ಕುಸ್ತಿಪಟುಗಳ ವಿರುದ್ಧ ಪೊಲೀಸ್ ದೌರ್ಜನ್ಯ; 45 ದಿನಗಳೊಳಗೆ ಡಬ್ಲ್ಯುಎಫ್ಐಗೆ ಚುನಾವಣೆ ನಡೆಸದೇ ಇದ್ದಲ್ಲಿ ಅಮಾನತುಗೊಳಿಸುವ ಎಚ್ಚರಿಕೆ; ಇಂದು ರೈತರ ಮಹಾ ಪಂಚಾಯತ್
ಹೊಸದಿಲ್ಲಿ: ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಆಗ್ರಹಿಸಿ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆ ಕುರಿತು ಚರ್ಚೆ ನಡೆಸಲು ಉ.ಪ್ರ.ದ ಮುಝಫರ್ ನಗರದ ಸೋರಂ ಗ್ರಾಮದಲ್ಲಿ ಗುರುವಾರ 'ಮಹಾಪಂಚಾಯತ್' ನಡೆಸಲಾಗುವುದು ಎ೦ದು ಭಾರತೀಯ ಕಿಸಾನ್ ಒಕ್ಕೂಟದ ನಾಯಕ ನರೇಶ್ ಟಿಕಾಯತ್ ತಿಳಿಸಿದ್ದಾರೆ.
ಪ್ರತಿಭಟನೆಯ ವಿಷಯವನ್ನು ಮಹಾಪಂಚಾಯತ್ನಲ್ಲಿ ವಿಕೃತವಾಗಿ ಚರ್ಚೆ ನಡೆಸಲಾಗುವುದು ಎಂದು ಬಾಲ್ಯನ್ ಖಾಪ್ನ ಮುಖ್ಯಸ್ಥ ನರೇಶ್ ಟಿಕಾಯತ್ ಅವರು ಮಂಗಳವಾರ ರಾತ್ರಿ ಹೇಳಿದ್ದಾರೆ.
ಕುಸ್ತಿಪಟುಗಳ ಪ್ರತಿಭಟನೆಯ ಕುರಿತು ಮುಂದಿನ ನಡೆಯನ್ನು ನಿರ್ಧರಿಸಲು ನಡೆಸುವ ಈ 'ಮಹಾ ಪಂಚಾಯತ್'ನಲ್ಲಿ ಉತ್ತರಪ್ರದೇಶ, ಹರ್ಯಾಣ, ಪಂಜಾಬ್, ರಾಜಸ್ಥಾನ ಹಾಗೂ ದಿಲ್ಲಿಯ ವಿವಿಧ ಖಾಪ್ಗಳ ಪ್ರತಿನಿಧಿಗಳು ಹಾಗೂ ಮುಖ್ಯಸ್ಥರು ಭಾಗವಹಿಸಲಿದ್ದಾರೆ ಎಂದು ನರೇಶ್ ಟಿಕಾಯತ್ ಅವರು ತಿಳಿಸಿದ್ದಾರೆ. ನಾಟಕೀಯ ಬೆಳವಣಿಗೆಯಲ್ಲಿ ಮಂಗಳವಾರ (ಮೇ 30) ದೇಶದ ಕೆಲವು ಅತ್ಯುತ್ತಮ ಕುಸ್ತಿಪಟುಗಳು ಸಾವಿರಾರು ಬೆಂಬಲಿಗರೊಂದಿಗೆ ಹರಿದ್ವಾರದ ಗಂಗಾ ನದಿ ದಂಡೆಯಲ್ಲಿ ಸೇರಿ ತಮ್ಮ ಎಲ್ಲಾ ಪದಕಗಳನ್ನು ನೀರಿಗೆ ಎಸೆಯುವುದಾಗಿ ಬೆದರಿಕೆ ಒಡ್ಡಿದ್ದರು. ಆದರೆ, ಖಾಪ್ ಹಾಗೂ ರೈತ ಮುಖಂಡರು ಮನವೊಲಿಸಿದ ಬಳಿಕ ಅವರು ತಮ್ಮ ನಿರ್ಧಾರವನ್ನು ಬದಲಾಯಿಸಿದ್ದರು. ಅನಂತರ ರೈತ ನಾಯಕರು ಕುಂದು ಕೊರತೆಗಳನ್ನು ಪರಿಹರಿಸಲು 5 ದಿನಗಳ ಕಾಲಾವಕಾಶ ಕೋರಿದ್ದರು. ಒಲಿಂಪಿಕ್ ಪದಕ ವಿಜೇತರಾದ ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ ಹಾಗೂ ಏಶ್ಯನ್ ಗೇಮ್ಸ್ನ ಚಿನ್ನದ ಪದಕ ವಿಜೇತೆ ವಿನೇಶ್ ಫೋಗಟ್ ಅವರು ಮಂಗಳವಾರ ಹರ್ ಕಿ ಪೌರಿಗೆ ತೆರಳಿ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಶನ್ ಮುಖ್ಯಸ್ಥನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದರು.
ಬ್ರಿಜ್ ಭೂಷಣ್ಗೆ ಪೊಸ್ಕೊ ಅನ್ವಯಿಸುವುದಿಲ್ಲವೇ? ಕಪಿಲ್ ಸಿಬಲ್:
ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಮಹಿಳಾ ಕುಸ್ತಿಪಟುಗಳು ಮಾಡಿರುವ ಲೈಂಗಿಕ ಕಿರುಕುಳದ ಆರೋಪಗಳ ಕುರಿತಾಗಿ ಕೇಂದ್ರ ಸರಕಾರದ ಧೋರಣೆಯನ್ನು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಬುಧವಾರ ತೀವ್ರವಾಗಿ ಖಂಡಿಸಿದ್ದಾರೆ. ಬ್ರಿಜ್ಭೂಷಣ್ ಸಿಂಗ್ ಬಿಜೆಪಿಯವರೆಂಬ ಕಾರಣದಿಂದಾಗಿ ಪೊಸ್ಕೊ ಕಾಯ್ದೆಯು ಅವರಿಗೆ ಅನ್ವಯಿಸುವುದಿಲ್ಲ ಹಾಗೂ ಇನ್ನೂ ಅವರ ಬಂಧನವಾಗಿಲ್ಲವೆಂದು ಅವರು ಟೀಕಿಸಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವ ಸಿಬಲ್ ಅವರು, ಬ್ರಿಜ್ ಭೂಷಣ್ ಸಿಂಗ್ ಅವರನ್ನು ಹೊರತುಪಡಿಸಿ ಇತರ ಎಲ್ಲಾ ಆರೋಪಿಗಳಿಗೆ ಪೊಸ್ಕೊ ಕಾಯ್ದೆ ಅನ್ವಯಿಸುತ್ತದೆ ಹಾಗೂ ತಕ್ಷಣವೇ ಅವರ ಬಂಧನವಾಗುತ್ತದೆ' ಎಂದು ಹೇಳಿದರು.