ಭಟ್ಕಳ: ತಾಲೂಕಿನಲ್ಲಿ ಸುರಿದ ಭಾರೀ ಮಳೆಯಿಂದ ಒಮ್ಮೆ ಇಳೆಗೆ ತಂಪಾದಗಿದ್ದು ರೈತರು ಸಂತಸ ಪಡುವ ಬದಲಿಗೆ ಇನ್ನಷ್ಟು ಚಿಂತಿತರಾಗಿದ್ದಾರೆ.
ಭಟ್ಕಳ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಮಂಗಳವಾರ ಬೆಳಗಿನ ಜಾವ ಸುಮಾರು ಎರಡು ತಾಸುಗಳ ಕಾಲ ಭಾರೀ ಮಳೆ ಸುರಿದಿದ್ದು ಹಲವೆಡೆ ನೀರು ಹರಿದು ಹೋಗಿದ್ದರೆ, ಒಣಗಿ ಹೋಗಿದ್ದ ರೈತರ ಗದ್ದೆಗಳು ಕೂಡಾ ನೀರಿನಿಂದ ತುಂಬಿ ಸಂಪೂರ್ಣ ಒದ್ದೆಯಾಗಿದೆ.
ಇನ್ನೇನು ಎಪ್ರಿಲ್ ಮೊದಲ ವಾರ ಕಳೆದು ಎರಡನೇ ವಾರದಲ್ಲಿಯೇ ಮಳೆ ಬಂದಿರುವುದು ರೈತರಿಗೆ ಹರ್ಷ ತಂದಿದ್ದರೆ, ಲಾಕ್ ಡೌನ್ ಇರುವುದರಿಂದ ಮುಂದಿನ ಕೃಷಿ ಚಟುವಟಿಕೆ ಹೇಗೆ ಎನ್ನುವ ಚಿಂತೆ ಜನರನ್ನು ಕಾಡಿದೆ. ರೈತರು ತಮ್ಮ ಚಟುವಟಿಕೆಗಳಿಗೆ ಹೋಗಲು ಯಾವುದೇ ಅಡ್ಡಿ ಇಲ್ಲ ಎಂದು ಸರಕಾರ ಹೇಳುತ್ತಾ ಬಂದರೂ ಸಹ ಅಲ್ಲಲ್ಲಿ ಇರುವ ಪೊಲೀಸ್ ಸಿಬ್ಬಂದಿಗಳು ರೈತರಿಗೆ ಹೋಗಲಿಕ್ಕೆ ಅವಕಾಶ ಮಾಡಿಕೊಡುವುದು ಕಷ್ಟಸಾಧ್ಯವಾಗಿದೆ. ಕಾರಣ ಇಲ್ಲದೇ ಹೋಗುವವರಿಗೆ ಬೆತ್ತದ ರುಚಿ ತೋರಿಸುವ ಪೊಲೀಸರು ರೈತರು ಎಂದರೆ ಬಿಟ್ಟಾರೆಯೇ ಎನ್ನುವ ಭಯ ರೈತ ವರ್ಗದಲ್ಲಿ ಇರುವುದೇ ಅವರ ಚಿಂತೆಗೆ ಕಾರಣವಾಗಿದೆ.
ಕೆಲವು ರೈತರ ಜಮೀನು ಮನೆಯ ಪಕ್ಕದಲ್ಲಿದ್ದರೆ ಹೆಚ್ಚಿನ ರೈತರ ಜಮೀನು ದೂರ ದೂರದಲ್ಲಿ ಇರುವುದರಿಂದ ಅನಿವಾರ್ಯವಾಗಿ ಹೋಗಲೇ ಬೇಕಾಗುತ್ತದೆಯಾದ್ದರಿಂದ ಇನ್ನಷ್ಟು ಭಯ ಉಂಟಾಗಿದೆ. ಕೃಷಿ ಚಟುವಟಿಕೆ ಮಾಡದೇ ಇರಲಿಕ್ಕೂ ಆಗುವುದಿಲ್ಲ ಎನ್ನುವ ಗೊಂದಲದಲ್ಲಿ ರೈತರಿದ್ದಾರೆ. ಅವರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಜನ ಪ್ರತಿನಿಧಿಗಳು ಅಧಿಕಾರಿಗಳೊಂದಿಗೆ ಮಾತನಾಡಿ ಪರಿಸ್ಥಿತಿಯನ್ನು ವಿವರಿಸಿ ರೈತರ ಸಹಾಯಕ್ಕೆ ನಿಲ್ಲಬೇಕಾಗಿದೆ.