ಚೀನಿಯರಿಗೆ ಭಾರತದ ಪ್ರದೇಶ ಬಿಟ್ಟು ಕೊಟ್ಟ ಮೋದಿ ಎಂದ ರಾಹುಲ್
ಹೊಸದಿಲ್ಲಿ: ಚೀನಾದ ವಿರುದ್ದ ನಿಲ್ಲಲು ಸಾಧ್ಯವಾಗದ ಪ್ರಧಾನಿ ನರೇಂದ್ರ ಮೋದಿ ಅವರು ಓರ್ವ ಹೇಡಿ'' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ.
ಹೊಸದಿಲ್ಲಿಯ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ ಭೂಭಾಗವನ್ನು ರಕ್ಷಿಸುವ ಜವಾಬ್ದಾರಿಯನ್ನು ಪ್ರಧಾನಿ ಅವರು ಪೂರೈಸಿಲ್ಲ. ಅದರ ಬದಲು ಭೂಭಾಗವನ್ನು ಚೀನಾಕ್ಕೆ ಬಿಟ್ಟುಕೊಟ್ಟಿದ್ದಾರೆ ಎಂದರು.
“ಚೀನಾ ವಿರುದ್ಧ ನಿಲ್ಲಲು ಸಾಧ್ಯವಾಗದ ಪ್ರಧಾನಿ ಹೇಡಿ. ಅವರು ನಮ್ಮ ಸೇನೆಯ ಬಲಿದಾನದ ಮೇಲೆ ಉಗುಳುತ್ತಿದ್ದಾರೆ. ನಮ್ಮ ಸೇನೆಯ ಬಲಿದಾನಕ್ಕೆ ದ್ರೋಹ ಎಸಗುತ್ತಿದ್ದಾರೆ. ಹೀಗೆ ಮಾಡುವುದಕ್ಕೆ ಭಾರತದಲ್ಲಿ ಯಾರೊಬ್ಬರೂ ಅವಕಾಶ ನೀಡಲಾರರು'' ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಗೃಹ ಖಾತೆಯ ಸಹಾಯಕ ಸಚಿವ ಜಿ. ಕೃಷ್ಣ ರೆಡ್ಡಿ, ಭಾರತದ ಭೂಭಾಗವನ್ನು ಚೀನಾಕ್ಕೆ ನೀಡಿರುವ ಬಗ್ಗೆ ರಾಹುಲ್ ಗಾಂಧಿ ಅವರು ತನ್ನ ತಾತ (ಜವಾಹರಲಾಲ್ ನೆಹರೂ) ನಲ್ಲಿ ಪ್ರಶ್ನಿಸಬೇಕು ಎಂದಿದ್ದಾರೆ.
ರಾಹುಲ್ ಗಾಂಧಿ ಅವರು ಏನನ್ನೂ ಅರ್ಥ ಮಾಡಿಕೊಳ್ಳುತ್ತಿಲ್ಲ, ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಲೂ ಇಲ್ಲ. ಅವರ ಹೇಳಿಕೆ ಅಸಾಂವಿಧಾನಿಕ ಹಾಗೂ ಅಪಕ್ವ ಎಂದು ನಾನು ಭಾವಿಸುತ್ತೇನೆ ಎಂದು ಸಿಂಗ್ ಹೇಳಿದ್ದಾರೆ.
ಪೂರ್ವ ಲಡಾಖ್ನ ಪ್ಯಾಂಗೊಂಗ್ ಸರೋವರದ ದಕ್ಷಿಣ ಹಾಗೂ ಉತ್ತರ ದಂಡೆಯಲ್ಲಿ ಭಾರತ ಹಾಗೂ ಚೀನಾ ಸೇನೆ ಹಿಂದೆಗೆತ ಒಪ್ಪಂದಕ್ಕೆ ತಲುಪಿದ ಬಳಿಕ ರಾಹುಲ್ ಗಾಂಧಿ ಅವರು ಹೇಳಿಕೆ ನೀಡಿದ್ದರು.
ಪ್ಯಾಂಗೊಂಗ್ನ ಫಿಂಗರ್ 4 ವರೆಗಿನ ಪ್ರದೇಶ ಭಾರತದ ಭೂಭಾಗ ಎಂದು ಹೇಳಿದ ರಾಹುಲ್ ಗಾಂಧಿ, ಯೋಧರು ಫಿಂಗರ್ 3ಕ್ಕೆ ತ ತೆರಳುವಂತೆ ಯಾಕೆ ಸೂಚಿಸಲಾಯಿತು ಎಂದು ವಿವರಿಸುವಂತೆ ಪ್ರಧಾನಿ ಅವರಲ್ಲಿ ಕೋರಿದ್ದಾರೆ.
ಫಿಂಗರ್ 4 ನಮ್ಮ ಭೂಭಾಗ, ಅಲ್ಲಿ ನಮ್ಮ ಠಾಣೆ ಇರಬೇಕಿತ್ತು. ಆದರೆ, ನಾವು ಈಗ ಫಿಂಗರ್ 4 ರಿಂದ ಫಿಂಗರ್ 3ಕ್ಕೆ ತೆರಳಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಭೂಭಾಗವನ್ನು ಚೀನಾಕ್ಕೆ ನೀಡಿರುವುದು ಯಾಕೆ? ಅವರು ಹಾಗೂ ರಕ್ಷಣಾ ಸಚಿವರು ಉತ್ತರಿಸಬೇಕಾದ ಪ್ರಶ್ನೆ ಇದು ಎಂದು ಅವರು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಭೂಭಾಗವನ್ನು ಚೀನಾಕ್ಕೆ ನೀಡಿರುವುದು ಸ್ಪಷ್ಟ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.