ಕಾರವಾರ: ಚೀನಾ ಮತ್ತು ಇತರ ದೇಶಗಳಿಂದ ವಿವಿಧ ಬಿತ್ತನೆ ಬೀಜಗಳನ್ನು ಬೇರೆ ಬೇರೆ ದೇಶಗಳಿಗೆ ಕಳಿಸಲಾಗುತ್ತಿದೆ ಎಂಬ ಮಾಹಿತಿ ಹರಿದಾಡುತ್ತಿದ್ದು, ಒಂದು ವೇಳೆ ಇಂತಹ ಬಿತ್ತನೆ ಬೀಜದ ಪೊಟ್ಟಣಗಳ ಪಾರ್ಸಲ್ ಬಂದರೆ ರೈತರು ವಾಪಸ್ ಕಳುಹಿಸಬೇಕು, ಒಂದು ಪಕ್ಷ ಸ್ವೀಕರಿಸಿದರೂ ಕೂಡ ಪೊಟ್ಟಣದ ಸಮೇತ ಅದನ್ನು ಸುಟ್ಟು ಹಾಕಬೇಕು ಇಲ್ಲವೇ ಸಮೀಪದ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ಜಿಲ್ಲಾ ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಬೀಜಗಳು ಕೀಟ ಮತ್ತು ರೋಗಾಣುಗಳಿಂದ ಕೂಡಿದ್ದು, ಅವುಗಳನ್ನು ಬಿತ್ತನೆ ಮಾಡಿದರೆ ತಿಂಗಳಲ್ಲಿಯೇ ಬೆಳೆ ಸಂಪೂರ್ಣ ನಾಶವಾಗುತ್ತದೆ. ಆದುದರಿಂದ ಅನಾಮಧೇಯರಿಂದ ಯಾವುದೇ ಬೀಜ ಬಂದರೆ ರೈತರು ಸ್ವೀಕರಿಸಬಾರದು. ಈಗಾಗಲೇ ಇಂಗ್ಲೆಂಡ, ಕೆನಡಾ ದೇಶದ ಅನೇಕ ರೈತರಿಗೆ ಇಂತಹ ಬೀಜಗಳನ್ನು ಕಳುಸಲಾಗಿದೆ. ನಾನಾ ತಳಿಗಳ ಬಿತ್ತನೆ ಬೀಜದ ಈ ಪೊಟ್ಟಣಗಳನ್ನು ಯಾರು ಎಲ್ಲಿಂದ ಕಳುಹಿಸುತ್ತಾರೆ ಎಂಬ ವಿವರಗಳೇ ಇರುವುದಿಲ್ಲ. ಅಲ್ಲದೇ ಈ ಬೀಜಗಳ ಬಳಕೆಯಿಂದ ಕೃಷಿಯ ಮೇಲೆ ವ್ಯತಿರಿಕ್ತ ಪರಿಣಾಮವಾಗಲಿದೆ. ಕ್ರಮೇಣ ಭೂಮಿಯೇ ಬಂಜರಾಗುವ ಸಾಧ್ಯತೆ ಇರುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕ ಮಾಹಿತಿ ನೀಡಿದ್ದಾರೆ.