ಭಟ್ಕಳ: ತಾಲೂಕಿನ ಹಾಡುವಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಮಂಗನ ಕಾಟ ವಿಪರೀತವಾಗಿದ್ದು, ಈ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಅಲ್ಲಿನ ಗ್ರಾಮಸ್ಥರು ಶುಕ್ರವಾರ ಬೆಳಿಗ್ಗೆ ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಹಾಡುವಳ್ಳಿ ಭಾಗದಲ್ಲಿ ನೂರಾರು ಕುಟುಂಬಗಳು ತಲೆತಲಾಂತರದಿಂದ ಕೃಷಿಯನ್ನೇ ಅವಲಂಬಿಸಿಕೊಂಡು ಜೀವನ ಸಾಗಿಸುತ್ತಿವೆ. ಕಳೆದ 4 ವರ್ಷಗಳಿಂದ ಮಂಗಗಳ ಕಾಟದಿಂದ ಬೆಳೆ ನಾಶವಾಗುತ್ತಿದ್ದು, ಜೀವನ ನಡೆಸಲು ಕಷ್ಟಕರವಾಗುತ್ತಿದೆ. ಮಂಗಗಳು ತೆಂಗು, ಭತ್ತ, ತರಕಾರಿ, ಕಬ್ಬು, ಬಾಳೆ ಸೇರಿದಂತೆ ಎಲ್ಲ ಬೆಳೆಗಳನ್ನು ತಿಂದು ಹಾಳು ಮಾಡಿವೆ. ಸಾಲ ಬಾಧೆ ರೈತರನ್ನು ಕಾಡುತ್ತಿದೆ.
ಗ್ರಾಮದಿಂದ ಮಂಗಗಳ್ನು ತೊಲಗಿಸದ ಹೊರತೂ ಕೃಷಿ, ತೋಟಗಾರಿಕೆ ಸಾಧ್ಯ ಇಲ್ಲದಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಮಂಗಗಳ ಕಾಟವನ್ನು ತೊಲಗಿಸು ಸೂಕ್ತ ಕ್ರಮ ಕೈಗೊಳ್ಳಬೇಕು ಅಥವಾ ಮಂಗಗಳನ್ನು ಓಡಿಸಲು ನಮಗೇ ಪರವಾನಿಗೆ ನೀಡಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ. ಆರ್ಎಫ್ಓ ಸವಿತಾ ದೇವಾಡಿಗ ಮನವಿ ಪತ್ರವನ್ನು ಸ್ವೀಕರಿಸಿದರು. ಗ್ರಾಮಸ್ಥರಾದ ಪದ್ಮರಾಜ ಮಂಜಯ್ಯ ಶೆಟ್ಟಿ, ರಾಮಾ ನಾಯ್ಕ, ಮಂಜುನಾಥ ನಾಯ್ಕ, ನಾರಾಯಣ ಗೊಂಡ, ನಿತ್ಯಾನಂದ ಪೂಜಾರಿ, ಮಹಾವೀರ ಶೆಟ್ಟಿ, ಶ್ರೀಧರ ನಾಯ್ಕ, ಮಂಜುನಾಥ ಗೊಂಡ, ನಾಗಪ್ಪ ಗೊಂಡ ಮೊದಲಾದವರು ಉಪಸ್ಥಿತರಿದ್ದರು.