ಭಟ್ಕಳ: ಹೈಕೋರ್ಟ ನ್ಯಾಯಮೂರ್ತಿ ಹುದ್ದೆಗೆ ಭಟ್ಕಳ ಮೂಲದ ಹೈಕೋರ್ಟ ನ್ಯಾಯವಾದಿ ನಾಗೇಂದ್ರ ರಾಮಚಂದ್ರ ನಾಯ್ಕ ಇವರ ಹೆಸರನ್ನು ಪರಿಗಣಿಸುವಂತೆ ಸುಪ್ರೀಮ್ ಕೋರ್ಟಿನ ಕೊಲಿಜಿಯಂ ಸಮಿತಿ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿದೆ.
ನೇರನಹಳ್ಳಿ ಶ್ರೀನಿವಾಸನ್ ಸಂಜಯ್ ಗೌಡ, ಜ್ಯೋತಿ ಮೂಲಿಮನೆ, ರಂಗಸ್ವಾಮಿ ನಟರಾಜ್, ಹೇಮಂತ್ ಚಂದನಗೌಡರ್, ತರೀಕರೆ ಸತ್ಯನಾರಾಯಣ ವೆಂಕಟೇಶ, ರವಿ ವೆಂಕಪ್ಪ ಹೊಸಮನಿ, ಪ್ರದೀಪ್ ಸಿಂಗ್ ಯೆರೂರ್, ಮಹೇಶನ್ ನಾಗಪ್ರಸನ್ನ ಕೊಲಿಜಿಯಂ ಶಿಫಾರಸ್ಸಿನ ಪಟ್ಟಿ ಸೇರಿದ ಉಳಿದ ಅಭ್ಯರ್ಥಿಗಳಾಗಿದ್ದಾರೆ.
ನಾಗೇಂದ್ರ ನಾಯ್ಕ ಹೈಕೋರ್ಟ ನ್ಯಾಯಾಧೀಶ ಹುದ್ದೆಗೇರುವ ಭಟ್ಕಳದ ಪ್ರಪ್ರಥಮ ವ್ಯಕ್ತಿಯಾಗಲಿದ್ದಾರೆ. ತಾಲೂಕಿನ ಯಲ್ವಡಿಕವೂರು ಗ್ರಾಮ ಪಂಚಾಯತ ವ್ಯಾಪ್ತಿಯ ಸರ್ಪನಕಟ್ಟೆ ನಿವಾಸಿ, ಜ್ಯಾತ್ಯಾತೀತ ವ್ಯಕ್ತಿತ್ವ ಹಾಗೂ ಸರಳತೆಯನ್ನು ಮೈಗೂಡಿಸಿಕೊಂಡಿದ್ದ ನಾಗೇಂದ್ರ ನಾಯ್ಕ ಕಳೆದ 26 ವರ್ಷಗಳಿಂದ ಬೆಂಗಳೂರು ಉಚ್ಚ ನ್ಯಾಯಾಲಯದಲ್ಲಿ ನ್ಯಾಯವಾದಿಯಾಗಿ ಕೆಲಸ ಮಾಡುತ್ತಿದ್ದಾರೆ.
ಇವರು ಭಟ್ಕಳ ಅಂಜುಮನ್ ಕಾಲೇಜಿನಲ್ಲಿ ಪದವಿ ಹಾಗೂ ಬೆಂಗಳೂರಿನಲ್ಲಿ ಎಲ್ಎಲ್ಬಿ ವಿದ್ಯಾಭ್ಯಾಸ ಮುಗಿಸಿದ್ದಾರೆ. ವಿಶೇಷ ಎಂದರೆ ತೋಟಗಾರಿಕೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದ ಅವರು, ಅಲಂಕಾರಿಕಾ ಪುಷ್ಪವನ್ನು ಬೆಳೆದು ಪ್ರಗತಿಪರ ಕೃಷಿಕನಾಗಿ ಪ್ರಶಸ್ತಿ ಸಮ್ಮಾನವನ್ನು ಪಡೆದಿದ್ದರು. ನಾಗೇಂದ್ರ ನಾಯ್ಕ ಹೆಸರನ್ನು ಕೊಲಿಜಿಯಂ ಶಿಫಾರಸ್ಸು ಮಾಡುತ್ತಿದ್ದಂತೆಯೇ ಭಟ್ಕಳ ಮಾತ್ರವಲ್ಲ, ಉತ್ತರಕನ್ನಡ ಜಿಲ್ಲೆಯಲ್ಲಿರುವ ಅವರ ಆತ್ಮೀಯರು, ಒಡನಾಡಿಗಳು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.