ಮಗುವಿನ ಆರೋಗ್ಯಕರ ಬೆಳವಣಿಗೆಗೆ ಜಂತುಹುಳು ನಿವಾರಣೆ ಮಾತ್ರೆಯನ್ನು ಪಾಲಕರು ತಪ್ಪದೆ ಹಾಕಿಸಬೇಕು: ಜಿಲ್ಲಾಧಿಕಾರಿ ದೀಪಾ ಚೋಳನ್
ಧಾರವಾಡ: ವಿವಿಧ ಆಹಾರ ಪದಾರ್ಥಗಳನ್ನು ವಿಶೇಷವಾಗಿ ಚಾಕೋಲೇಟ್ದಂತಹ ಸಿಹಿ ಪದಾರ್ಥಗಳನ್ನು ಮಕ್ಕಳು ಹೆಚ್ಚಾಗಿ ಸೇವಿಸುವುದರಿಂದ ಮತ್ತು ಸ್ವಚ್ಛತೆ ಬಗ್ಗೆ ಕಾಳಜಿವಹಿಸದೇ ಇರುವುದರಿಂದ ಮಕ್ಕಳಲ್ಲಿ ಜಂತುಹುಳು ಕಂಡುಬರುತ್ತದೆ. ಇವುಗಳನ್ನು ನಿವಾರಿಸಿ, ಆರೋಗ್ಯಕರ ಬೆಳವಣೆಗೆ ಮಾಡಲು ಪ್ರತಿ ಆರು ತಿಂಗಳಿಗೊಮ್ಮೆ ತಪ್ಪದೆ ಜಂತುಹುಳು ನಿವಾರಕ ಅಲ್ಬೆಂಡಾಝೋಲ್ ಮಾತ್ರೆಯನ್ನು ಹಾಕಿಸಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.
ಅವರುನಗರದ ಎಮ್.ವಿ.ಎ.ಎಸ್ ಮಲ್ಲಸಜ್ಜನ ಆಂಗ್ಲ ಮಾದ್ಯಮ ಶಾಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ರಾಷ್ಟಿಯ ಜಂತು ಹುಳು ನಿವಾರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಲುಷಿತ ಪರಿಸರ ಮತ್ತು ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳದ ಮಕ್ಕಳಲ್ಲಿ ಕಲುಷಿತ ಮಣ್ಣಿನ ಮೂಲಕ ಮತ್ತು ಜಂತು ಬಾಧೆಯುಳ್ಳ ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಜಂತುಹುಳು ಪ್ರಸಾರವಾಗುತ್ತದೆ. ಮೇಲಿಂದ ಮೇಲೆ ಮಕ್ಕಳಲ್ಲಿ ಜಂತುಬಾಧೆ ಕಾಣಿಸಿಕೊಳ್ಳುವುದರಿಂದ ಮಕ್ಕಳಲ್ಲಿ ರಕ್ತಹೀನತೆ ಮತ್ತು ನ್ಯೂನಪೋಷಣೆಗೆ ಒಳಗಾಗಿ ಅವರ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಕುಂಠಿತಗೊಳ್ಳುತ್ತದೆ.
ಆರೋಗ್ಯಕರವಾದ ಮತ್ತು ಸಧೃಡ ದೇಹ, ಮಾನಸಿಕ ಬಲವುಳ್ಳ ಮಕ್ಕಳು ರಾಷ್ಟದ ಸಂಪತ್ತು. ಅವರ ಕಾಳಜಿ ಹಾಗೂ ಯೋಗಕ್ಷೆಮ ಕಾಪಾಡುವುದು ಎಲ್ಲರ ಜವಾಬ್ದಾರಿ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಮಕ್ಕಳಲ್ಲಿ ಶೈಕ್ಷಣಿಕ ಪಾಠದೊಂದಿಗೆ ವೈಯಕ್ತಿಕ ಸ್ವಚ್ಛತೆ, ತಿನ್ನುವ ಆಹಾರ, ಆಹಾರ ಸೇವಿಸುವ ಕ್ರಮ, ಕುಡಿಯುವ ನೀರು, ಶೌಚಾಲಯ ಬಳಕೆ, ಕೈ ತೊಳೆಯುವ ಕ್ರಮ, ಪರಿಸರ ಸ್ವಚ್ಛತೆ ಕುರಿತು ತಿಳುವಳಿಕೆ ನೀಡಿ, ಪಾಲಿಸುವಂತೆ ನೋಡಿಕೊಳ್ಳಬೇಕು ಎಂದು ಅವರು ಹೇಳಿದರು.
ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ. ಎಸ್.ಎಂ.ಹೋನಕೇರಿ ಮಾತನಾಡಿ, ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಉಂಟಾಗದಂತೆ ಆರೋಗ್ಯ ಇಲಾಖೆ ಮೂಲಕ ಹಲವಾರು ಯೋಜನೆಗಳನ್ನು ಜಾರಿ ಮಾಡಿ, ಸೌಲಭ್ಯ, ಸೇವೆಗಳನ್ನು ನೀಡಲಾಗುತ್ತಿದೆ.
ಮಕ್ಕಳ ಆರೋಗ್ಯಕ್ಕೆ ಕಾರಣವಾಗುವ ಜಂತುಹುಳು ನಿವಾರಣೆಗಾಗಿ ಜಿಲ್ಲೆಯ 1 ರಿಂದ 19 ವರ್ಷದೊಳಗಿನ 5,89,820 ಮಕ್ಕಳಿಗೆ ಜಂತುಹುಳು ಸೋಂಕು ನಿವಾರಕ ಅಲ್ಬೆಂಡಾಝೋಲ್ ಮಾತ್ರೆಯನ್ನು ಉಚಿತವಾಗಿ ವಿತರಿಸಲಾಗುತ್ತಿದೆ.
ಜಿಲ್ಲೆಯ ಎಲ್ಲ ಅಂಗನವಾಡಿ, ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢ ಶಾಲೆ ಮತ್ತು ಪಿ.ಯು ಕಾಲೇಜ್ ವಿದ್ಯಾರ್ಥಿಗಳಿಗೆ ಜಂತುಹುಳು ನಿವಾರಣಾಮಾತ್ರೆ ನೀಡಲು ಆಯಾ ಕೇಂದ್ರಗಳಿಗೆ ತಲುಪಿಸಲಾಗಿದೆ ಎಂದು ಅವರು ಹೇಳಿದರು.
ವೇದಿಕೆಯಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ಆಕೃತಿ ಬನ್ಸಾಲ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಯಶವಂತ ಮದಿನಕರ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಜಾನನ ಮನ್ನಿಕೇರಿ, ಎಮ್.ವ್ಹಿ.ಎ.ಎಸ್ ಸಂಸ್ಥೆಯ ಅಧ್ಯಕ್ಷ ಡಾ. ಆನಂದ ನಾಡಿಗೇರ, ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆ ಕಾರ್ಯಾಧ್ಯಕ್ಷ ಡಾ. ಕವನ ದೇಶಪಾಂಡೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರಿಕಾಂತ ಕುಲಕರ್ಣಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಬಿ. ನಿಂಬಣ್ಣವರ ಉಪಸ್ಥಿತರಿದ್ದರು.
ನಿವೃತ್ತ ಜಿಲ್ಲಾ ಸರ್ಜನ ಡಾ. ವಿ.ಡಿ ಕರ್ಪೂರಮಠ, ಕ್ಷೆÃತ್ರ ಶಿಕ್ಷಣಾಧಿಕಾರಿ ಎ.ಎ. ಖಾಜಿ, ಎಂ.ಎಸ್. ಮಾಯಾಚಾರಿ, ಸಿಡಿಪಿಓ ಪುಟ್ಟಪ್ಪನವರ, ಪೊಲೀಸ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಎಸ್.ಬಿ.ಕಳಸೂರಮಠ ಸೇರಿದಂತೆ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಮತ್ತು ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸಂಧ್ಯಾ ರಾಯದುರ್ಗ ಪ್ರಾರ್ಥಿಸಿದರು. ವಿ.ಬಿ.ಹೊಸಕೆರಿ ಮತ್ತು ಮಂಜು ಅಡಿವೇಶ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಮುಖ್ಯೊಪಾಧ್ಯಯ ವಿನಯ ನಾಡಿಗೇರ ವಂದಿಸಿದರು.