ಆರೋಗ್ಯ ಶಿಬಿರ,ಮಕ್ಕಳಿಗೆ ಬ್ಯಾಗ್ ವಿತರಿಸಿ ಪತ್ರಿಕಾ ದಿನದ ಅರ್ಥಪೂರ್ಣ ಆಚರಣೆ
ಕಾರವಾರ:ಮಕ್ಕಳಿಗೆ ಸರ್ಕಾರ ಉಚಿತವಾಗಿ ಸ್ಕೂಲ್ ಬ್ಯಾಗ್ ನೀಡುವ ಬಗ್ಗೆ ಚಿಂತನೆ ನಡೆಸಬೇಕು ಎಂದು ಶಾಸಕಿ ರೂಪಾಲಿ ನಾಯ್ಕ ಒತ್ತಾಯಿಸಿದರು.
ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘದಿಂದ ತಾಲೂಕಿನ ಚಿತ್ತಾಕುಲಾ ಸೀಬರ್ಡ್ ಕಾಲನಿಯ ಸರ್ಕಾರಿ ಹೈಸ್ಕೂಲ್ನಲ್ಲಿ ಸೋಮವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ, ಸಂಘದ ವತಿಯಿಂದ ಕೊಡಲಾದ ಸ್ಕೂಲ್ ಬ್ಯಾಗ್ಗಳನ್ನು ಶಾಲೆಯ 68 ವಿದ್ಯಾರ್ಥಿಗಳಿಗೆ ವಿತರಿಸಿ ಅವರು ಮಾತನಾಡಿದರು.
ಹಿಂದೆ ಈ ಸಂಘದಿಂದ ಶಾಲೆ ವಿದ್ಯಾರ್ಥಿಗಳಿಗೆ ಪಾದರಕ್ಷೆಗಳನ್ನು ವಿತರಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಂದಿನ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅದನ್ನು ಅನುಸರಿಸಿ ಶಾಲಾ ಮಕ್ಕಳಿಗೆ ಸರ್ಕಾರದಿಂದ ಶೂ ಮತ್ತು ಸಾಕ್ಸ್ ವಿತರಿಸುವ ಕಾರ್ಯ ಪ್ರಾರಂಭಿಸಿದರು. ಈ ಬಾರಿ ಸಂಘದವರು ಬ್ಯಾಗ್ ವಿತರಿಸಿ ಮಾದರಿಯಾಗಿದ್ದಾರೆ ಎಂದರು. ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಮಾತನಾಡಿ, ‘ಪತ್ರಕರ್ತರಿಗೆ ಸೇವಾ ಭದ್ರತೆ ಕೊಡುವ ಬಗ್ಗೆ ಸರ್ಕಾರ ಯೋಚಿಸುತ್ತಿದೆ’ ಎಂದರು. ಚಿತ್ತಾಕುಲಾ ಗ್ರಾಪಂ ಅಧ್ಯಕ್ಷ ರಾಜು ತಾಂಡೇಲ, ಸತ್ಯಸಾಯಿ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ರಾಮದಾಸ ಆಚಾರಿ, ಜಿಲ್ಲಾ ವಾರ್ತಾಧಿಕಾರಿ ಹಿಮಂತರಾಜು ಜಿ. ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಟಿ.ಬಿ. ಹರಿಕಾಂತ ಸ್ವಾಗತಿಸಿದರು. ಅಚ್ಯುತಕುಮಾರ ಯಲ್ಲಾಪುರ, ಗಣೇಶ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.
ಟ್ಯಾಗೋರ್ ಪ್ರಶಸ್ತಿ: ಪತ್ರಕರ್ತರಾದ ನಾರಾಯಣ ಹೆಗಡೆ, ಪಿ.ಕೆ. ಚಾಪಗಾಂವಕರ್, ದಿನೇಶ ಯಲ್ಲಾಪುರ ಅವರಿಗೆ ಟ್ಯಾಗೋರ್ ಪ್ರಶಸ್ತಿ ಪ್ರದಾನ ಮಾಡಲಾಯಿತು. 101 ವರ್ಷ ಪೂರೈಸಿದ ಕಾನಡಾ ವೃತ್ತ ಪತ್ರಿಕೆಯ ಸಂಪಾದಕ ಶ್ರೀಕಾಂತ ಶ್ಯಾನಭಾಗ, ಕ್ರಿಯಾಶೀಲ ವರದಿಗಾರಿಕೆಗಾಗಿ ಪ್ರಶಾಂತ ಮಹಾಲೆ, ಎಸ್.ಎಸ್.ಸಂದೀಪ ಸಾಗರ, ವಾಸುದೇವ ಗೌಡ, ಗುರುಪ್ರಸಾದ ಹೆಗಡೆ ಹಾಗೂ ದೇವರಾಜ ನಾಯ್ಕ ಅವರನ್ನು ಸನ್ಮಾನಿಸಲಾಯಿತು.
ಉಚಿತ ಆರೋಗ್ಯ ತಪಾಸಣೆ
ಪತ್ರಿಕಾ ದಿನಾಚರಣೆಯ ಜತೆಗೆ ಅದೇ ಸ್ಥಳದಲ್ಲಿ ಸತ್ಯ ಸಾಯಿ ಸೇವಾ ಸಂಸ್ಥೆಯ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಕೈಗೊಳ್ಳಲಾಯಿತು. ವೈದ್ಯರಾದ ಚಂದ್ರಶೇಖರ ಕದಂ, ಕಿರಣ ರೇವಣಕರ್, ಜೋತ್ಸಾ್ನ ರೇವಣಕರ್, ಸುಭಾಷ ತಾಂಡೇಲ, ಸುದಿತಾ ಪೆಡ್ನೇಕರ್ ಅವರು 137 ಜನರಿಗೆ ಉಚಿತ ತಪಾಸಣೆ ಮಾಡಿ ಔಷಧಿ ವಿತರಿಸಿದರು. ಸಾಯಿ ಸಂಸ್ಥೆ ಕಾರ್ಯಕರ್ತರು ಸಹಕರಿಸಿದರು.