜಿಲ್ಲೆಯಲ್ಲಿ ಇದುವರೆಗೆ ಕೊರೋನ ಶಂಕಿತರು, ಹೋ ಕ್ವಾರಂಟೈನ್ ನಲ್ಲಿದ್ದವರು ಮತ್ತು ಶಂಕಿತ ಕೊರೋನ ರೋಗಿಗಳ ವೈದ್ಯಕೀಯ ವರದಿಗಳ ಬಗ್ಗೆ ಸಂಸದರು ಪರಿಶೀಲನೆ ನೆಡೆಸಿ, ತುರ್ತು ಸಂದರ್ಭದಲ್ಲಿ ಅಗತ್ಯವಿರುವ ಎಲ್ಲಾ ಸಾಮಗ್ರಿಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ದಾಸ್ತಾನು ಇಡುವಂತೆ ಹಾಗೂ ಶೀಘ್ರದಲ್ಲಿ ಸ್ಪಂದಿಸುವಂತೆ ತಿಳಿಸಿದರು.
ನಂತರ ಉಡುಪಿಯ ಅಜ್ಜರಕಾಡು ನಲ್ಲಿ ಕೊರೋನಾ ಶಂಕಿತರ ದಾಖಲಾತಿಗೆ ಸಿದ್ದವಾಗಿಟ್ಟಿರುವ ಕೇಂದ್ರಕ್ಕೆ ಭೇಟಿ ನೀಡಿದ ಸಂಸದರು, ಕೇಂದ್ರದ ಪರಿಶೀಲನೆ ನಡೆಸಿದರು.
ಶಾಸಕ ರಘುಪತಿ ಭಟ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು , ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಪ್ರಶಾಂತ್ ಭಟ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ವಾಸುದೆವ ಉಪಾಧ್ಯಾಯ ಉಪಸ್ಥಿತರಿದ್ದರು.