ರಾಜಧರ್ಮ ಪಾಲಿಸಿದ ಮುಖ್ಯಮಂತ್ರಿ ಗೆ ರಾಬ್ತೆ ಮಿಲ್ಲತ್ ಅಭಿನಂದನೆ
ಭಟ್ಕಳ: ಕೊರೋನಾ ಮಹಾಮಾರಿಯು ಜಗತ್ತನ್ನು ಅಸಹಾಯಕ ಸ್ಥಿತಿಗೆ ತಳ್ಳುತ್ತಿದ್ದು ಇತ್ತ ಭಾರತದ ಮಾಧ್ಯಮಗಳು ಇನ್ನೂ ಕೋಮು ದ್ವೇಷ ಹರಡುವುದರಲ್ಲೆ ಮಗ್ನವಾಗಿವೆ. ರಾಜ್ಯ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರಾಜ್ಯದ ಅಲ್ಪಸಂಖ್ಯಾತ ಮುಸ್ಲಿಮರ ಕುರಿತಂತೆ ದ್ವೇಷ ಹರುಡುತ್ತಿರುವವರ ವಿರುದ್ಧ ಕಠಿನ ಕ್ರಮ ಜರಗಿಸಲಾಗುವುದು ಎಂದು ಹೇಳಿ ತಮ್ಮ ರಾಜಧರ್ಮವನ್ನು ಪಾಲಿಸಿದ್ದಾರೆ ಅದಕ್ಕಾಗಿ ಉತ್ತರಕನ್ನಡ ಜಿಲ್ಲಾ ರಾಬ್ತಾ-ಎ-ಮಿಲ್ಲತ್ ಸಂಸ್ಥೆ ಅಭಿನಂದಿಸಿ ಮುಖ್ಯಮಂತ್ರಿಗೆ ಪತ್ರವನ್ನು ರವಾನಿಸಿದ್ದಾಗಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ತಲ್ಹಾ ಸಿದ್ದಿಬಾಪ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಪತ್ರದ ಪ್ರತಿಯನ್ನು ಮಾಧ್ಯಮಗಳಿಗೆ ನೀಡಿರುವ ಅವರು ರಾಜ್ಯದಲ್ಲಿ ಮುಸ್ಲಿಮ ಸಮುದಾಯ ಸರ್ಕಾರದ ಕಾನೂನಿಗೆ ಬದ್ಧವಾಗಿದ್ದು ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ಮಾಧ್ಯಮಗಳ ಅಪಪ್ರಚಾರದಿಂದಾಗಿ ಮುಸ್ಲಿಮರು ಮಾನಸಿಕ ನೋವು ಅನುಭವಿಸುತ್ತಿದ್ದಾರೆ. ರಾಜ್ಯದಲ್ಲಿ ಎಲ್ಲ ಕಡೆ ಮುಸ್ಲಿಮರು ಮಸೀದಿಗಳನ್ನು ಬಂದ್ ಮಾಡುವುದರ ಮೂಲಕ ಕೊರೋನಾ ಹೋರಾಟದಲ್ಲಿ ಸಹಕಾರ ನೀಡುತ್ತಿದ್ದಾರೆ. ಲಾಕ್ ಡೌನ್ ಗೆ ಮುಂಚಿತವಾಗಿಯೇ ವಿದ್ವಾಂಸರು ತಮ್ಮ ತಮ್ಮ ಮನೆಗಳಲ್ಲಿ ಪ್ರಾರ್ಥನೆಗಳು ಮಾಡಿ ಎಂಬ ಸಂದೇಶಗಳನ್ನು ನೀಡಿದ್ದು ಕೆಲವರ ಅವಿವೇಕತನದಿಂದಾಗಿ ರಾಜ್ಯದಲ್ಲಿ ಒಂದೆರೆಡು ಘಟನೆಗಳು ಘಟಿಸಿವೆ .”ಮನುಷ್ಯ ಜಾತಿ ತಾನೊಂದೆ ವಲಂ’ ಮನುಷ್ಯರೆಲ್ಲರೂ ಆದಮನ ಸಂತತಿಗಳು ಎಲ್ಲರೂ ಏಕೋದರ ಸಹೋದರರು ಎಂಬ ಸಿದ್ದಾಂತದಲ್ಲಿ ನಂಬಿಯುಳ್ಳ ನಾವುಗಳು ಯಾವುದೇ ಕಾರಣಕ್ಕೂ ಯಾರಿಗೂ ತೊಂದರೆಯಾಗದಂತೆ ಜೀವಿಸುತ್ತ ಬಂದಿವೆ. ಈ ಮಾಧ್ಯಮಗಳ ಅಪಪ್ರಚಾರದಿಂದಾಗಿ ನಾವಿಂದು ಹಲವು ನೋವುಗಳನ್ನು ಅನುಭವಿಸುವಂತಾಗಿದೆ ಎಂದು ಮುಖ್ಯ ಮಂತ್ರಿಗಳಿಗೆ ಬರೆದ ಪತ್ರದಲ್ಲಿ ಅವರು ತಿಳಿಸಿದ್ದಾರೆ.