ಕಚ್ಚಿದ ಮಾರುದ್ದದ ಹೆಬ್ಬಾವಿನೊಂದಿಗೆ ಆಸ್ಪತ್ರೆಗೆ ಬಂದ ವ್ಯಕ್ತಿ!
ಭಟ್ಕಳ: ಕಚ್ಚಿದ ಹೆಬ್ಬಾವನ್ನು ಹಿಡಿದುಕೊಂಡೇ ವ್ಯಕ್ತಿಯೊಬ್ಬ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿರುವ ಘಟನೆ ಭಟ್ಕಳದಲ್ಲಿ ಶುಕ್ರವಾರ ನಡೆದಿದೆ.
ಭಟ್ಕಳ ತಾಲ್ಲೂಕಿನ ಪುರವರ್ಗದ ವೆಂಕಟರಮಣ ನಾಯ್ಕ ಹೆಬ್ಬಾವಿನಿಂದ ಕಚ್ಚಿಸಿಕೊಂಡು, ಸ್ನೇಹಿತರ ಸಹಾಯದಿಂದ ಹಾವನ್ನು ಆಸ್ಪತ್ರೆಗೆ ತಂದಿದ್ದಾರೆ.
ಭಟ್ಕಳದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಚರಂಡಿ, ಕಾಲುವೆಗಳು ತುಂಬಿ ಹರಿಯುತ್ತಿವೆ. ಹೀಗೆ ಚೌಥನಿ ಹೊಳೆಯ ಬಳಿ ಹರಿಯವ ನೀರಿನಲ್ಲಿ ಹೆಬ್ಬಾವೊಂದು ಹರಿದು ಬರುತ್ತಿತ್ತು. ನಡೆದಾಡುವ ರಸ್ತೆಯಲ್ಲಿ ಸಿಕ್ಕಿ, ಯಾರಿಗಾದರೂ ಕಚ್ಚಿದರೆ ಅಪಾಯ ಎಂದು ಮನಗಂಡು ವೆಂಕಟರಮಣ ಹಾಗೂ ಅವರ ಕೆಲವು ಸ್ನೇಹಿತರು ಅದನ್ನು ಹಿಡಿಯಲು ಪ್ರಯತ್ನಿಸಿದರು.
ಈ ವೇಳೆ ವೆಂಕಟರಮಣ ಅವರಿಗೆ ಹಾವು ಕಡಿದು, ಗಾಯಗೊಳಿಸಿದೆ. ಇದರಿಂದ ವಿಚಲಿತಗೊಂಡ ಅವರು, ಆರೇಳು ಅಡಿ ಉದ್ದದ ಹೆಬ್ಬಾವನ್ನು ಸ್ನೇಹಿತರೊಂದಿಗೆ ಹಿಡಿದುಕೊಂಡೇ ಆಸ್ಪತ್ರೆಗೆ ಬಂದರು.
ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಹಾವನ್ನು ಹಿಡಿದುಕೊಂಡು, ಅರಣ್ಯ ಪ್ರದೇಶದಲ್ಲಿ ಬಿಟ್ಟು ಬಂದರು. ವೆಂಕಟರಮಣ ಅವರಿಗೆ ಭಟ್ಕಳ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂದು ತಿಳಿದು ಬಂದಿದೆ.