ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ 4 ವರ್ಷಗಳನ್ನು ಪೂರೈಸಿರುವ ನಡುವೆಯೇ modireportcard.com ಎನ್ನುವ ವೆಬ್ ಸೈಟ್ ಒಂದು ಕೇಂದ್ರ ಸರಕಾರ ಯಾವ್ಯಾವ ಕ್ಷೇತ್ರಗಳಲ್ಲಿ ಅಕ್ಷರಶಃ ವಿಫಲವಾಗಿದೆ ಎನ್ನುವ ಪಟ್ಟಿ ಮಾಡಿದೆ.
“ತಾನು ಪ್ರಧಾನಮಂತ್ರಿಯಾದರೆ ದೇಶವನ್ನು ಸುವರ್ಣಯುಗಕ್ಕೆ ಕೊಂಡೊಯ್ಯಲಿದ್ದೇನೆ ಎಂದು 2014ರಲ್ಲಿ ನರೇಂದ್ರ ಮೋದಿ ಭರವಸೆ ನೀಡಿದ್ದರು. ಲಕ್ಷಾಂತರ ಭಾರತೀಯರು ಅವರ ಅಭಿವೃದ್ಧಿ, ಉದ್ಯೋಗ, ಹಾಗು ಅಚ್ಚೇ ದಿನ್ ನ ಭರವಸೆಯನ್ನು ನಂಬಿ ಅಧಿಕಾರಕ್ಕೆ ತಂದರು. 4 ವರ್ಷಗಳ ನಂತರ ಭಾರತ ಹೇಗಿದೆ? ನರೇಂದ್ರ ಮೋದಿ ರಿಪೋರ್ಟ್ ಕಾರ್ಡ್ ನಿಮಗೆ ಉತ್ತರ ನೀಡುತ್ತದೆ” ಎನ್ನುವ ಒಕ್ಕಣೆ modireportcard.com ವೆಬ್ ಸೈಟ್ ನ ಆರಂಭದಲ್ಲಿದೆ.
ಮೋದಿ ಸರಕಾರದ ವೈಫಲ್ಯಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ‘ನಿರುದ್ಯೋಗ’
ಮೋದಿ ಸರಕಾರ ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳ ನಂತರ ವಿಶ್ವದಲ್ಲೇ ಭಾರತದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ನಿರುದ್ಯೋಗಿಗಳಿದ್ದಾರೆ ಎಂದು modireportcard.com ವೆಬ್ ಸೈಟ್ ಹೇಳುತ್ತದೆ.
ಪ್ರತಿ ವರ್ಷ ಒಂದು ಕೋಟಿ ಉದ್ಯೋಗ ಸೃಷ್ಟಿಯ ಭರವಸೆ ನೀಡಿ ಮೋದಿ ಅಧಿಕಾರಕ್ಕೆ ಬಂದಿದ್ದರು. ಆದರೆ ಕೇಂದ್ರ ಸರಕಾರವು ವಾರ್ಷಿಕ 2.05 ಲಕ್ಷ ಮಂದಿಗಷ್ಟೇ ಉದ್ಯೋಗ ನೀಡಿದೆ. 2014ರಲ್ಲಿ 3.41ಶೇ.ದಷ್ಟಿದ್ದ ನಿರುದ್ಯೋಗದ ಪ್ರಮಾಣ 2018ರಲ್ಲಿ 6.23ರಷ್ಟಾಗಿದೆ.
ಭರವಸೆ ನೀಡಿದಂತೆ 4 ವರ್ಷಗಳಲ್ಲಿ 4 ಕೋಟಿ ಉದ್ಯೋಗ ಸೃಷ್ಟಿಯ ಬದಲಾಗಿ, 8.23 ಲಕ್ಷ ಉದ್ಯೋಗಗಳಷ್ಟೇ ಸೃಷ್ಟಿಯಾಗಿವೆ ಎಂದು ತಿಳಿಸಲಾಗಿದೆ. ಇದಕ್ಕೆ ಬೇಕಾದ ಸುದ್ದಿಯ ಲಿಂಕ್ ಗಳನ್ನೂ ನಮೂದಿಸಲಾಗಿದೆ.
ಇಷ್ಟೇ ಅಲ್ಲದೆ ಇತ್ತೀಚಿನ ದಿನಗಳಲ್ಲಿ ದೇಶದ ಜನರ ಕೋಪಕ್ಕೆ ತುತ್ತಾಗಿರುವ ಪೆಟ್ರೋಲ್, ಡೀಸೆಲ್ ಬೆಲೆಯೇರಿಕೆ ಬಗ್ಗೆಯೂ ವಿವರಿಸಲಾಗಿದೆ. ಈ ಹಿಂದೆಂದಿಗಿಂತಲೂ ತೈಲ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಜಗತ್ತಿನಾದ್ಯಂತ ಕಚ್ಛಾ ತೈಲ ಬೆಲೆಯು ಕನಿಷ್ಠವಿರುವ ಈ ಸಮಯದಲ್ಲಿ ದೇಶದಲ್ಲಿ ಈ ಪರಿಸ್ಥಿತಿಯಿದೆ. ಬಿಜೆಪಿ ಸರಕಾರವು ಪೆಟ್ರೋಲ್ ಹಾಗು ಡೀಸೆಲ್ ಬೆಲೆಯನ್ನು ಹೆಚ್ಚಿಸುತ್ತಲೇ ಇದೆ. ತೈಲದ ಮೇಲಿನ ಸುಂಕದಿಂದ 2014ರಿಂದ ಸರಕಾರವು 4.5 ಲಕ್ಷ ಕೋಟಿ ರೂ,ಗಳನ್ನು ಗಳಿಸಿದೆ. ಅದರೆ ಜನಸಾಮಾನ್ಯರಿಗಾಗಿ ಯಾವ ಪ್ರಯೋಜನವನ್ನೂ ನೀಡಿಲ್ಲ. “ಈ ಎಲ್ಲಾ ಹಣ ಎಲ್ಲಿ ಹೋಯಿತು?” ಎನ್ನುವುದೇ ಅತೀ ದೊಡ್ಡ ಪ್ರಶ್ನೆಯಾಗಿದೆ” ಎಂದು modireportcard.com ವೆಬ್ ಸೈಟ್ ಉಲ್ಲೇಖಿಸಿದೆ.
ಕೇಂದ್ರ ಸರಕಾರದ ವೈಫಲ್ಯಗಳನ್ನು ಪಟ್ಟಿ ಮಾಡಲೆಂದೇ ಈ ವೆಬ್ ಸೈಟನ್ನು ರಚಿಸಲಾಗಿದೆ. ಸರಕಾರದ ಪ್ರತಿಯೊಂದು ವೈಫಲ್ಯತೆಗಳನ್ನು ಪಟ್ಟಿ ಮಾಡುವಾಗ ಸುದ್ದಿ ಲಿಂಕ್ ಗಳನ್ನು ನೀಡಲಾಗಿದೆ. ವ್ಯಂಗ್ಯಚಿತ್ರಗಳನ್ನು ಬಳಸಲಾಗಿದ್ದು, ಇಲಸ್ಟ್ರೇಟರ್ ಗಳ ಮೂಲಕ ವಿಷಯಗಳನ್ನು ಪ್ರಸ್ತುತಪಡಿಸಲಾಗಿದ್ದು, ಓದುಗರಿಗೆ ಸುಲಭವಾಗಿ ಮನದಟ್ಟಾಗುವ ಹಾಗೆ ಸರಳ ಭಾಷೆಯನ್ನು ಬಳಸಲಾಗಿದೆ. ಇಷ್ಟೇ ಅಲ್ಲದೆ ಕೆಲವೊಂದು ವೈಫಲ್ಯತೆಗಳನ್ನು ಪಟ್ಟಿ ಮಾಡುವ ಸಂದರ್ಭ ನಕಾಶೆಗಳ ಮೂಲಕವೂ ವಿವರಿಸಲಾಗಿದೆ. ಈ ವೆಬ್ ಸೈಟ್ ದಿನೇ ದಿನೇ ಹೆಚ್ಚು ಜನಪ್ರಿಯತೆ ಗಳಿಸುತ್ತಿದ್ದು, ಭಾರೀ ಮೆಚ್ಚುಗೆಗೂ ಪಾತ್ರವಾಗಿದೆ.
ಕೃಪೆ:vbnewsonline.com