ಹಾಸನ: ಜಿಲ್ಲೆಯಾದ್ಯಂತ ಪ್ರಸವ ಪೂರ್ವ ಹಾಗೂ ನಂತರದ ತಾಯಿ ಹಾಗೂ ಶಿಶು ಮರಣವನ್ನು ಸಂಪೂರ್ಣವಾಗಿ ನಿಯಂತ್ರಿಸಲು ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಪ್ರತಿಯೊಬ್ಬರೂ ಹೆಚ್ಚಿನ ನಿಗಾವಹಿಸುವಂತೆ ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಆರೋಗ್ಯ ಅಭಿಯಾನದ ಮಾಸಿಕ ಸಭೆಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ತಾಯಿ ಮರಣ ಸಂಭವಿಸಿಲ್ಲವಾದರೂ ಮುಂದೆಯೂ ಇದೇ ರೀತಿ ಸುಧಾರಿಸುವಂತೆ ಹಾಗೂ ನವಜಾತ ಶಿಶುಗಳ ಬೆಳವಣಿಗೆಗೆ ಆರೋಗ್ಯ ಇಲಾಖೆ ಎಲ್ಲಾ ವಿಧದಲ್ಲಿಯೂ ಸಹಕಾರ ನೀಡುವಂತೆ ತಿಳಿಸಿದರು.
ಗರ್ಭೀಣಿ ಸ್ತ್ರೀಯರಿಗೆ ಪ್ರಸವ ಪೂರ್ವ ಹಾಗೂ ನಂತರದಲ್ಲಿ ಶುಶ್ರೂಷಕಿಯರು ಸಕಾಲಕ್ಕೆ ಸೂಕ್ತ ಚಿಕಿತ್ಸೆ ನೀಡಬೇಕು ಅಲ್ಲದೇ, ಆಶಾಕಾರ್ಯಕರ್ತೆಯರು ಹಾಗೂ ಆರೋಗ್ಯ ಕಾರ್ಯಕರ್ತೆಯರಿಂದ ಗರ್ಭೀಣಿ ಸ್ತ್ರೀ ಮತ್ತು ಬಾಣಂತಿಯರು ಅನುಸರಿಸಬೇಕಾದ ಮುನ್ನೇಚ್ಚರಿಕಾ ಕ್ರಮಗಳು ಹಾಗೂ ವಿಶೇಷ ಆರೋಗ್ಯ ಕಾಳಜಿಯ ಬಗ್ಗೆ ಅರಿವು ಮೂಡಿಸಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.
ತುರ್ತು ಸೇವೆ ಒದಗಿಸುವ ಆಂಬುಲೆನ್ಸ್ ವಾಹನಗಳು ಸರಿಯಾದ ಸಮಯಕ್ಕೆ ತಲುಪಬೇಕು ಇದರಲ್ಲಿ ಯಾವುದಾದರೂ ಲೋಪವಿದ್ದಲ್ಲಿ ಆ ವಾಹನವನ್ನು ಪರಿಶೀಲಿಸಿ ವಾಹನವಿದ್ದ ಸ್ಥಳ ಮತ್ತು ಸಮಯದ ಬಗ್ಗೆ ಮಾಹಿತಿ ಪಡೆಯಬೇಕೆಂದರು.
ಮನೆಹೆರಿಗೆಗಳ ಬಗ್ಗೆ ಹೆಚ್ಚಿನ ಗಮನಹರಿಸಿ ಗರ್ಭೀಣಿ ಸ್ತ್ರೀಯರಿಗೆ ಮನೆಹೆರಿಗೆಯಿಂದಾಗುವ ಅನಾನುಕೂಲಗಳ ಬಗ್ಗೆ ಮನವರಿಕೆ ಮಾಡಬೇಕು. ವೈದ್ಯರ ಅಥವಾ ಶುಶ್ರೂಷಕಿಯರ ಸಲಹೆ ಮೇರೆಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗುವಂತೆ ಗರ್ಭೀಣಿ ಸ್ತ್ರೀಯರಿಗೆ ತಿಳುವಳಿಕೆ ಮೂಡಿಸಬೇಕೆಂದು ಆರ್ ಗಿರೀಶ್ ನಿರ್ದೇಶನ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್ ಅವರು ಜಿಲ್ಲೆಯಲ್ಲಿ ನಡೆದಿರುವ ಶಿಶು ಮರಣಗಳಿಗೆ ಕಾರಣ, ಆಸ್ಪತ್ರೆಗಳಲ್ಲಿ ದೊರೆಯುವ ವೈದ್ಯಕೀಯ ಸೌಲಭ್ಯಗಳ ಬಗ್ಗೆ ವಿವರಣೆ ನೀಡಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಡಾ|| ನವೀನ್ ಭಟ್, ಮಲೇರಿಯಾ ನಿಯಂತ್ರಣಾಧಿಕಾರಿ ಡಾ|| ರಾಜ್ ಗೋಪಾಲ್, ಜಿಲ್ಲಾ ಕ್ಷಯ ಹಾಗೂ ಏಡ್ಸ್ ರೋಗ ನಿಯಂತ್ರಣಾಧಿಕಾರಿ ಡಾ|| ನಾಗೇಶ್ ಆರಾಧ್ಯ ಮತ್ತಿತರ ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.