ಭಟ್ಕಳ: 5 ವರ್ಷದ ನಂತರ ಭಟ್ಕಳದಲ್ಲಿ ಮತ್ತೆ ವಾಡಿಕೆ ದಾಟಿದ ಮಳೆ !
ಭಟ್ಕಳ: ಜಿಲ್ಲೆಯ ಚಿರಾಪುಂಜಿ ಎಂದೇ ಕರೆಯಿಸಿಕೊಳ್ಳುವ ಭಟ್ಕಳದಲ್ಲಿ ಕಳೆದ ಒಂದೆರಡು ತಿಂಗಳುಗಳಿಂದ ಒಂದು ದಿನವೂ ಬಿಡುವು ನೀಡದಂತೆ ಮಳೆ ಸುರಿಯುತ್ತಿದ್ದು, ಸೆಪ್ಟೆಂಬರ್ ಮಾಸದ ಆರಂಭದಲ್ಲಿಯೇ ವಾಡಿಕೆ ಮಳೆಯ ಪ್ರಮಾಣ 4172.1ಮಿಮೀ.ನ್ನು ದಾಟಿದೆ.
ಮಂಗಳವಾರ ಬೆಳಿಗ್ಗೆ 82ಮಿಮೀ ಮಳೆ ದಾಖಲಾಗಿದ್ದು, ಒಟ್ಟೂ ಮಳೆಯ ಪ್ರಮಾಣ 4243ಮಿಮೀ.ಗೆ ಏರಿಕೆ ಕಂಡಿದೆ. ನಾವು ಕಳೆದ 10 ವರ್ಷಗಳ ಮಳೆಯ ಲೆಕ್ಕವನ್ನು ನೋಡಿದರೆ ಭಟ್ಕಳದಲ್ಲಿ ಮಳೆಯ ಪ್ರಮಾಣ 80%ಗಿಂತ ಕಡಿಮೆಯಾಗಿಲ್ಲ. ವಿಶೇಷ ಎಂದರೆ 4 ಬಾರಿ ವಾಡಿಕೆ ಮಳೆಯ ಪ್ರಮಾಣವನ್ನೂ ಮೀರಿ 5000ಮಿಮೀ. ಆಸುಪಾಸಿಗೆ ಬಂದು ನಿಂತಿದೆ. ಮಳೆಯ ಚಿತ್ರಣವನ್ನು ಗಮನಿಸುವುದಾದರೆ 2009ರಲ್ಲಿ 4964.1ಮಿಮೀ, 2010ರಲ್ಲಿ 5258.8ಮೀಮೀ, 2011ರಲ್ಲಿ 4523.6ಮಿಮೀ., 2012ರಲ್ಲಿ 3430ಮಿಮೀ, 2013ರಲ್ಲಿ 4918.2ಮಿಮೀ., 2014ರಲ್ಲಿ 3654.2ಮಿಮೀ., 2015ರಲ್ಲಿ 3462ಮಿಮೀ., 2016ರಲ್ಲಿ 3422.7ಮಿಮೀ, 2017ರಲ್ಲಿ 3903.4ಮಿಮೀ. ಮಳೆ ಬಿದ್ದಿದೆ. 2018ರಲ್ಲಿ ಮಳೆ 3600ಮಿಮೀ.ಗೂ ಅಧಿಕ ಮಳೆ ದಾಖಲಾಗಿದೆ. ಈ ವರ್ಷ ಇನ್ನೂ ಒಂದು ತಿಂಗಳ ಮಳೆಗಾಲ ಬಾಕಿ ಉಳಿದಿದೆ. ವಿಶೇಷ ಎಂದರೆ ಈ ಮಳೆಗಾಲದಲ್ಲಿ 6 ಬಾರಿ 100ಮೀ.ಗೂ ಅಧಿಕ, 2 ಬಾರಿ 200ಮೀಮೀ.ಗೂ ಅಧಿಕ ಹಾಗೂ 23 ಬಾರಿ 50ಮಿಮೀ.ಗೂ ಅಧಿಕ ಮಳೆ ಸುರಿದಿದೆ. ಅಲ್ಲದೇ ಈ ವರ್ಷದ ಮಳೆ ಅಕ್ಟೋಬರ್ ತಿಂಗಳವರೆಗೂ ಮುಂದುವರೆಯುವ ಬಗ್ಗೆ ಲೆಕ್ಕ ಹಾಕಲಾಗುತ್ತಿದ್ದು, ಮಳೆಯ ಹೊಸ ದಾಖಲೆ ಸೃಷ್ಟಿಯಾಗುವ ಸಾಧ್ಯತೆ ಇದೆ.
ಭಟ್ಕಳದಲ್ಲಿ 5 ವರ್ಷದ ನಂತರ ಈ ಬಾರಿ ಮಳೆ ವಾಡಿಕೆ ಮಳೆಯನ್ನು ಹಿಂದಿಕ್ಕಿದೆ. ಈ ಮಳೆಗಾಲದಲ್ಲಿ ಇಷ್ಟರಲ್ಲಾಗಲೇ 6 ಬಾರಿ 100ಮೀ.ಗೂ ಅಧಿಕ, 2 ಬಾರಿ 200ಮೀಮೀ.ಗೂ ಅಧಿಕ ಹಾಗೂ 23 ಬಾರಿ 50ಮಿಮೀ.ಗೂ ಅಧಿಕ ಮಳೆ ಸುರಿದಿದೆ. ಅಲ್ಲದೇ ಈ ವರ್ಷದ ಮಳೆ ಅಕ್ಟೋಬರ್ ತಿಂಗಳವರೆಗೂ ಮುಂದುವರೆಯುವ ಬಗ್ಗೆ ಲೆಕ್ಕ ಹಾಕಲಾಗುತ್ತಿದೆ. |
ಪಟ್ಟಣಕ್ಕೂ ಕಾಲಿಟ್ಟ ಹಾನಿ: ಈ ಹಿಂದೆ ಮಳೆ ಹಾನಿ ಗ್ರಾಮೀಣ ಭಾಗದಲ್ಲಿ ಸಂಭವಿಸಿರುವುದೇ ಹೆಚ್ಚು. ಈ ಬಾರಿಯೂ ಗ್ರಾಮೀಣ ಭಾಗದ ಹೆಚ್ಚಿನ ರಸ್ತೆಗಳು ಸಂಪೂರ್ಣವಾಗಿ ಕೆಸರು ಗುಂಡಿಯಾಗಿ ಪರಿಣಮಿಸಿದೆ. ದುರಸ್ತಿಯ ಹೆಸರಿನಲ್ಲಿ ಹಾಕುವ ಕಲ್ಲು, ಮಣ್ಣು, ಡಾಂಬರು ಪುಡಿಗಳೆಲ್ಲ ದಿನಬೆಳಗಾಗುವುದರ ಒಳಗಾಗಿ ಮೇಲೆದ್ದು, ಪಾದಾಚಾರಿಗಳು ಮಾತ್ರವಲ್ಲ, ವಾಹನಗಳನ್ನೂ ಗೋಳುಹೋಯ್ದುಕೊಳ್ಳುತ್ತಿವೆ. ಆದರೆ ಈ ವರ್ಷದ ಮಳೆಗಾಲ ಭಟ್ಕಳ ಪುರಸಭಾ ವ್ಯಾಪ್ತಿಯನ್ನು ಇನ್ನಿಲ್ಲದಂತೆ ತಟ್ಟಿದೆ. ವಾರದವರೆಗೂ ಹೆದ್ದಾರಿಯ ಇಕ್ಕೆಲಗಳ ಹಲವಾರು ಮನೆಗಳು ನೀರಿನಲ್ಲಿಯೇ ಕಳೆಯ ಬೇಕಾದ ಸ್ಥಿತಿಯನ್ನು ಎದುರಿಸಿವೆ. ಪ್ರತಿ ವರ್ಷದಂತೆ ಈ ವರ್ಷದ ಮಳೆಗಾಲದಲ್ಲಿಯೂ ಸಂಶುದ್ದೀನ್ ಸರ್ಕಲ್ ಮತ್ತು ರಂಗಿಕಟ್ಟೆ ಹೆದ್ದಾರಿ ಭಾಗದಲ್ಲಿ ಜನರು ತಮ್ಮ ವಾಹನವನ್ನು ನೀರಿನಲ್ಲಿಯೇ ಓಡಿಸಿ ದಣಿವಾದರು.
ಮಳೆಯಲ್ಲಿ ನೆನೆದ ಹಬ್ಬ: ಮಳೆಯ ಆಕ್ರಮಣಕ್ಕೆ ಈ ವರ್ಷಾರಂಭದ ಹಬ್ಬ, ಉತ್ಸವಗಳು ತುತ್ತಾದವು. ಇಲ್ಲಿನ ಮಾರಿಹಬ್ಬ, ಶ್ರೀಕೃಷ್ಣ ಜನ್ಮಾಷ್ಠಮಿ, ನಾಗರಪಂಚಮಿ, ಗಣೇಶೋತ್ಸವ, ರಮಜಾನ್, ಬಕ್ರೀದ್ ಎಲ್ಲ ಹಬ್ಬಗಳಿಗೂ ವರುಣನ ಕಾಟ ಮೀತಿ ಮೀರಿತು. ಮೊದಲೇ ಮಳೆಯಿಂದಾಗಿ ಕೃಷಿ ಮತ್ತು ಮೀನುಗಾರಿಕೆ ತತ್ತರಿಸಿ ಹೋಗಿದ್ದು, ಉದ್ಯೋಗ ನಷ್ಟದಿಂದ ಜನರು ಹಬ್ಬಹರಿದಿನವನ್ನೂ ಕಳೆದುಕೊಂಡು ಆಗಸದತ್ತ ಮುಖ ಮಾಡಿ ಕುಳಿತುಕೊಂಡಿದ್ದಾರೆ.