ಮೀಸಲಾತಿ ಭಿಕ್ಷೆಯಲ್ಲ, ಸಂವಿಧಾನಬದ್ಧ ಹಕ್ಕು ನ್ಯಾ.ಹೆಚ್.ಎನ್.ನಾಗಮೋಹನದಾಸ್

Source: so news | Published on 11th December 2019, 12:23 AM | State News | Don't Miss |


ಕಲಬುರಗಿ: ಮೀಸಲಾತಿ ಭಿಕ್ಷೆಯಲ್ಲ, ಅದು ಸಂವಿಧಾನಬದ್ಧ ಹಕ್ಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಕ್ಕೆ ಜನಸಂಖ್ಯೆ ಅನುಗುಣವಾಗಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಹೆಚ್ಚಿಸುವ ಕುರಿತು ವೈಜ್ಣಾನಿಕ ಮತ್ತು ತಾತ್ವಿಕ ನೆಲೆಗಟ್ಟಿನ ಮೇಲೆ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನದಾಸ್ ಅವರು ತಿಳಿಸಿದರು.

ಮಂಗಳವಾರ ಕಲಬುರಗಿ ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಕ್ಕೆ ಜನಸಂಖ್ಯೆ ಅನುಗುಣವಾಗಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಹೆಚ್ಚಿಸುವ ಕುರಿತು ಕಲಬುರಗಿ ವಿಭಾಗ ಮಟ್ಟದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿದ ಅವರು ಸಾರ್ವಜನಿಕರ ಅಹವಾಲು ಆಲಿಸುವ ಮುನ್ನ ಸಭೆ ಉದ್ದೇಶಿಸಿ ಮಾತನಾಡಿದರು.

ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಕ್ಕೆ ಜನಸಂಖ್ಯೆ ಅನುಗುಣವಾಗಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಹೆಚ್ಚಿಸುವ ಕುರಿತು ತಮ್ಮ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಿದೆ. ಈ ನಿಟ್ಟಿನಲ್ಲಿ ಆಯೋಗವು ಕಳೆದ ಒಂದು ತಿಂಗಳಿನಿಂದ ಸಾರ್ವಜನಿಕರಿಂದ ಅಭಿಪ್ರಾಯ ಪಡೆಯಲಾಗುತ್ತಿದೆ. ಸರ್ಕರದ ವಿವಿಧ ಇಲಾಖೆಗಳಿಂದಲೂ ಸಹ ಈ ವರ್ಗದ ಪ್ರಾತಿನಿಧ್ಯ ಕುರಿತು ಮಾಹಿತಿ ಸಂಗ್ರಹಣೆಗೆ ಪತ್ರ ಬರೆಯಲಾಗಿದೆ. ಇದರ ಜೊತೆಗೆ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ಸಮುದಾಯದ ಗಣ್ಯರು, ಚಿಂತಕರು, ನೌಕರರ ಬಂಧುಗಳು, ವಿವಿಧ ಸಂಘ-ಸಂಸ್ಥೆಗಳು ಪದಾಧಿಕಾರಿಗಳು ಹಾಗೂ ಸಾರ್ವಜನಿಕರೊಂದಿಗೆ ಮುಕ್ತವಾಗಿ ಚರ್ಚಿಸಿ ಅಗತ್ಯ ಸಲಹೆ ಪಡೆಯಲು ವಿಭಾಗ ಮಟ್ಟದ ಸಮಾಲೋಚನೆ ನಡೆಸಲಾಗುತ್ತಿದೆ. ಆರಂಭದಲ್ಲಿ ದಲಿತ ಜಾಗೃತ ನೆಲ ಕಲಬುರಗಿಯಿಂದಲೆ ಪ್ರಾರಂಭಿಸಿದ್ದೇವೆ ಎಂದರು.

ಭಾರತ ವಿವಿಧ ಧರ್ಮಗಳ ಮತ್ತು ಸುಮಾರು 4630 ಜಾತಿಗಳ ತವರೂರಾಗಿದೆ. ಜಾತಿಗಳ ಮಧ್ಯೆ ರಾಜಕೀಯ, ಸಾಂಸ್ಕøತಿಕ, ಸಾಮಾಜಿಕ ಅಸಮಾನತೆ ಇರುವುದನ್ನು ಒಪ್ಪಿಕೊಳ್ಳಲೇಬೇಕು. ಬುದ್ಧ, ಬಸವ, ಗಾಂಧಿ, ಅಂಬೇಡ್ಕರರು ಇದನ್ನು ಹೋಗಲಾಡಿಸಲು ತಮ್ಮ ಜೀವನದುದ್ದಕ್ಕೂ ಶ್ರಮಿಸಿದ್ದನ್ನು ಯಾರುವ ಮರೆಯುವಂತಿಲ್ಲ. ಕೊನೆಯದಾಗಿ ಡಾ.ಬಿ.ಆರ್.ಅಂಬೇಡ್ಕರರು ಸಂವಿಧಾನದಲ್ಲಿ ದಮನಿತ ಸಮುದಾಯವನ್ನು ಮೇಲಕೆತ್ತಲು ಮೀಸಲಾತಿ ವ್ಯವಸ್ಥೆ ಕಲ್ಪಿಸುವ ಮೂಲಕ ಸಾಮಾಜಿಕ ಸಮಾನತೆ ಸಾರಿದ್ದಾರೆ ಎಂದರು.

ಮೀಸಲಾತಿ ವ್ಯವಸ್ಥೆಯಿಂದಲೆ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡ ಸಮುದಾಯವು ಸ್ವಾತಂತ್ಯದ ನಂತರ ಸ್ವಲ್ಪ ಮಟ್ಟಿಗಾದರು ಅಭಿವೃದ್ಧಿ ಕಂಡಿದ್ದಾರೆ ಎಂದರೆ ತಪ್ಪಾಗಲಿಕಿಲ್ಲ. ಎಲ್ಲಾ ಕ್ಷೇತ್ರಗಳಲ್ಲಿ ಈ ಸಮುದಾಯ ಅಭಿವೃದ್ಧಿ ಕಾಣಬೇಕಾಗಿದೆ. ಮೀಸಲಾತಿ ವ್ಯವಸ್ಥೆ ವಿರುದ್ಧ ಹಲವಾರು ಜನರು ಮಾತನಾಡುತ್ತಾರೆ. ಅವರೆಲ್ಲರಿಗೂ ಮೀಸಲಾತಿ ಯಾತಕ್ಕೆ ಬೇಕು ಎಂಬುದರ ಬಗ್ಗೆ ವಿವರವಾಗಿ ತಿಳಿಸಲು ಆಯೋಗಕ್ಕೆ ಸಾರ್ವಜನಿಕರು ತಮ್ಮ ಮುಕ್ತ ಅಭಿಪ್ರಾಯವನ್ನು ಸಲ್ಲಿಸಬಹುದಾಗಿದೆ. ಎಲ್ಲರ ಅಭಿಪ್ರಾಯವನ್ನು ಸಂಗ್ರಹಿಸಿ ಸರ್ಕಾರಕ್ಕೆ ಆಯೋಗ ವರದಿ ಸಲ್ಲಿಸಲಿದೆ ಎಂದರು.

ಆಯೋಗದ ಹಿರಿಯ ಸಂಶೋಧನಾ ಅಧಿಕಾರಿ ಅನಂತ ನಾಯಕ್ ಎನ್. ಮಾತನಾಡಿ ಮೈಸೂರು ಸಂಸ್ಥಾನದಲ್ಲಿ ಸಾಮಾಜಿಕವಾಗಿ ಹಿಂದುಳಿದ ಅಸ್ಪ್ರುಶ್ಯ ಸಮುದಾಯವನ್ನು ಸಮಾನತೆ ಕಾಣಲು 1921ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರು “ಮಿಲ್ಲರ್ ಆಯೋಗ” ರಚಿಸುವ ಮೂಲಕ ಪ್ರಥಮವಾಗಿ ಮೀಸಲಾತಿ ವ್ಯವಸ್ಥೆ ಜಾರಿಗೆ ತಂದರು. ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದಲ್ಲಿ ಮೀಸಲಾತಿ ಕಲ್ಪಿಸುವ ಮೂಲಕ ಸಾವಿರಾರು ವರ್ಷಗಳಿಂದ ತಮ್ಮ ಹಕ್ಕುಗಳಿಂದ ವಂಚಿತವಾಗಿದ್ದ ಸಮುದಾಯಕ್ಕೆ ನ್ಯಾಯ ಕೊಡಿಸಿದರು. 1958ರಿಂದ ಪರಿಶಿಷ್ಠ ಜಾತಿ ಶೇ.15 ಮತ್ತು ಪರಿಶಿಷ್ಠ ಪಂಗಡ ಶೇ.3ರಷ್ಟು ಮೀಸಲಾತಿ ಪಡೆಯುತ್ತಿವೆ. ಇದನ್ನೆ ಎಲ್ಲಾ ರಾಜ್ಯ ಸರ್ಕರಗಳು ಪಾಲಿಸುತ್ತಿವೆ. ಆದರೆ 1958ರ ಜನಸಂಖ್ಯೆಗೂ ಇಂದಿನ ಜನಸಂಖ್ಯೆಗೂ ತುಂಬಾ ವ್ಯತ್ಯಾಸವಿದೆ. 1958ರಲ್ಲಿ ಎಸ್.ಸಿ. ಪಟ್ಟಿಯಲ್ಲಿ ಬೆರಳಣಿಕೆಯಷ್ಟಿದ್ದ ಜಾತಿಗಳು ಇಂದು 101 ಉಪಜಾತಿ ಸೇರಿವೆ. ಅದಕ್ಕನುಗುಣವಾಗಿ ಮೀಸಲಾತಿ ಹೆಚ್ಚಳದ ಕೂಗು ಕೇಳಿಬಂದಿದೆ ಎಂದರು.

ಆಯೋಗದ ಹಿರಿಯ ಸಂಶೋಧನಾ ಅಧಿಕಾರಿ ಡಾ.ಚಂದ್ರಶೇಖರ್, ಸಂಶೋಧನಾ ಅಧಿಕಾರಿ ರಾಜಶೇಖರ ಮೂರ್ತಿ, ಅಯೋಗದ ಸದಸ್ಯ ಕಾರ್ಯದರ್ಶಿ ಸಾಬಿರ ಅಹ್ಮದ ಮುಲ್ಲಾ ಇದ್ದರು. ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಚ್.ಸತೀಶ ಸ್ವಾಗತಿಸಿದರು.

ಕಲಬುರಗಿ ವಿಭಾಗದ ವಿವಿಧ ಜಿಲ್ಲೆಗಳಿಂದ ಅಗಮಿಸಿದ ಎಸ್.ಸಿ./ಎಸ್.ಟಿ. ಸಮುದಾಯದ ಚಿಂತಕರು, ಸಂಘಟನೆಗಳ ಪ್ರತಿನಿಧಿಗಳು, ಮುಖಂಡರುಗಳು, ನೌಕರ ಬಂಧುಗಳು ಆಯೋಗದ ಮುಂದೆ ತಮ್ಮ ಅಹವಾಲು ಮಂಡಿಸಿದ್ದರು.

Read These Next

ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದಲ್ಲಿ ಬಿಜೆಪಿ ಶಾಮಿಲು; ತೀರ್ಥಹಳ್ಳಿಯಲ್ಲಿ ಬಿಜೆಪಿ ಸದಸ್ಯನನ್ನು ಬಂಧಿಸಿದ NIA

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (NIA) ...