ಭಟ್ಕಳ: ನವೀಕರಿಸಲಾಗದ ಇಂಧನಗಳನ್ನು ಮಿತವಾಗಿ ಬಳಸಬೇಕು. ಇಂಧನಗಳ ದುರುಪಯೋಗ ಹೆಚ್ಚುತ್ತಿದ್ದು ಪರಿಸ್ಥಿತಿ ಹೀಗೆ ಮುಂದುವರೆದರೆ ಮುಂದೊಂದು ದಿನ ಆತಂಕದ ಸ್ಥಿತಿಯನ್ನು ಅನುಭವಿಸಬೇಕಾಗುತ್ತದೆ ಎಂದು ಐಒಸಿಲ್ನ ಬೆಳಗಾವಿಯ ಮುಖ್ಯ ಪ್ರದೇಶ ವ್ಯವಸ್ಥಾಪಕ ವಿ ರಮೇಶ ಬಾಬು ಹೇಳಿದರು.
ಅವರು ಭಟ್ಕಳ ತಾಲೂಕಿನ ಬೆಳಕೆ ಪ್ರೌಢಶಾಲೆಯಲ್ಲಿ ಇಂಡಿಯನ್ ಆಯಿಲ್ ಕಾರ್ಪರೇಶನ್, ರಂಜನ್ ಇಂಡೇನ್ ಎಜೆನ್ಸಿ, ರಫಾತ್ ಎಜೆನ್ಸಿ, ಪತ್ರಕರ್ತರ ಸಂಘದ ವತಿಯಿಂದ ವಿದ್ಯಾರ್ಥಿಗಳಿಗಾಗಿ ನಡೆದ ಸಕ್ಷಮ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪೆಟ್ರೋಲ್, ಡಿಸೇಲ್ ಸೇರದಂತೆ ನೈಸರ್ಗಿಕ ಇಂಧನಗಳನ್ನು ಇಂದು ಮೀತಿಯಲ್ಲದೆ ಬಳಸಲಾಗುತ್ತದೆ. ಸುಲಭವಾಗಿ ಸಿಕ್ಕುತ್ತಿರುವ ಇಂಧನಗಳ ದುರುಪಯೋಗ ಹೆಚ್ಚುತ್ತಿದೆ. ಇದರಿಂದ ಮುಂದಿನ ಕೆಲವು ವರ್ಷಗಳಲ್ಲಿ ಇದೆಲ್ಲಾ ಖಾಲಿಯಾಗಿ ಆತಂಕದ ಸ್ಥಿತಿ ನಿರ್ಮಾಣವಾಗಲಿದೆ. ಇಂದಿನ ಯುವಪೀಳಿಗೆ ಪರ್ಯಾಯ ಮಾರ್ಗದತ್ತ ಯೋಚಿಸಬೇಕಿದೆ. ಪ್ರೌಢಾವ್ಯಸ್ಥೆಯಲ್ಲಿರುವ ವಿದ್ಯಾರ್ಥಿಗಳು ನಮ್ಮಿಂದ ತಿಳಿದ ಮಾಹಿತಿಯನ್ನು ಪಾಲಕರು, ನೆರೆಹೊರೆಯವರೊಂದಿಗೆ ಹಂಚಿಕೊಂಡು ಇದರ ಕುರಿತು ಮಾಹಿತಿ ನೀಡಬೇಕು ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪತ್ರಕರ್ತ ಸಂಘದ ಅಧ್ಯಕ್ಷ ರಾಮಚಂದ್ರ ಕಿಣಿ ಮಾತನಾಡಿದರು. ರಂಜನ್ ಇಂಡೇನ ಎಜೆನ್ಸಿಯ ಶಿವಾನಿ ಶಾಂತರಾಮ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.
ರಂಜನ್ ಇಂಡೇನ್ ಏಜನ್ಸಿಯ ಶಿವಾನಿ ಶಾಂತಾರಾಮ ವಿದ್ಯಾರ್ಥಿಗಳಿಗೆ 70 ಜೆರ್ಸಿಗಳನ್ನು ದೇಣಿಗೆಯಾಗಿ ನೀಡಿದರು. ಪ್ರಭಂದ ಸ್ಪರ್ಧೆ, ಚಿತ್ರಕಲೆ, ರಸಪ್ರಶ್ನೆಯಲ್ಲಿ ವಿಜೇತರಾದ ವಿದ್ಯಾಂಜಲಿ ಪಬ್ಲಿಕ್ ಸ್ಕೂಲ್, ವಿದ್ಯಾಭಾರತಿ ಇಂಗ್ಲೀಷ ಮಿಡಿಯಮ್ ಶಾಲೆ, ಬೆಳಕೆ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಜಿಲ್ಲಾಮಟ್ಟದ ಅತ್ಯುತ್ತಮ್ ಶಿಕ್ಷಕಿ ಪ್ರಶಸ್ತಿ ಪಡೆದ ರೇಷ್ಮಾ ನಾಯಕ ಅವರನ್ನು ಗೌರವಿಸಲಾಯಿತು.
ಶಿಕ್ಷಕ ಎನ್ಜಿ ಗೌಡ, ಪ್ರಕಾಶ ಶಿರಾಲಿ ಕಾರ್ಯಕ್ರಮ ನಿರ್ವಹಿಸಿದರೆ, ಶಾಲೆಯ ಮುಖ್ಯೋಪಾಧ್ಯಾಯಿನಿ ಭಾರತಿ ಶ್ಯಾನಭಾಗ ವಂದಿಸಿದರು.