ಭಟ್ಕಳ: ೨೦೧೬-೧೭ನೇ ಸಾಲಿನ ಪ್ರತಿಷ್ಠಿತ ‘ರಾಬಿತಾ ಬೆಸ್ಟ್ ಟೀಚರ್ಸ್’ ಪುರಸ್ಕಾರಕ್ಕೆ ಶಮ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಮುಹಮ್ಮದ್ ರಝಾ ಮಾನ್ವಿ ಭಾಜನರಾಗಿದ್ದಾರೆ.
ಶುಕ್ರವಾರ ಸಂಜೆ ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲಾ ಮೈದಾನದಲ್ಲಿ ಜರಗಿದ ‘ರಾಬಿತಾ ಶೈಕ್ಷಣಿಕ ಪುರಸ್ಕಾರ’ ಸಮಾರಂಭದಲ್ಲಿ ರಾಜ್ಯದ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಯು.ಟಿ. ಕಾದರ್ ಪ್ರಶಸ್ತಿಯನ್ನು ಪ್ರಾದಾನಿಸಿದರು.
ಮೂಲತಃ ಉತ್ತರಕರ್ನಾಟಕದ ಮಾನ್ವಿ ತಾಲೂಕಿನವರಾದ ಮುಹಮ್ಮದ್ ರಝಾ ಮಾನ್ವಿ ಕಳೆದ ೨೦ ವರ್ಷಗಳಿಂದ ಭಟ್ಕಳದ ಶಮ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಶಾರೀಕಕ ಶಿಕ್ಷಣ ಶಿಕ್ಷಕರಾಗಿ ನೇಮಕಗೊಂಡಿದ್ದು ನಂತರ ಬಿಇಡಿ ಪದವಿಯನ್ನು ಪೂರ್ಣಗೊಳಿಸಿ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಇವರು ಶಮ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಹುದ್ದೆಯನ್ನು ನಿಭಾಯಿಸಿಕೊಂಡು ಬಂದಿದ್ದಾರೆ. ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿರುವ ಇವರನ್ನು ಶಾಲೆಯ ಹಳೆಯ ವಿದ್ಯಾರ್ಥಿಗಳು ದುಬೈಗೆ ಕರೆದುಕೊಂಡು ಅಲ್ಲಿ ಸನ್ಮಾನಿಸಿ ಗೌರವಿಸಿದ್ದರು. ತರಬಿಯತ್ ಎಜುಕೇಶನ್ ಸೂಸೈಟಿ ನೀಡುವ ೨೦೧೫-೧೬ನೇ ಸಾಲಿ ದಿವಂಗತ ಸಿದ್ದೀಖ್ ಜಾಫ್ರಿ ಉತ್ತಮ ಶಿಕ್ಷಕ ಪುರಸ್ಕಾರಕ್ಕೂ ಇವರು ಭಾಜನರಾಗಿದ್ದಾರೆ.
ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯ, ಸಹೋದರತೆ, ಬ್ರಾತೃತ್ವವನ್ನು ಬೆಳೆಸುವಲ್ಲಿ ಇವರು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ವಿವಿಧ ಧರ್ಮಿಯರ ಧಾರ್ಮಿಕ ಸ್ಥಳಗಳನ್ನು ಪರಿಚಯಿಸುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಧಾರ್ಮಿಕ ಸೌಹಾರ್ಧತೆಯನ್ನುಂಟು ಮಾಡುವಲ್ಲಿ ಸಕ್ರೀಯರಾಗಿದ್ದಾರೆ.
ಪತ್ರಿಕೋದ್ಯಮ ಪದವಿಯನ್ನು ಪಡೆದಿರುವ ಇವರು ಕಳೆದ ೧೪ ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ವಾರ್ತಾಭಾರತಿ ದೈನಿಕದಲ್ಲಿ ಫ್ರಿಲಾನ್ಸ್ ವರದಿಗಾರನಾಗಿ ಹಾಗೂ ಸಾಹಿಲ್ ಆನ್ ಲೈನ್ ಜಾಲಾತಾಣದ ಕನ್ನಡ ವಿಭಾಗದ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದು, ವಿವಿಧ ಸಾಮಾಜಿಕ ಸಂಘಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ. ಅಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ ಸಾರ್ವಜನಿಕ ಸಂಪರ್ಕ ಕಾರ್ಯದರ್ಶಿಯಾಗಿರುವ ಇವರು ಭಟ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿದ್ದಾರೆ.
ರಾಬಿತಾ ಬೆಸ್ಟ್ ಟೀಚರ್ಸ್ ಆವಾರ್ಡ್ ಪಡೆದಿರುವ ಇವರನ್ನು ತರಬಿಯತ್ ಎಜುಕೇಶನ್ ಸೂಸೈಟಿಯ ಅಧ್ಯಕ್ಷ ಅಬ್ದುಲ್ ಕಾದಿರ್ ಬಾಷಾ ರುಕ್ನುದ್ದೀನ್, ಉಪಾಧ್ಯಕ್ಷ ಎಂ.ಟಿ.ಹಸನ್ ಬಾಪಾ, ಸೈಯ್ಯದ್ ಅಶ್ರಫ್ ಬರ್ಮಾವರ್, ಕಾರ್ಯದರ್ಶಿ ತಲ್ಹಾ ಸಿದ್ದಿಬಾಪಾ, ನ್ಯೂ ಶಮ್ಸ್ ಸ್ಕೂಲ್ ಪ್ರಾಂಶುಪಾಲೆ ಫಹಮಿದಾ ಮುಲ್ಲಾ, ಅಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ಮುಖ್ತಾರ್ ಆಹ್ಮದ್ ಕೊತ್ವಾಲ್, ಜಿಲ್ಲಾಧ್ಯಕ್ಷ ಮುಹಮ್ಮದ್ ಯಾಸೀನ್, ಭಟ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಕೃಷ್ಣ ಭಟ್, ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮುಜಾಹಿದ್ ಮುಸ್ತಫಾ ಸೇರಿದಂತೆ ಹಲವು ಸಂಘಸಂಸ್ಥೆಯ ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ.