ಬೆಂಗಳೂರು: ಮುಂದಿನ ವರ್ಷ ಜೂನ್ ತಿಂಗಳಿನೊಳಗೆ ಗುಡಿಸಲಿನಲ್ಲಿರುವ ಕುಟುಂಬಗಳಿಗೆ ಮನೆಗಳನ್ನು ನಿರ್ಮಾಣ ಮಾಡದೇ ಹೋದಲ್ಲಿ ಸಚಿವ ಸ್ಥಾನ ತ್ಯಾಗ ಮಾಡೋದಾಗಿ ವಸತಿ ಸಚಿವ ಸೋಮಣ್ಣ ಅವರು ಹೇಳಿದ್ದಾರೆ.
ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಸರ್ಕಾರಿ ಭೂಮಿ ಮಂಜೂರಾತಿ ಹಾಗೂ ಹಸ್ತಾಂತರ ಕುರಿತು ಆಗಿರುವ ಪ್ರಗತಿ ಪರಿಶೀಲನೆ ನಡೆಸಿದ ಮಾತನಾಡಿದ ಅವರು, ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿನ ಬಡವರಿಗೆ ಮನೆ ನೀಡುವ ಒಂದು ಲಕ್ಷ ಮನೆ ನಿರ್ಮಾಣ ಯೋಜನೆಯಡಿ 43 ಸಾವಿರ ಮನೆ ನಿರ್ಮಾಣ ನಡೆಯುತ್ತಿದ್ದು, ಜೂನ್ ಒಳಗಾಗಿ 25 ಸಾವಿರ ಮನೆ ವಿತರಿಸಲಾಗುತ್ತದೆ ಎಂದು ಹೇಳಿದ್ದಾರೆ.
ಒಟ್ಟಾರೆ ಮನೆ ನಿರ್ಮಾಣಕ್ಕೆ 900 ಎಕರೆ ಭೂಮಿ ದೊರೆತಿದೆ. ಕಂದಾಯ ಸಚಿವರ ಜೊತೆಗೂ ಈ ಸಂಬಂಧ ಮಾತುಕತೆ ನಡೆಸಲಾಗಿದ್ದು ಬಡವರು ಮತ್ತು ಗುಡಿಸಲಿನಲ್ಲಿ ವಾಸಿಸುತ್ತಿರುವರಿಗೆ ಮನೆ ನೀಡಲಾಗುವುದು ಎಂದಿದ್ದಾರೆ.
ಮುಂದಿನ ಜೂನ್ ಒಳಗೆ 25 ಸಾವಿರ ಮನೆಗಳನ್ನು ನಿರ್ಮಾಣ ಮಾಡದಿದ್ದರೆ ಸಚಿವ ಸ್ಥಾನದಲ್ಲಿರಲಾರೆ. ಅಧಿಕಾರಿಗಳು ಆ ಕೆಲಸ ಮಾಡದಿದ್ದರೆ ಅದರ ಹೊಣೆ ನಾನೇ ಹೊರುತ್ತೇನೆಂದು ಹೇಳಿದ್ದಾರೆ