ಕಾರವಾರ: ಕುಗ್ರಾಮ ಮೇದಿನಿಗೆ ರಸ್ತೆ, ಪಡಿತರ ಒದಗಿಸುವ ಭರವಸೆ ಸಿಕ್ಕಿದೆ. ಶೀರ್ಷಿಕೆಯಲ್ಲಿ ಗ್ರಾಮದ ದುಸ್ಥಿತಿಯ ಕುರಿತು ಮಾಧ್ಯಮಗಳು ಬೆಳಕು ಚೆಲ್ಲಿದ
ವರದಿ ಪ್ರಕಟವಾಗಿತ್ತು. ಜಿಪಂ ಸದಸ್ಯ ಗಜಾನನ ಪೈ ಸಾಮಾನ್ಯ ಸಭೆಯಲ್ಲಿ ಈ ವಿಷಯ ಮಂಡಿಸಿದ್ದರು. ವಿಶೇಷ ವರದಿಯನ್ನು ಗಮನಿಸಿದ ಸಿಎಂ ಎಚ್.ಡಿ.ಕುಮಾರಸ್ವಾಮಿ ಜಿಲ್ಲಾಧಿಕಾರಿಗೆ ಕರೆ ಮಾಡಿ ತಕ್ಷಣ ಭೇಟಿ ನೀಡಿ ವರದಿ ಸಲ್ಲಿಸುವಂತೆ ಆದೇಶಿಸಿದ್ದರು. ಕುಗ್ರಾಮಕ್ಕೆ ರಸ್ತೆ ಒದಗಿಸಲು ಇನ್ಪೋಸಿಸ್ ಫೌಂಡೇಶನ್ ಮುಂದೆ ಬಂದಿದೆ ಎಂದಿದ್ದರು.
ಅದರಂತೆ ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಜಿಪಂ ಸಿಇಒ ಎಂ.ರೋಶನ್, ಡಿಎಫ್ಒ ಕೆ.ಗಣಪತಿ ಹಾಗೂ ಇತರ ಅಧಿಕಾರಿಗಳ ತಂಡ ಶುಕ್ರವಾರ ಮೇದಿನಿ ಗ್ರಾಮಕ್ಕೆ ಹೋಗುವ ರಸ್ತೆಯನ್ನು ಪರಿಶೀಲಿಸಿತು. ಹುಲಿದೇವರ ಕೊಡ್ಲದಿಂದ ಗ್ರಾಮಸ್ಥರೊಂದಿಗೆ ಸುಮಾರು ಎರಡು ಕಿಮೀ ಕಾಲ್ನಡಿಗೆಯಲ್ಲಿ ಸಾಗಿದರು.
‘ಸೊಪ್ಪಿನ ಹೊಸಳ್ಳಿ ಗ್ರಾಪಂ ವ್ಯಾಪ್ತಿಯ ಮೇದಿನಿಗೆ ಮುಖ್ಯ ರಸ್ತೆಯಿಂದ ಸುಮಾರು 8 ಕಿಮೀ ಕಾಡಿನ ಕಡಿದಾದ ದಾರಿಯಲ್ಲಿ ತೆರಳಬೇಕು. ರಸ್ತೆ ಇಲ್ಲದ ಕಾರಣ ಇಲ್ಲಿನ ಕೃಷಿ ಉತ್ಪನ್ನ ಸಾಗಣೆಗೆ ಕಷ್ಟವಾಗಿದೆ. ಇಲ್ಲಿನ ಜನರು ಪಡಿತರ ತರಲು 10 ಕಿಮೀ ದೂರ ಸಾಗಬೇಕು. ಇದಕ್ಕಾಗಿಯೇ ಇಲ್ಲಿನ 40 ಕ್ಕೂ ಹೆಚ್ಚು ಯುವಕ, ಯುವತಿಯರಿಗೆ ಕಂಕಣ ಭಾಗ್ಯ ಕೂಡಿ ಬಂದಿಲ್ಲ’ ಎಂದು ಗ್ರಾಮಸ್ಥರು ಅಧಿಕಾರಿಗಳ ಬಳಿ ಸಮಸ್ಯೆ ವಿವರಿಸಿದರು.
ಗ್ರಾಮಕ್ಕೆ ಕಾಯಂ ರಸ್ತೆ ನಿರ್ಮಾಣ ಸಂಬಂಧ 1 ವಾರದಲ್ಲಿ ಕ್ರಿಯಾ ಯೋಜನೆ ತಯಾರಿಸಿ ವರದಿ ಸಲ್ಲಿಸುವಂತೆ ಸ್ಥಳದಲ್ಲೇ ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ್ ಸೂಚಿಸಿದರು. ಮಳೆಗಾಲದಲ್ಲಿ ಪಡಿತರವನ್ನು ಗ್ರಾಮಕ್ಕೇ ಒದಗಿಸುವುದಾಗಿ ಭರವಸೆ ನೀಡಿದರು.
ಅಧಿಕಾರಿಗಳ ಕಳಿಸಿಕೊಟ್ಟ ಎಚ್ಡಿಕೆ
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಗೋಕರ್ಣಕ್ಕೆ ಭೇಟಿ ನೀಡಿದ್ದ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮೇದಿನಿ ಗ್ರಾಮಸ್ಥರು ಭೇಟಿಯಾಗಿದ್ದರು. ನಿಮ್ಮ ಊರಿಗೇ ಬಂದು ಗ್ರಾಮ ವಾಸ್ತವ್ಯ ಮಾಡಿ, ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಸಿಎಂ ಇಲ್ಲಿಗೆ ಬರುವ ಲಕ್ಷಣವಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಿರುವ ತಾವು ಬಾರದಿದ್ದರೂ ಅಧಿಕಾರಿಗಳನ್ನು ಕಳಿಸಿದ ಸಿಎಂ ತಮ್ಮ ಮಾತು ಉಳಿಸಿಕೊಂಡಿದ್ದಾರೆ. ಒಂದು ವಾರದಲ್ಲಿ ಸಿಎಂಗೆ ವರದಿ ನೀಡುವುದಾಗಿ ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ತಿಳಿಸಿದ್ದಾರೆ. ಭರವಸೆಯಂತೆ ರಸ್ತೆಯಾಗಲಿದೆಯೇ ಎಂದು ಕಾದು ನೋಡಬೇಕಿದೆ