ಹೊಸದಿಲ್ಲಿ: ಕೋವಿಡ್ 2ನೇ ಅಲೆ ಎದುರಿಸಲು ಸಿದ್ಧತೆ ಅಸಮರ್ಪಕವಾಗಿತ್ತು :ನಿರ್ಮಲಾ ಸೀತಾರಾಮನ್
ಹೊಸದಿಲ್ಲಿ: ಭಾರತದಲ್ಲಿ ಕೊರೋನ ಎರಡನೇ ಅಲೆಯ ತೀವ್ರತೆ ಹೆಚ್ಚಾಗಿದೆ ಎಂಬುದನ್ನು ಒಪ್ಪಿಕೊಂಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೊರೋನ ಎರಡನೇ ಅಲೆಯ ಉಲ್ಬಣವನ್ನು ನಿಯಂತ್ರಿಸಲು ಮಾಡಿದ ಸಿದ್ಧತೆ ಅಸಮರ್ಪಕವಾಗಿದೆ ಎಂಬುದು ಸಾಬೀತಾಗಿದೆ ಎಂದಿದ್ದಾರೆ.
ಐಐಎಂಬಿ ಹಳೆ ವಿದ್ಯಾರ್ಥಿಗಳ ಸಂಘಟನೆ ಶನಿವಾರ ಆಯೋಜಿಸಿದ್ದ ತಜ್ಞರ ಸಮಾವೇಶದಲ್ಲಿ ನಿರ್ಮಲಾ ಸೀತಾರಾಮನ್ ಅವರು ಮಾತನಾಡಿದರು.
2020ರ ಪರಿಸ್ಥಿತಿ 2021ರಲ್ಲಿ ಇಲ್ಲ ಎಂಬುದು ನಮಗೆಲ್ಲಾ ತಿಳಿದಿದೆ. ಕೆಲವು ವಿಷಯಗಳಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಆದರೆ, ಇನ್ನು ಕೆಲವು ವಿಷಯಗಳಲ್ಲಿ ಬಹುಶಃ ನಾವು ಸ್ವಲ್ಪ ಉತ್ತಮವಾಗಿ ಸಿದ್ಧರಾಗಿದ್ದೇವೆ. ಎರಡನೇ ಅಲೆ ಇಷ್ಟು ಪ್ರಮಾಣದಲ್ಲಿ ಹಾಗೂ ತೀವ್ರತೆಯಲ್ಲಿ ಬಂದಿರುವುದರಿಂದ ಸಿದ್ಧತೆ ಸಾಕಾಗಿಲ್ಲ ಎಂದು ಸೀತಾರಾಮನ್ ಹೇಳಿದರು.
ಸಮಾವೇಶದ ಚರ್ಚೆಯ ಪರಿಕಲ್ಪನೆ ಎರಡನೇ ಅಲೆಯ ಬಳಿಕ ಚೇತರಿಕೆ, ಪುನರ್ವಸತಿ ಹಾಗೂ ತಡೆ ಆಗಿತ್ತು.
ಸಿಎಂಸಿ ವೆಲ್ಲೂರಿನ ವೈದ್ಯಕೀಯ ವಿಜ್ಞಾನಿ, ಪ್ರೊ. ಗಗನ್ದೀಪ್ ಕಂಗ್, ಇಷ್ಟು ತ್ವರಿತವಾಗಿ ಲಸಿಕೆಗಳು ಬೇಕಾಗುತ್ತವೆ ಎಂದು ಭಾರತದಲ್ಲಿ ಯಾರೊಬ್ಬರೂ ಊಹಿಸಿರಲಿಲ್ಲ ಎಂದರು.
ದೇಶದ ಜನರಿಗೆ ತ್ವರಿತವಾಗಿ ಲಸಿಕೆ ಹಾಕುವುದು ಅಗತ್ಯ ಎಂಬುದು ಮನಗಾಣುವುದಕ್ಕೆ ಮುನ್ನ ಮೊದಲ ಹಲವು ವಾರಗಳ ಕಾಲ ಲಸಿಕೆ ಹಾಕುವುದು ನಿಧಾನವಾಗಿ ನಡೆಯಿತು ಎಂದು ಅವರು ಹೇಳಿದರು.
ಆದರೆ, ಎಲ್ಲರಿಗೂ ತ್ವರಿತವಾಗಿ ಲಸಿಕೆ ಹಾಕುವುದು ಸುಲಭವಲ್ಲ. ಯಾಕೆಂದರೆ, ನಿಗದಿಪಡಿಸಿರುವಷ್ಟು ಲಸಿಕೆಗಳನ್ನು ಮಾತ್ರ ಪೂರೈಸಲು ವ್ಯವಸ್ಥೆ ಮಾಡಲಾಗಿದೆ. 2021ರಲ್ಲಿ 250 ಕೋಟಿ ಹೆಚ್ಚುವರಿ ಡೋಸ್ಗಳು ಬೇಕಾಗಬಹುದು ಎಂದು ನಾವು ಕಳೆದ ವರ್ಷ ಅಂದಾಜಿಸಿದ್ದೆವು. ಆದರೆ, ಬಹುಪಕ್ಷೀಯ ಏಜೆನ್ಸಿಗಳು ಹಾಗೂ ಸರಕಾರಗಳ ಸಾಕಷ್ಟು ಪರಿಶ್ರಮದಿಂದಾಗಿ ಈ ವರ್ಷ 600 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಡೋಸ್ ಲಸಿಕೆಗಳು ಉತ್ಪಾದಿಸಬೇಕು ಎಂದು ನಾವು ಭಾವಿಸಿದೆವು ಎಂದು ಅವರು ಹೇಳಿದ್ದಾರೆ.
ಲಸಿಕೆ ಅಗ್ಗದ, ಸುರಕ್ಷಿತ ಹಾಗೂ ಕೋವಿಡ್ -19ರ ವಿರುದ್ಧದ ಉತ್ತಮ ರಕ್ಷಣೆಯಾಗಿದೆ ಎಂದು ನಾರಾಯಾಣ ಹೆಲ್ತ್ನ ಅಧ್ಯಕ್ಷ ಹಾಗೂ ಕಾರ್ಯಕಾರಿ ನಿರ್ದೇಶಕ ಡಾ. ದೇವಿ ಶೆಟ್ಟಿ ಹೇಳಿದ್ದಾರೆ.
ಮಕ್ಕಳಿಗೆ ಸೋಂಕು ತಗುಲದಂತೆ ಜನರು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದ ಅವರು, ಕಂಟೈನ್ಮೆಂಟ್ ನ ಅತಿ ಪ್ರಮುಖವಾದ ಅಗತ್ಯವೆಂದರೆ, ವೈದ್ಯಕೀಯ ಸಿಬ್ಬಂದಿಯನ್ನು ಹೆಚ್ಚಿಸುವುದು ಎಂದರು.
ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆ ನಿರ್ಮಿಸುವ ಅಗತ್ಯತೆ ಇದೆ ಎಂದು ನಾವು ಪ್ರತಿಯೊಬ್ಬರೂ ಭಾವಿಸುತ್ತೇವೆ. ಆದರೆ, ಆಸ್ಪತ್ರೆಗಳು ಸಮಸ್ಯೆ ಬಗೆಹರಿಸಲಾರವು. ಆಸ್ಪತ್ರೆಗಳನ್ನು ಕಟ್ಟಲು ಅಡ್ಡಿಯಾಗುತ್ತಿರುವುದು ಆಸ್ಪತ್ರೆಗೆ ಕಟ್ಟಲು ಬೇಕಾದ ಹಣವಲ್ಲ. ಬದಲಿಗೆ ವೈದ್ಯರ ಕೊರತೆ, ಕೊರೋನ ರೋಗಿಗಳಿಗೆ ಆರೋಗ್ಯ ಸೇವೆ ನೀಡಲು ನಾವು ಹೋರಾಡುತ್ತಿದ್ದೇವೆ. ಯಾಕೆಂದರೆ, ನಮ್ಮಲ್ಲಿ ವೈದ್ಯರು, ನರ್ಸ್ಗಳು ಹಾಗೂ ವೈದ್ಯಕೀಯ ತಂತ್ರಜ್ಞರ ಕೊರತೆ ಇದೆ ಎಂದು ಅವರು ಹೇಳಿದರು.