ಕುಸ್ತಿಪಟುಗಳ ವಿರುದ್ಧ ಪೊಲೀಸ್ ದೌರ್ಜನ್ಯ; ಜಾಗತಿಕ ಕುಸ್ತಿ ಸಂಘಟನೆ ಖಂಡನೆ; ಡಬ್ಲ್ಯುಎಫ್ಐ ಅಧ್ಯಕ್ಷ ಬ್ರಿಜ್ ಭೂಷಣ್ ವಿರುದ್ಧ ಕ್ರಮಕ್ಕೆ ಆಗ್ರಹ
ಹೊಸದಿಲ್ಲಿ: ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಬಂಧನಕ್ಕೆ ಆಗ್ರಹಿಸಿ ರವಿವಾರ ನೂತನ ಸಂಸತ್ ಭವನಕ್ಕೆ ಕಾಲ್ನಡಿಗೆ ಜಾಥಾ ನಡೆಸಿದ ಕುಸ್ತಿಪಟುಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ಸಂಯುಕ್ತ ವಿಶ್ವ ಕುಸ್ತಿ ಕ್ರೀಡೆ ಸಂಘಟನೆ (ಯುಡಬ್ಲ್ಯುಡಬ್ಲ್ಯು) ಬುಧವಾರ ಖಂಡಿಸಿದೆ.
'ಭಾರತೀಯ ಕುಸ್ತಿ ಫೆಡರೇಶನ್ನ ವರಿಷ್ಠ ಬ್ರಿಜ್ ಭೂಷಣ್ ವಿರುದ್ಧದ ಲೈಂಗಿಕ ಕಿರುಕುಳದ ಆರೋಪಗಳ ಬಗ್ಗೆ ನಡೆಸಲಾಗುತ್ತಿರುವ ತನಿಖೆಯ ಬಗ್ಗೆಯೂ ಯುಡಬ್ಲ್ಯುಡಬ್ಲ್ಯು ಅಸಮಾಧಾನ ವ್ಯಕ್ತಪಡಿಸಿದೆ. ಒಂದು ವೇಳೆ ಭಾರತೀಯ ಕುಸ್ತಿ ಫೆಡರೇಶನ್ನ ಆಡಳಿತ ಮಂಡಳಿಗೆ 45 ದಿನಗಳೊಳಗೆ ಚುನಾವಣೆಗಳು ನಡೆಯದಿದ್ದಲ್ಲಿ ಫೆಡರೇಶನ್ನನ್ನು ಅಮಾನ ತಿನಲ್ಲಿರಿಸುವುದಾಗಿಯೂ ಎಚ್ಚರಿಕೆ ನೀಡಿದೆ.
“ಕುಸ್ತಿಪಟುಗಳ ಬಂಧನವನ್ನು ಹಾಗೂ ಅವರನ್ನು ನಡೆಸಿಕೊಂಡ ರೀತಿಯನ್ನು ಯುಡಬ್ಲ್ಯುಡಬ್ಲ್ಯು ಬಲವಾಗಿ ಖಂಡಿಸಿದೆ. ಬ್ರಿಜ್ ಭೂಷಣ್ ವಿರುದ್ಧ ನಡೆಯುತ್ತಿರುವ ತನಿಖೆಯಲ್ಲಿ ಫಲಿತಾಂಶಗಳ ಕೊರತೆಯಿರುವ ಬಗ್ಗೆ ಅದು ಅಸಮಾಧಾನ ವ್ಯಕ್ತಪಡಿಸಿದೆ. ಬ್ರಿಜ್ ಭೂಷಣ್ ವಿರುದ್ಧದ ಆರೋಪಗಳ ಬಗ್ಗೆ ಸಮಗ್ರ ಹಾಗೂ ಪಕ್ಷಪಾತ ರಹಿತ ತನಿಖೆಯಾಗಬೇಕೆಂದು” ಯುಡಬ್ಲ್ಯುಡಬ್ಲ್ಯು ಹೇಳಿಕೆಯೊಂದರಲ್ಲಿ ತಿಳಿಸಿದೆ.