ಉಸ್ತಾದರ ಅಂತಿಮ ದರುಶನಕ್ಕೆ ಹರಿದು ಬಂದ ಜನಸಾಗಾರ

Source: sonews | By Staff Correspondent | Published on 24th September 2020, 4:05 PM | Coastal News |

ಕೊಣಾಜೆ : ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಬೆಳಗ್ಗೆ ನಿಧನರಾದ ಅಲ್ ಹಾಜಿ ಪಿ.ಎಂ. ಇಬ್ರಾಹೀಂ ಮುಸ್ಲಿಯಾರ್ ಬೇಕಲ್ ಅವರ ಪಾರ್ಥಿವ ಶರೀರವನ್ನು ಮೊಂಟೆಪದವಿನ ಮನೆಯಲ್ಲಿ ಇರಿಸಲಾಗಿದ್ದು, ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದು ಬರುತ್ತಿದೆ.

ಬೇಕಲ್  ಉಸ್ತಾದ್ ಅವರ ನಿಧನರಾದ ಸುದ್ದಿ‌ ತಿಳಿದು ಬಹಳಷ್ಟು ‌ಜನ ಅವರ ಮೊಂಟೆಪದವಿನ ಮನೆಯ ಬಳಿ ಸೇರಿದ್ದರು. ಸುಮಾರು ಹನ್ನೊಂದು ಗಂಟೆಗೆ ಅವರ ಪಾರ್ಥಿವ ಶರೀರವನ್ನು ಮನೆಗೆ ತರಲಾಯಿತು. ಬಳಿಕ ಸಾವಿರಾರು ಜನರು ಅಂತಿಮ‌ ದರ್ಶನ ಪಡೆಯುತ್ತಿದ್ದಾರೆ. ಅಲ್ಲದೆ‌ ಧಾರ್ಮಿಕ ಗುರುಗಳು, ಮುಖಂಡರು, ರಾಜಕೀಯ ಮುಖಂಡರು‌ ಭೇಟಿ ನೀಡಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ.

ಸ್ವಯಂ ಸೇವಕರು: ಬೇಕಲ್ ಉಸ್ತಾದ್ ಅವರ ಪಾರ್ಥಿವ ಶರೀರದ ದರ್ಶನಕ್ಕೆ ಜಿಲ್ಲೆಯ ಬೇರೆ ಬೇರೆ ಕಡೆಯಿಂದ ಸಾವಿರಾರು ಜನರು‌ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ನೂರಾರು ಯುವಕರು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವಾಹನ ನಿಲುಗಡೆಗೂ ಬೇರೆ ಬೇರೆ ಕಡೆಗಳಲ್ಲಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಬೇರೆ ಬೇರೆ ಊರುಗಳಿಂದ ಆಗಮಿಸುತ್ತಿರುವ ಜನರನ್ನು ಅಂತಿಮ ದರ್ಶನ‌ ಪಡೆದ ಬಳಿಕ ಗುಂಪುಗೂಡಲು ಅವಕಾಶ ಕೊಡದೆ ಕಳುಹಿಸುವ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ.

ಸ್ಥಳದಲ್ಲಿ ಕೊಣಾಜೆ‌ ಠಾಣೆ ಪೊಲೀಸರು, ಟ್ರಾಫಿಕ್ ಪೊಲೀಸರು ಕಾರ್ಯ ಪ್ರವೃತ್ತರಾಗಿದ್ದಾರೆ.

Read These Next