ಹರಿದ್ವಾರ: ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಬಂಧನಕ್ಕೆ ಆಗ್ರಹಿಸಿ ಧರಣಿ ನಡೆಸುತ್ತಿರುವ ಕುಸ್ತಿಪಟುಗಳು ಉತ್ತರಾಖಂಡದ ಹರಿದ್ವಾರದಲ್ಲಿ ಗಂಗಾನದಿಗೆ ತಮ್ಮ ಎಲ್ಲಾ ಪದಕಗಳನ್ನು ಎಸೆಯುವ ತಮ್ಮ ನಿರ್ಧಾರವನ್ನು ರೈತ ನಾಯಕ ನರೇಶ್ ಟಿಕಾಯತ್ ಅವರ ಮಧ್ಯಪ್ರವೇಶದಿಂದಾಗಿ ತಾತ್ಕಾಲಿಕವಾಗಿ ಕೈಬಿಟ್ಟಿದ್ದಾರೆ. ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ವಿರುದ್ಧ ಕ್ರಮಕ್ಕೆ 5 ದಿನಗಳ ಅಂತಿಮ ಗಡುವನ್ನು ಅವರು ನೀಡಿದ್ದಾರೆ.
ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಹಾಗೂ ಬಜರಂಗ್ ಪುನಿಯಾ ಸೇರಿದಂತೆ ಭಾರತದ ಪ್ರಮುಖ ಕುಸ್ತಿಪಟುಗಳು ಬೆಂಬಲಿಗರೊಂದಿಗೆ ಮಂಗಳವಾರ ಸಂಜೆ ಹರಿದ್ವಾರ ತಲುಪಿದ್ದರು. ಒಲಿಂಪಿಕ್ ಸೇರಿದಂತೆ ವಿವಿಧ ಪದಕಗಳನ್ನು ಕೈಯಲ್ಲಿ ಹಿಡಿದುಕೊಂಡಿದ್ದ ಕುಸ್ತಿಪಟುಗಳು ಗಂಗಾಘಾಟ್ನಲ್ಲಿ ಸುಮಾರು ಒಂದು ತಾಸಿಗೂ ಅಧಿಕ ಸಮಯ ಕಣ್ಣೀರಿಡುತ್ತಾ ಕುಳಿತಿದ್ದರು.
ಈ ಮಧ್ಯೆ ಭಾರತೀಯ ಕಿಸಾನ್ ಯೂನಿಯ್ ಅಧ್ಯಕ್ಷ ನರೇಶ್ ಟಿಕಾಯತ್ ಅವರು ಇತರ ಬಿಕೆಯು ಕಾರ್ಯಕರ್ತರೊಂದಿಗೆ ಹರಿದ್ವಾರಕ್ಕೆ ಧಾವಿಸಿ ಬಂದರು. ಗಂಗಾನದಿಗೆ ಪದಕಗಳನ್ನು ಎಸೆಯದಂತೆ ಕುಸ್ತಿಪಟುಗಳ ಮನ ಒಲಿಸುವಲ್ಲಿ ಟಿಕಾಯತ್ ಯಶಸ್ವಿಯಾದರು ಹಾಗೂ ಪ್ರತಿಭಟನೆಯಲ್ಲಿ ರೈತರು ಸಹಭಾಗಿಗಳಾಗುವುದಾಗಿಯೂ ಭರವಸೆ ನೀಡಿದರು. ಬ್ರಿಜ್ ಭೂಷಣ್ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಐದು ದಿನಗಳ ಅಂತಿಮ ಗಡುವನ್ನು ಕುಸ್ತಿಪಟುಗಳು ನೀಡಿದ್ದಾರೆ. ಇಲ್ಲದೆ ಇದ್ದಲ್ಲಿ ಗಂಗಾನದಿಗೆ ಪದಕಗಳನ್ನು ಎಸೆಯುವುದಾಗಿಯೂ ಅವರು ಎಚ್ಚರಿಕೆ ನೀಡಿದ್ದಾರೆ.
ಇಂದು ಬೆಳಗ್ಗೆ ಪ್ರತಿಭಟನಾ ನಿರತ ಕುಸ್ತಿಪಟುಗಳು ಹೇಳಿಕೆಯೊಂದನ್ನು ಹೊರಡಿಸಿ, ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳದೆ ಇದ್ದುದಕ್ಕಾಗಿ ತಮ್ಮ ಪದಕಗಳನ್ನು ಎಸೆಯುವುದಾಗಿ ಘೋಷಿಸಿದ್ದರು.
ಉತ್ತರಾಖಂಡದ ಪೊಲೀಸರು ಕೂಡಾ ಕುಸ್ತಿಪಟುಗಳು ಗಂಗಾನದಿಗೆ ಪದಕಗಳನ್ನು ಎಸೆಯುವುದನ್ನು ತಾವು ತಡೆಯುವುದಿಲ್ಲವೆಂದು ಹೇಳುವ ಮೂಲಕ ದಿವ್ಯನಿರ್ಲಕ್ಷ್ಯ ವಹಿಸಿರುವುದು ಕಂಡುಬಂದಿತು.