ಭಟ್ಕಳ: ಕ್ರಿ.ಶ.1552ರಲ್ಲಿ ಇಹಲೋಕ ತ್ಯಜಿಸಿದ ಸಂತ ಫ್ರಾನ್ಸಿಸ್ ಕ್ಸೇವಿಯರ್ ಮೃತ ದೇಹವನ್ನು ಭಟ್ಕಳ ಬಂದರಿನಲ್ಲಿ ಕೆಲ ಕಾಲ ಇರಿಸಿ ನಂತರ ಗೋವಾಗೆ ಸಾಗಿಸಿರುವ ಸ್ಮರಣಾರ್ಥವಾಗಿ, ಪ್ರತಿವರ್ಷದಂತೆ ಡಿಸೆಂಬರ್ ತಿಂಗಳ ಮೊದಲ ರವಿವಾರ ಇಲ್ಲಿನ ಮುಂಡಳ್ಳಿ ಭಾಗದ ಕ್ರೈಸ್ತ ಧರ್ಮೀಯರು ಬಂದರ್ ದೀಪಸ್ತಂಭದವರೆಗೆ ಮೆರವಣಿಗೆಯಲ್ಲಿ ಸಾಗಿ ಅಲ್ಲಿರುವ ಸಂತ ಕ್ಸೇವಿಯರ್ ಶಿಲುಬೆಯ ಮುಂದೆ ಪ್ರಾರ್ಥನೆ ಸಲ್ಲಿಸಿದರು.
ಕ್ರೈಸ್ತ ಶಿಲುಬೆಯೊಂದಿಗೆ ಬೈಬಲ್ ಪಠಿಸುತ್ತ ಕ್ರಿಸ್ತನ ಅನುಯಾಯಿಗಳು ಹೆಜ್ಜೆ ಹಾಕಿದರು. ಮಹಿಳೆಯರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ವಾದ್ಯಘೋಷಗಳು ಮೆರವಣಿಗೆಗೆ ಮೆರುಗನ್ನು ನೀಡಿದವು. ಮೆರವಣಿಗೆಯಲ್ಲಿ ಪಾಲ್ಗೊಂಡ ಮುಂಡಳ್ಳಿ ಚರ್ಚಿನ ಫಾದರ್ ಪ್ರೇಮ್ ಡಿಸೋಜಾ, ಮರಣ ಹೊಂದಿದ ಸಂತ ಫ್ರಾನ್ಸಿಸ್ ದೇಹವನ್ನು ದೋಣಿಯಲ್ಲಿ ಗೋವಾ ಬೋಮ್ ಜೀಸಸ್ ಚರ್ಚಗೆ ಕೊಂಡೊಯ್ಯಲಾಗಿತ್ತು, ಈ ಸಂದರ್ಭದಲ್ಲಿ ಕೆಲ ಕಾಲ ಭಟ್ಕಳ ಬಂದರಿನಲ್ಲಿ ದೀಪಸ್ತಂಭದ ಸಮೀಪ ಇರಿಸಲಾಗಿತ್ತು, ಅದನ್ನು ಸ್ಮರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರತಿ ವರ್ಷ ಡಿಸೆಂಬರ್ ಮೊದಲ ರವಿವಾರ ಈ ಮೆರವಣಿಗೆಯನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ವಿವರಿಸಿದರು. ಭಟ್ಕಳ ಬಂದರಿನಲ್ಲಿ ಕಾರವಾರದಿಂದ ಬಂದಿದ್ದ ಫಾದರ್ ಸಾಲ್ವಡರ್, ಸಂತ ಫ್ರಾನ್ಸಿಸ್ ಬಗ್ಗೆ ಪ್ರವಚನ ನೀಡಿದರು. ಪ್ರಾರ್ಥನೆಯ ನಂತರ ಎಲ್ಲರಿಗೂ ಲಘು ಉಪಹಾರ, ಪಾನೀಯ ವಿತರಿಸಲಾಯಿತು.