ಕಾರವಾರ:28ಜೂನ್, ದೇಶದಲ್ಲಿ ದಲಿತ ಹಾಗೂ ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಗುಂಪುಹತ್ಯೆಗಳನ್ನು ತೀವ್ರವಾಗಿ ಖಂಡಿಸಿರುವ ಉತ್ತರಕನ್ನಡ ಜಿಲ್ಲಾ ರಾಬಿತಾಮಿಲ್ಲತ್ ಸಂಸ್ಥೆ ಉತ್ತರಕನ್ನಡ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿಪತ್ರವನ್ನು ಸಲ್ಲಿಸಿದೆ.
ಶುಕ್ರವಾರ ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಧಾನ ಕಾರ್ಯದರ್ಶಿ ತಲ್ಹಾ ಸಿದ್ದಿಬಾಪ ರ ನೇತೃತ್ವದಲ್ಲಿ ಮನವಿ ಪತ್ರಸಲ್ಲಿದ್ದು, ಧಾರ್ಮಿಕ ಉನ್ಮಾದದಿಂದಾಗಿ ಬಹುಧರ್ಮಿಯ ಸಂಸ್ಕøತಿಗೆ ಧಕ್ಕೆಯುಂಟಾಗುತ್ತಿದೆ. ಇತ್ತಿಚೆಗೆ ಕಳೆದ 2-3 ವರ್ಷಗಳಿಂದ ದೇಶದ ಅಲ್ಪಸಂಖ್ಯಾತರು, ದಲಿತರನ್ನು ಗುರಿಯನ್ನಾಗಿಸಿಕೊಂಡು ಗುಂಪು ಹತ್ಯೆಗಳು ಅವ್ಯಾಹತವಾಗಿ ನಡೆಯುತ್ತಿವೆ. ದೇಶದ ನಾಗರೀಕ ಭಯದ ವಾತವರಣದಲ್ಲಿ ಬದುಕುವಂತಾಗಿದೆ. ಕೇಂದ್ರದಲ್ಲಿ ಬಿಜಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹಲವು ಗುಂಪು ಹತ್ಯೆಗಳು ನಡದಿದ್ದು, ಪರಸ್ಪರ ಸಹೋದರರಂತಿದ್ದ ಹಿಂದೂ ಮುಸ್ಲಿಮರನ್ನು ತಮ್ಮ ರಾಜಕೀಯ ದುರ್ಲಾಭಕ್ಕಾಗಿ ಪರಸ್ಪರಲ್ಲಿ ದ್ವೇಷ ಅಸೋಯೆ ಹುಟ್ಟಿಸುವ ಕಾರ್ಯ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದೆ. ಗೋ ಸಾಗಾಟ, ಗೋಮಾಂಸ ಸೇವನೆ, ಲೌಜಿಹಾದ್ ಮತ್ತಿತರರ ಹೆಸರಲ್ಲಿ ದೇಶದ ಅಲ್ಪಸಂಖ್ಯಾತರ ಮೇಲೆ ವಿಶೇಷವಾಗಿ ಇಲ್ಲಿನ ಮುಸ್ಲಿಮ ಸಮುದಾಯದ ಮೇಲೆ ಗುಂಪು ಹಲ್ಲೆಗಳು ನಡೆಯುತ್ತಿದ್ದು ಇದನ್ನು ಕಂಡೂ ಕೂಡ ಕಾಣದ ರೀತಿಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತುಕೊಂಡಿದ್ದಾರೆ. ಆರೋಪಿಗಳು ಅಪರಾಧ ಮಾಡಿಯೂ ರಾಜರೋಷವಾಗಿ ಮೆರೆಯುತ್ತಿದ್ದು ಕಾನೂನು ಉಲ್ಲಂಘನೆಯೊಂಬದು ಗೊಂಬೆಯಾಟವಾದಂತಾಗಿದೆ.
ಜಾರ್ಖಂಡ್ ನ ತಬ್ರೇಜ್ ಅನ್ಸಾರಿ ಎಂಬ ವ್ಯಕ್ತಿಯನ್ನು ಬೈಕ್ ಕಳುವು ಮಾಡಿದ್ದ ನೆಪದಲ್ಲಿ ಉನ್ಮಾದಿತ ವ್ಯಕ್ತಿಗಳು ಜೈಶ್ರೀರಾಂ, ಜೈಹನುಮಾನ್ ಎಂಬ ಘೋಷಣೆಯನ್ನು ಕೂಗುವಂತೆ ಒತ್ತಾಯಿಸಿ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡುತ್ತಾರೆ. ಅಷ್ಟೆ ಅಲ್ಲದೆ ಅದನ್ನು ಚಿತ್ರಿಕರಿಸುವುದರ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಾರೆ. ಇದರಿಂದಾಗಿ ದೇಶದೆಲ್ಲಡೆ ಆತಂಕ ಸೃಷ್ಟಿಸುವುದು ಇವರ ಯೋಜನೆಯಾಗಿದೆ. ಅದಾಗ್ಯೂ ಕೂಡ ನಮ್ಮ ದೇಶದ ಪ್ರಧಾನಿಗಳು, ಮಂತ್ರಿಗಳು, ಸಂಸದರು ಸುಮ್ಮನೆ ಕುಳಿತುಕೊಂಡಿದ್ದು ಅಪರಾಧಿಗಳ ವಿರುದ್ಧ ತುಟಿಯನ್ನು ಬಿಚ್ಚುತ್ತಿಲ್ಲ. ಕಾನೂನು ಪಾಲಕರು, ಕಾನೂನು ರಕ್ಷಕರು ತಮ್ಮ ಕರ್ತವ್ಯದಿಂದ ನುಣುಚಿಕೊಳ್ಳುತ್ತಿದ್ದಾರೆ. ಹೀಗಾದರೆ ದೇಶ ಯಾವ ಸ್ಥಿತಿಗೆ ತಲುಪಬಹುದು ಎನ್ನುವುದು ಊಹಿಸಲು ಅಸಾಧ್ಯವಾಗಿದೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ದೇಶದ ಈಗಿನ ಪರಿಸ್ಥಿತಿಯನ್ನೊಮ್ಮೆ ಅವಲೋಕಿಸಿ ದೇಶದ ಸೌಹಾರ್ದತೆಯನ್ನು ಹಾಳುಗೈಯುವ ದುರಳಿಗೆ ದಂಡನೆಯಾಗಬೇಕಿದ್ದು ರಾಷ್ಟ್ರಪತಿಗಳು ಕೂಡಲೇ ಮದ್ಯಪ್ರವೇಶಿಸಿ ಮಾನ್ಯ ಪ್ರಧಾನಮಂತ್ರಿಯವರಿಗೆ ನಿರ್ದೇಶನ ನೀಡುವುದರ ಮೂಲಕ ದೇಶದಲ್ಲಿ ಶಾಂತಿ ಸೌಹಾರ್ದತೆಯನ್ನು ಕಾಪಾಡಿಕೊಂಡು ಹೋಗಬೇಕೆಂದು ಮನವಿ ಮಾಡಿಕೊಳ್ಳಲಾಗಿದೆ.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ರಾಬಿತಾಮಿಲ್ಲತ್ ನ ಮಾಧ್ಯಮ ಕಾರ್ಯದರ್ಶಿ ಎಂ.ಆರ್.ಮಾನ್ವಿ ನಮ್ಮ ದೇಶದಲ್ಲಿ ಮನುಷ್ಯ ಮನುಷ್ಯರನ್ನು ಪ್ರೀತಿಸುವ ವಾತವರಣ ನಿರ್ಮಾಣವಾಗಬೇಕು, ಇದಕ್ಕಾಗಿ ನಮಗೆ ಹಿಂದೂ ಮುಸ್ಲಿಮರನ್ನು ಬೇರ್ಪಡಿಸುತ್ತಿರುವ ನ್ಯೂ ಇಂಡಿಯಾ ಬೇಡ. ಶಾಂತಿ ಸೌಹಾರ್ದತೆ, ಪರಸ್ಪರ ನಂಬಿಕೆಗಳನ್ನು ಗೌರವಿಸುತ್ತ ಬಾಳಿದ ನಮ್ಮ ಹಳೆಯ ಹಳೆಯ ಭಾರತವನ್ನು ನಮಗೆ ಮರಳಿ ತಂದುಕೊಟ್ಟರೇ ಸಾಕು ಎಂದು ಹೇಳಿದರು.
ರಾಬಿತಾಮಿಲ್ಲತ್ ಪ್ರಧಾನ ಕಾರ್ಯದರ್ಶಿ ತಲ್ಹಾ ಸಿದ್ದಿಬಾಪ ಮನವಿ ಪತ್ರವನ್ನು ಓದಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಮುಝಫ್ಪರ್ ಶೇಖ್ ಕುಮಟಾ, ಮುಹಮ್ಮದ್ ಇಕ್ಬಾಲ್ ಶೇಖ್ ಕಾರವಾರ, ಸೈಯ್ಯದ್ ಖಲೀಲ್ ಕಾರವಾರ, ಅಬ್ದುಲ್ ಮನ್ನಾನ್ ಸಿರ್ಸಿ, ಅಬ್ದುಲ್ ಕಾದಿರ್ ತಿರುವಳ್ಳಿ, ಮುಹಮ್ಮದ್ ಇಸ್ಮಾಯಿಲ್ ಗೌಡಳ್ಳಿ ಮತ್ತಿತರರು ಹಾಜರಿದ್ದರು.