ಕಾರವಾರ : ಗ್ರಾಮೀಣ ಪ್ರದೇಶದ ಸಾರ್ವಜನಿಕ ಅಥವಾ ಜನರು ಗುಂಪಾಗಿ ಸೇರಿರುವ ಸ್ಥಳಗಳಲ್ಲಿ ಮಾಸ್ಕ್ ಹಾಕಿಕೊಳ್ಳದೇ ಇರುವ ವ್ಯಕ್ತಿಗಳಿಗೆ ದಂಡ ವಿಧಿಸುವ ಕಾರ್ಯವಾಗಬೇಕೆಂದು ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ. ಅವರು ಸೂಚಿಸಿದರು
ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲೆಯ ಎಲ್ಲ ಎ ಸಿ, ತಹಸೀಲ್ದಾರ್, ತಾಲೂಕು ಆರೋಗ್ಯಾಧಿಕಾರಿ ಮತ್ತು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾಧ ನಡೆಸಿ ಮಾತನಾಡಿ ಜಿಲ್ಲೆಯಲ್ಲಿ ಈಗಾಗಲೇ ನಗರ ಪ್ರದೇಶದಲ್ಲಿರುವ ಕಚೇರಿಗಳಿಗೆ ಬರುವ ಸಾರ್ವಜನಿಕರಿಗೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿ ಮಾಡಲಾಗಿದೆ. ಅದೇ ರೀತಿ ಗ್ರಾಮ ಪಂಚಾಯತ್ ದಲ್ಲೂ ಕೂಡ ಕ್ರಮ ಕೈಗೊಳ್ಳಿ ಎಂದು ಅವರು ತಿಳಿಸಿದರು.
ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಕಷ್ಟ ಅನಿಸಬಹುದು ಆದರೆ ಮಾಸ್ಕ್ ಧರಿಸುವುದು ಸುಲಭೋಪಾಯವಾಗಿದ್ದು ಇದರ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು, ಮಾಸ್ಕ್ ಧಾರಣೆ ನಿಯಮ ಉಲ್ಲಂಘಿಸುವರಿಗೆ ದಂಡ ವಿದಿಸಬೇಕೆಂದು ಅವರು ಹೇಳಿದರು.
ಕೋವಿಡ್ -19 ಪರೀಕ್ಷೆ ಹೆಚ್ಚಿನ ಸಂಖ್ಯೆಯಲ್ಲಿ ಆಗಬೇಕು. ಒಂದು ಪಾಸಿಟಿವ್ ಕೇಸ್ ಕಂಡುಬಂದಲ್ಲಿ ಅಲ್ಲಿ ಕನಿಷ್ಠ 10 ಆದರೂ ಕೋವಿಡ್-19 ಪರೀಕ್ಷೆ ಆಗಬೇಕು. ಲಕ್ಷಣವಿಲ್ಲದಿದ್ದಲ್ಲಿ ಹೋಮ್ ಐಸೊಲ್ಯೂಷನ್ ಗೆ ಮತ್ತು ಲಕ್ಷಣಗಳು ಕಂಡುಬಂದಲ್ಲಿ ಆಸ್ಪತ್ರೆ ದಾಖಲೆಗೆ ಸೂಚಿಸಬೇಕು. ಪ್ರತಿ ಆಸ್ಪತ್ರೆಯಲ್ಲೂ ಚಿಕಿತ್ಸೆ ದೊರೆಯಲು ಕ್ರಮ ಕೈಗೊಳ್ಳಬೇಕು. ನಾನ್ ಕೋವಿಡ್ ಕೇಸ್ ಗಳಿಗೂ ಅಷ್ಟೇ ಪ್ರಾಮುಖ್ಯತೆ ನೀಡಿ ಗಮನ ಹರಿಸಬೇಕೆಂದರು.
ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ ಶಿಷ್ಟಾಚಾರದಂತೆ ಕೋವಿಡ್ ಪೇಶೆಂಟ್ ಗೆ ಚಿಕಿತ್ಸೆ ನೀಡಬೇಕು. ಆಧುನಿಕ ಚಿಕಿತ್ಸಾ ವಿಧಾನಗಳನ್ನೆಲ್ಲ ತುರ್ತಾಗಿ ಬಳಸಿಕೊಳ್ಳಬೇಕು. ಪಕ್ಕದ ಜಿಲ್ಲೆಯ ಆಸ್ಪತ್ರೆಗಳಲ್ಲಿ ಜಿಲ್ಲೆಯ ಜನರಿಗೆ ಚಿಕಿತ್ಸೆಗೆ ದಾಖಲಾಗುವ ಅವಕಾಶ ಕಷ್ಟವಾಗಿದ್ದು, ಜನರಿಗೆ ತೊಂದರೆ ಆಗದಂತೆ ಚಿಕಿತ್ಸೆ ನೀಡಲು ಎಲ್ಲ ಕ್ರಮ ಕೈಗೊಳ್ಳಬೇಕು ಎಂದರು.
ಎಲ್ಲ ರೋಗಿಗಳನ್ನು ಕಾರವಾರ ಆಸ್ಪತ್ರೆಗೆ ಕಳುಹಿಸಲು ಮುಂದಾಗದೆ, ಸ್ಥಳೀಯವಾಗಿ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಬೇಕು. ಅಗತ್ಯವಿದ್ದಲ್ಲಿ online ಮತ್ತು ವರ್ಚುವಲ್ ಪ್ಲಾಟಫಾರ್ಮ್ ಮೂಲಕ ಹಿರಿಯ ವೈದ್ಯರ ನೆರವು ಪಡೆಯಬೇಕು ಸ್ಥಳೀಯವಾಗಿದ್ದಲ್ಲಿ ಹೆಚ್ಚಿನ ಗಮನ ನೀಡಲು ಸಾಧ್ಯವಾಗುತ್ತದೆ. ಅದೇ ರೀತಿ ಡಿಸ್ ಚಾರ್ಜ್ ಬಗ್ಗೆ ಕೂಡ ಗಮನ ಕೊಡಬೇಕು ಎಂದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಹೆಚ್. ಕೆ. ಎಎಸ್ ಪಿ ಬದರಿನಾಥ್ ಎಸ್ ಉಪಸ್ಥಿತರಿದ್ದರು.