ಜೈಪುರ: ರಾಕೇಶ್ ಟಿಕಾಯತ್ ವಾಹನದ ಮೇಲೆ ದಾಳಿ; ಬಿಜೆಪಿ ಗೂಂಡಾಗಳಿಂದ ನಡೆದ ಕೃತ್ಯ: ಆರೋಪ
ಜೈಪುರ: ಭಾರತೀಯ ಕಿಸಾನ್ ಒಕ್ಕೂಟ (ಬಿಕೆಯು)ದ ನಾಯಕ ರಾಕೇಶ್ ಟಿಕಾಯತ್ ಅವರ ವಾಹನ ವ್ಯೂಹದ ಮೇಲೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯ ತಾತರ್ಪುರ ಗ್ರಾಮದಲ್ಲಿ ಶುಕ್ರವಾರ ದಾಳಿ ನಡೆದಿದೆ.
ಈ ದಾಳಿಯಿಂದ ಟಿಕಾಯತ್ ಅವರ ಕಾರಿನ ಕಿಟಕಿಯ ಗಾಜು ಒಡೆದಿದೆ.
ರಾಕೇಶ್ ಟಿಕಾಯತ್ ಅವರ ವಾಹನ ವ್ಯೂಹ ಅಲ್ವಾರ್ನ ಹರಸೋರಾ ಗ್ರಾಮದಿಂದ ಬಾನಸೂರ್ಗೆ ಸಂಚರಿಸುತ್ತಿದ್ದ ಸಂದರ್ಭ ಈ ದಾಳಿ ನಡೆದಿದೆ. ಹರಸೋರಾದಲ್ಲಿ ರೈತರ ಸಭೆ ಉದ್ದೇಶಿಸಿ ಮಾತನಾಡಿದ ಬಳಿಕ ರಾಕೇಶ್ ಟಿಕಾಯತ್ ಅವರು ಬಾನಸೂರ್ಗೆ ತೆರಳುತ್ತಿದ್ದರು.
ಹಾನಿಗೀಡಾದ ಕಾರಿನ ವೀಡಿಯೊವನ್ನು ಟ್ವಿಟ್ಟರ್ನಲ್ಲಿ ಅಪ್ ಲೋಡ್ ಮಾಡಿರುವ ರಾಕೇಶ್ ಟಿಕಾಯತ್, ಬಿಜೆಪಿ ಗೂಂಡಾಗಳು ಈ ದಾಳಿ ನಡೆಸಿದ್ದಾರೆ ಎಂದಿದ್ದಾರೆ.
“ರಾಜಸ್ಥಾನದ ಅಲ್ವಾರ್ ಜಿಲ್ಲೆಯ ತಾತರ್ಪುರದ ಬಾನಸೂರ್ ರಸ್ತೆಯಲ್ಲಿ ಬಿಜೆಪಿಯ ಗೂಂಡಾಗಳು ದಾಳಿ ನಡೆಸಿದ್ದಾರೆ. ಇದು ಪ್ರಜಾಪ್ರಭುತ್ವದ ಸಾವು'' ಎಂದು ಟಿಕಾಯತ್ ಟ್ವೀಟ್ ಮಾಡಿದ್ದಾರೆ.