ಕ್ವಾರಂಟೈನ್ ಉಲ್ಲಂಘನೆ: ಇಬ್ಬರ ವಿರುದ್ಧ ಪ್ರಕರಣ ದಾಖಲು
ಕಾರವಾರ: ತಾಲೂಕಿನ ಮಾಜಾಳಿ ಗ್ರಾಮದ ಉಮೇಶ ಉಲ್ಲಾಸ ನಾಯ್ಕ ಎಂಬುವವರು ಜೂನ್ 28ರಂದು ಗೋವಾದಿಂದ ಕಾರವಾರದ ಮಾಜಾಳಿಗೆ ಬಂದಿದ್ದು, ಇವರಿಗೆ ಕೋವಿಡ-19 ನಿಯಮಾವಳಿಯಂತೆ 14 ದಿನಗಳವರೆಗೆ ಹೋಮ್ ಕ್ವಾರಂಟೈನ್ನಲ್ಲಿ ಇರಲು ಸೂಚಿಸಲಾಗಿತ್ತು, ಆದರೆ ಜುಲೈ 12ರಂದು ಮನೆಯ ಹೊರಗಡೆ ಓಡಾಡುವುದು ಕ್ವಾರಂಟೈನ್ ವಾಚ್ ಆಪ್ನಲ್ಲಿ ಕಂಡು ಬಂದಿದೆ ಹಾಗೂ ಸುಶಾಂತ ಶ್ಯಾಮಕಾಂತ ತಳೇಕರ ಎಂಬುವವರು ಜುಲೈ 1ರಂದು ಬೆಂಗಳೂರಿನಿಂದ ಕಾರವಾರದ ಬೊಳಶಿಟ್ಟಾ ಗ್ರಾಮಕ್ಕೆ ಬಂದಿದ್ದು, ಕೋವಿಡ-19 ನಿಯಮಾವಳಿಯಂತೆ ಜುಲೈ 1 ರಿಂದ 14ರ ವರೆಗೆ ಹೋಮ್ ಕ್ವಾರಂಟೈನ್ನಲ್ಲಿ ಇರಲು ಸೂಚಿಸಲಾಗಿತ್ತು, ಆದರೆ ಅವರು ಜುಲೈ 12ರಂದು ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 11 ಘಂಟೆಯ ನಡುವಿನ ಅವಧಿಯಲ್ಲಿ ಕೋವಿಡ-19 ನಿಯಮಗಳನ್ನು ಉಲ್ಲಂಘಿಸಿ ಹೊರಗಡೆಗೆ ಓಡಾಡಿರುವುದು ಕಂಡು ಬಂದಿದೆ.
ಈ ಪ್ರಕರಣ ಸಂಬಂಧ ಚಿತ್ತಾಕುಲಾ ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಚಿತ್ತಾಕುಲಾ ಪೊಲೀಸ್ ಠಾಣೆಯ ಪಿಎಸ್ಐ ಪ್ರವೀಣ್ ಕುಮಾರ ಆರ್ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.