ಧಾರವಾಡ : ಸಮಗ್ರ ಶಾಲಾ ಸ್ವಚ್ಚತೆ ಹಾಗೂ ಕೋವಿಡ್ 19 ಮುಂಜಾಗ್ರತೆ ಕ್ರಮದ ಬಗ್ಗೆ ಸಂಪೂರ್ಣ ಮೇಲುಸ್ತುವಾರಿಯು ಮುಖ್ಯೋಪಾಧ್ಯಾಯರ ಮತ್ತು ಶೈಕ್ಷಣಿಕ ಮೇಲ್ವಿಚಾರಕರ ಜವಾಬ್ದಾರಿಯಾಗಿದೆ ಎಂದು ಡಯಟ್ ಪ್ರಾಚಾರ್ಯ ವೈ.ಬಿ.ಬಾದವಾಡಗಿ ಅಭಿಪ್ರಾಯಪಟ್ಟರು.
ಶಹರದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಸಭಾಭವನದಲ್ಲಿ ಮುಖ್ಯೋಪಾಧ್ಯಾಯರ ಸಭೆಯಲ್ಲಿ ಮಾತನಾಡಿ, ಮಾರ್ಚ 2020 ರಿಂದ ಕೋವಿಡ್ ಕಾರಣದಿಂದ ಶಾಲೆಗೆ ರಜೆ ನೀಡಲಾಗಿದ್ದು ಎಲ್ಲಾ ಶಾಲೆಗಳಲ್ಲಿ ಸೋಂಕು ನಿವಾರಕ ರಾಸಾಯನಿಕ ಬಳಸಿ ಸ್ವಚ್ಚಗೊಳಿಸಲು ಸೂಚನೆ ನೀಡಲಾಗಿದೆ. ವಿದ್ಯಾರ್ಥಿಗಳ, ಶಿಕ್ಷಕರ ಸುರಕ್ಷತೆಗಾಗಿ ಸರ್ಕಾರ ಹಲವು ಅಗತ್ಯ ಕ್ರಮ ತೆಗೆದುಕೊಂಡಿದ್ದು ಇಲಾಖೆಯು ಇದನ್ನು ಸಮರ್ಥವಾಗಿ ನಿಭಾಯಿಸಲಿದೆ ಎಂದರು.
ಮಕ್ಕಳನ್ನು ಶಾಲೆಗೆ ಕಳುಹಿಸುವಾಗ ಪೆÇೀಷಕರು ವಹಿಸಬೇಕಾದ ಕ್ರಮ, ಶಾಲೆಯಲ್ಲಿ ವಿದ್ಯಾರ್ಥಿಗಳ ನಡುವೆ ದೈಹಿಕ ಅಂತರ ಕಾಯ್ದುಕೊಳ್ಳುವಿಕೆ, ಸೋಂಕು ತಗುಲದಂತೆ ವಹಿಸಬೇಕಾದ ಮುನ್ನೆಚ್ಚರಿಕಾ ಅಭ್ಯಾಸ, ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಭಾವನಾತ್ಮಕ ಆರೋಗ್ಯ ಮುಖ್ಯವಾಗಿದೆ ಎಂದರು.
ಸಹಾಯಕ ಯೋಜನಾ ಸಮನ್ವಯ ಅಧಿಕಾರಿ ಶಿವಲೀಲಾ ಕಳಸಣ್ಣವರ ಮಾತನಾಡಿ, ಶಾಲೆಗೆ ಆಗಮಿಸುವ ಮಕ್ಕಳು ತಮ್ಮ ಪೆÇೀಷಕರಿಂದ ಪರವಾನಿಗೆ ಪತ್ರ ತರಬೇಕು, ಶಾಲಾ ದಾಖಲಾತಿ ಮುಖ್ಯವಾಗಿದ್ದು ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯವಿಲ್ಲ. ಶಾಲೆಗೆ ಆಗಮಿಸುವ ಮಕ್ಕಳ ಆರೋಗ್ಯದ ಬಗ್ಗೆ ನಿಗಾ ಇಡಬೇಕು, ಕುಡಿಯಲು ಬಿಸಿ ನೀರಿನ ವ್ಯವಸ್ಥೆ ಮಾಡಿಕೊಳ್ಳಬೇಕು, ನೆಗಡಿ,ಕೆಮ್ಮು,ಜ್ವರ ಲಕ್ಷಣವಿದ್ದಲ್ಲಿ ಶಾಲೆಗೆ ಪ್ರವೇಶ ಮಾಡಬಾರದು, ಮಾಸ್ಕ ಧರಿಸುವುದು ಕಡ್ಡಾಯವಿದ್ದು ಸೋಪಿನಿಂದ ಕೈ ತೊಳೆಯಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು. ಶಾಲೆಗೆ ಆಗಮಿಸುವ ಹಾಗೂ ನಿರ್ಗಮಿಸುವ ಸಮಯದಲ್ಲಿ ದೈಹಿಕ ಅಂತರ ಕಾಪಾಡಿಕೊಳ್ಳಬೇಕು. ಶಾಲಾ ಆವರಣದಲ್ಲಿ ಮಕ್ಕಳು ಗುಂಪುಗೂಡುವದಾಗಲಿ ಎಲ್ಲರೂ ಸೇರಿ ಆಟವಾಡುವುದಾಗಲಿ ಮಾಡಬಾರದು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ.ಖಾಜಿ ಮಾತನಾಡಿ, ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ತಡೆಯಲು ವಿದ್ಯಾಗಮ ಸಹಕಾರಿಯಾಗಿದ್ದು ಶಿಕ್ಷಕ ಮತ್ತು ಮಕ್ಕಳ ನಡುವಿನ ಬಾಂಧವ್ಯ ಸೇತುವೆಯಾಗಿ ನೆರವೇರಲಿದೆ. ಕಲಿಕಾಂಶಗಳ ಕಲಿಕೆಗೆ ಒತ್ತು ನೀಡಬೇಕಿದ್ದು ಭೋದನಾ ಕಲಿಕಾ ಪ್ರಕ್ರಿಯೆ ಮತ್ತು ಮೌಲ್ಯಮಾಪನ ವಿಧಾನ ಅನುಸರಿಸಬೇಕು ಎಂದರು.
ಡಯಟ್ ಉಪನ್ಯಾಸಕರಾದ ಸಾವಿತ್ರಿ ಕೋಳಿ, ಸಮನ್ವಯ ಅಧಿಕಾರಿ ಎಂ.ವಿ.ಅಡವೇರ ಹಾಗೂ ಬಿಆರ್.ಪಿ, ಸಿಆರ್.ಪಿ, ಎಲ್ಲ ಮುಖ್ಯೋಪಾಧ್ಯಾಯರು, ಶೈಕ್ಷಣಿಕ ಮೇಲ್ವಿಚಾರಕರು ಉಪಸ್ಥಿತರಿದ್ದರು.