ಭಟ್ಕಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಕೃಷಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಳೆದ ಹಲವಾರು ವರ್ಷಗಳಿಂದ ಕಾರ್ಯಪ್ರವೃತ್ತರಾಗಿದ್ದು ಇಂದು ಸಾವಿರಾರು ರೈತರು ಕೃಷಿಯತ್ತ ಮುಖ ಮಾಡಿದ್ದಾರೆ.
ಕೃಷಿಯಲ್ಲಿ ಯಂತ್ರವನ್ನು ಅಳವಡಿಸುವ ನಿಟ್ಟಿನಲ್ಲಿಯೂ ಕೂಡಾ ರೈತರಿಗೆ ಸೂಕ್ತ ತರಬೇತಿ ನೀಡುತ್ತಿದ್ದು ಶಿರಾಲಿಯ ತಟ್ಟಿಹಕ್ಕಲಿನ ರೈತ ದತ್ತಾತ್ರೇಯ ದೇವಡಿಗ ಅವರ ಜಮೀನಿನಲ್ಲಿ ಯಾಂತ್ರೀಕರಣದಿಂದ ಭತ್ತ ನಾಟಿ ಮಾಡುವ ಕುರಿತು ಡ್ರೈವರುಗಳಿಗೆ ತರಬೇತಿ ಕಾರ್ಯಕ್ರಮ ಯಶಸ್ವೀಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಯೋಜನೆಯ ರಾಜ್ಯ ಕೃಷಿ ನಿರ್ದೇಶಕ ಮನೋಜ್ ಮೆನೆಜಸ್ ನಮ್ಮ ಜೀವನಕ್ಕೆ ಭತ್ತದ ಬೆಳೆ ಅನಿವಾರ್ಯವಾಗಿದ್ದು ಮಧ್ಯಾಹ್ನದ ಊಟಕ್ಕೆ ನಮಗೆ ಅನ್ನ ಬೇಕಾಗಿದ್ದರಿಂದ ನಾವು ಕೃಷಿಯನ್ನು ಬಿಡುವಂತಿಲ್ಲ. ಹಿಂದೆ ಕೃಷಿಗೆ ಜನ ಇರುತ್ತಿದ್ದರೆ, ಇಂದು ಜನರ ಕೊರೆಯಿಂದಾಗಿ ನಾವು ಯಂತ್ರ ಕೃಷಿಗೆ ಮೊರೆ ಹೋಗಬೇಕಾಗಿದೆ. ಇಂದು ಸಸಿ ಮಡಿ ಮಾಡುವುದರಿಂದ ಹಿಡಿದು, ನಾಟಿ ಮಾಡುವುದು, ಕಳೆ ತೆಗೆಯುವುದು, ಕೊಯ್ಲು ಮಾಡುವುದಕ್ಕೆ ಕೂಡಾ ಯಂತ್ರ ಬಂದಿದ್ದು ರೈತರು ಅವುಗಳನ್ನು ಉಪಯೋಗಿಸಿಕೊಂಡು ಉತ್ತಮ ಬೆಳೆ ಬೆಳೆಯಬೇಕು ಎಂದು ಕರೆ ನೀಡಿದರು.
ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲೆಯಲ್ಲಿ ಯಂತ್ರಶ್ರೀ ಕಾರ್ಯಕ್ರಮದಡಿಯಲ್ಲಿ ಸುಮಾರು 10 ಸಾವಿರ ಎಕರೆ ಪ್ರದೇಶಗಳಲ್ಲಿ ಯಂತ್ರದ ಮೂಲಕ ನಾಟಿ ಮಾಡಿಸುವ ಯೋಜನೆಯನ್ನು ಹೊಂದಿದ್ದೇವೆ. ಂದು ಚಿಕ್ಕ ಯಂತ್ರದ ಮೂಲಕ ನಾಟಿ ಮಾಡುವುದನ್ನು ಅತಿ ಸುಲಭದಲ್ಲಿ ಮಾಡಬಹುದಾಗಿದ್ದು ಅದನ್ನು ನಡೆಸುವುದಕ್ಕಾಗಿ ನಾವು ತರಬೇತಿಯನ್ನು ನೀಡಲು ಪ್ರಥಮ ಆದ್ಯತೆಯನ್ನು ನೀಡುತ್ತಿದ್ದೇವೆ. ಇಂದು ನಾಟಿ ಮಾಡುವ ಯಂತ್ರವನ್ನು ನಡೆಸುವುದರ ಕುರಿತು ತರಬೇತಿಯನ್ನು ಹಮ್ಮಿಕೊಂಡಿದ್ದು ಈ ಭಾಗದಲ್ಲಿ ಯಂತ್ರ ನಡೆಸುವವರು ತಯಾರಾದರೆ ಮುಂದೆ ತೊಂದರೆಯಾಗದು ಎಂದರು. ಕರಾವಳಿಯಲ್ಲಿ ಭತ್ತದ ಬೆಳಗೆ ಅತ್ಯಂತ ಮಹತ್ವವಿದ್ದು ಅದನ್ನು ಉಳಿಸಿ ಬೆಳೆಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂದೂ ಹೇಳಿದರು.
ಈ ಸಂದರ್ಭದಲ್ಲಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಯೋಜನಾಧಿಕಾರಿ ಎಂ.ಎಸ್. ಈಶ್ವರ ಅವರು ಕೃಷಿ ಕಾರ್ಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಹಲವಾರು ಮೈಲಿಗಲ್ಲುಗಳನ್ನು ದಾಟಿ ಬಂದಿದೆ. ಕೃಷಿಗಾಗಿ ಒಂದು ವಿಭಾಗವೇ ಇದ್ದು ಎಲ್ಲ ರೈತರ ಹಿತ ಕಾಪಾಡುವಲ್ಲಿ ನಾವು ಯಶಸ್ವೀಯಾಗಿದ್ದೇವೆ. ರೈತರು ಹೆಚ್ಚು ಹೆಚ್ಚು ಯಂತ್ರಗಳನ್ನು ಉಪಯೋಗಿಸುವ ಮೂಲಕ ಲಾಭದಾಯಕ ಕೃಷಿಯತ್ತ ಮುಖ ಮಾಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಯೋಜನೆಯ ಉತ್ತರ ಕನ್ನಡ ಜಿಲ್ಲಾ ನಿರ್ಧೇಶಕರುಗಳಾದ ಶಂಕರ ಶೆಟ್ಟಿ, ಶೇಖರ ಗೌಡ, ಉಡುಪಿ ಪ್ರಾದೇಶಿಕ ಸಮನ್ವಯಾಧಿಕಾರಿ ಅಶೋಕ ಕುಮಾರ್, ಯೋಜನಾಧಿಕಾರಿ ಲವ್ ಕುಮಾರ್, ಯಾಂತ್ರೀಕೃತ ಕೃಷಿ ಯೋಜನಾಧಿಕಾರಿ ವಿನೋದ್, ಉಡುಪಿ-ಕರಾವಳಿ ಭಾಗದ ಸಮನ್ವಯಾಧಿಕಾರಿ ಅಶೋಕ, ಯಂತ್ರ ವಿಭಾಗದ ಮಾನ್ಸಿಫ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಯಾಂತ್ರಶ್ರೀ ಯೋಜನೆಯಡಿಯಲ್ಲಿ ಭತ್ತ ನಾಟಿ ಮಾಡುವ ಯಂತ್ರದ ಚಾಲನೆಯ ಕುರಿತು ರೈತರು, ಸಿ.ಎಚ್.ಎಸ್.ಸಿ. ಮೆನೇಜರ್, ಕೃಷಿ ಮೇಲ್ವಿಚಾರಕರಿಗೆ ಪ್ರಾತ್ಯಕ್ಷಿತೆ ನೀಡಲಾಯಿತು. ಈ ಸಂದರ್ಭದಲ್ಲಿ ನೂರಾರು ರೈತರು ಉಪಸ್ಥಿತರಿದ್ದರು.