ಉತ್ತರಕನ್ನಡದ ಗಜ ಗಾತ್ರದ ಗ್ರಾಮ ಪಂಚಾಯತ; ಶಿರಾಲಿಯೇ ಸದ್ಯ ಭಟ್ಕಳದ ಕೊರೊನಾ ಹಾಟ್ಸ್ಪಾಟ್; ನಿಯಂತ್ರಣ ಹೇರಲು ಹರಸಾಹಸ; ಧಾರಕ ವಲಯ ಮುಂದುವರಿಕೆ
ಭಟ್ಕಳ: ಜಿಲ್ಲೆಯಲ್ಲಿಯೇ ಅತಿ ದೊಡ್ಡ ಗ್ರಾಮ ಪಂಚಾಯತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಶಿರಾಲಿ ಗ್ರಾಮ ಪಂಚಾಯತ ಪ್ರಸ್ತುತ ಭಟ್ಕಳ ತಾಲೂಕಿನ ಕೊರೊನಾ ಹಾಟ್ಸ್ಪಾಟ್ ಆಗಿ ಪರಿವರ್ತನೆಯಾಗಿದೆ. ನಿತ್ಯವೂ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಇದಕ್ಕೆ ನಿಯಂತ್ರಣ ಹೇರುವ ನಿಟ್ಟಿನಲ್ಲಿ ಶಿರಾಲಿಯನ್ನು ಕಂಟೇನ್ಮೆಂಟ್ ಝೋನ್ ( ಧಾರಕ ವಲಯ) ಆಗಿ ಮುಂದುವರೆಸಲಾಗಿದೆ.
2011ರ ಜನಗಣತಿಯ ಪ್ರಕಾರ ಶಿರಾಲಿಯಲ್ಲಿ 4036 ಕುಟುಂಬಗಳಿದ್ದು, 13899 ಜನಸಂಖ್ಯೆ ಇದೆ. ಇದರಲ್ಲಿ ಸಾಕ್ಷರತೆಯ ಸಂಖ್ಯೆ 10575 ಆಗಿದೆ ಎನ್ನುವುದು ವಿಶೇಷ. ಶಿರಾಲಿಯ ಭೌಗೋಳಿಕ ವಿಸ್ತೀರ್ಣವೂ ವಿಸ್ತಾರವಾಗಿಯೇ ಇದೆ. ಪಶ್ಚಿಮದಲ್ಲಿ ಅಳ್ವೇಕೋಡಿ, ಪೂರ್ವದಲ್ಲಿ ಚಿತ್ರಾಪುರ ಎಲ್ಲವೂ ಶಿರಾಲಿಯ ಭಾಗಗಳಾಗಿಯೇ ಉಳಿದು ಕೊಂಡಿವೆ. ಶಿರಾಲಿ ಗ್ರಾಮ ಪಂಚಾಯತ 35 ಸದಸ್ಯರನ್ನು ಹೊಂದಿದೆ. ಶಿರಾಲಿಯನ್ನೊಮ್ಮೆ ಸುತ್ತಿ ಬಂದರೆ ಇಲ್ಲಿನ
ಕಳೆದ ವರ್ಷ ಹೊರಗಿನಿಂದ ಬಂದವರನ್ನು ಕ್ವಾರೆಂಟೈನ್ಗೆ ಒಳಪಡಿಸುವ ಕಾರ್ಯ ವ್ಯವಸ್ಥಿತವಾಗಿ ನಡೆದಿತ್ತು. ಆದರೆ ಈ ವರ್ಷ ಕೊರೊನಾ 2ನೇ ಅಲೆಯ ಸಂದರ್ಭದಲ್ಲಿ ಅಂತಹ ನಿರ್ಬಂಧವೇನೂ ಇದ್ದಿರಲಿಲ್ಲ. ಕೊರೊನಾ ಸೋಂಕು ಏರಿಕೆ ಕಾಣಲು ಇದೂ ಒಂದು ಕಾರಣವಾಗಿರಬಹುದು - ರೇವತಿ ರವಿಶಂಕರ ನಾಯ್ಕ, ಅಧ್ಯಕ್ಷರು ಗ್ರಾಪಂ ಶಿರಾಲಿ |
ಬಹಳಷ್ಟು ಜನರು ಬೆಂಗಳೂರು, ಮಹಾರಾಷ್ಟ್ರ ಸೇರಿದಂತೆ ವಿವಿಧ ಮಹಾನಗರಗಳಲ್ಲಿ ಉದ್ಯೋಗದಲ್ಲಿರುವುದನ್ನು ಕಾಣಬಹುದಾಗಿದೆ. ಪರ ಊರಿನ ಹೊಟೆಲ್ನಲ್ಲಿ ಕೆಲಸ ಮಾಡಿಕೊಂಡವರ ಸಂಖ್ಯೆಯೂ ದೊಡ್ಡದೇ ಇದೆ. ಕೊರೊನಾ ತಡೆಯಲು ದೇಶಾದ್ಯಂತ ಲಾಕ್ಡೌನ್ ಹೇರುತ್ತಿದ್ದಂತೆಯೇ ಇವರೆಲ್ಲ ಊರಿನತ್ತ ಮುಖ ಮಾಡಿದ್ದಾರೆ. ಕಳೆದ ವರ್ಷ ಇವರನ್ನು ಕ್ವಾರೆಂಟೈನ್ಗೆ ಒಳಪಡಿಸುವ ಕಾರ್ಯ ವ್ಯವಸ್ಥಿತವಾಗಿ ನಡೆದಿತ್ತು. ಆದರೆ ಈ ವರ್ಷ ಕೊರೊನಾ 2ನೇ ಅಲೆಯ ಸಂದರ್ಭದಲ್ಲಿ ಅಂತಹ ನಿರ್ಬಂಧವೇನೂ ಇದ್ದಿರಲಿಲ್ಲ. ಕೊರೊನಾ ಸೋಂಕು ಏರಿಕೆ ಕಾಣಲು ಇದೂ ಒಂದು ಕಾರಣವಾಗಿರಬಹುದು ಎನ್ನುತ್ತಾರೆ ಶಿರಾಲಿ ಗ್ರಾಮ ಪಂಚಾಯತ ಅಧ್ಯಕ್ಷೆ ರೇವತಿ ರವಿಶಂಕರ ನಾಯ್ಕ.
ಮದುವೆ ಮನೆಯ ಅಬ್ಬರ, ನಿಯಂತ್ರಣ ಇಲ್ಲದ ಪೇಟೆ:
ಹೊರಗಿನಿಂದ ಬಂದವರು ಯಾವುದೇ ನಿಯಂತ್ರಣ ಇಲ್ಲದೇ ಶಿರಾಲಿ ಪೇಟೆಯಲ್ಲಿ ಓಡಾಡಿಕೊಂಡು ಇದ್ದರು. ಇದಾವುರದ ಪರಿವೆಯೇ ಇಲ್ಲದ ಶಿರಾಲಿ ಸುತ್ತಮುತ್ತಲಿನ ಹಳ್ಳಿಯ ಮಂದಿ ಪೇಟೆಗೆ ಬಂದು ಸಾಮಾನು ಖರೀದಿಸುವುದನ್ನು ಮರೆಯಲಿಲ್ಲ. ಇದೇ ಸಂದರ್ಭದಲ್ಲಿ ಪೂರ್ವ ನಿಗದಿತ ಮದುವೆ ಕಾರ್ಯಗಳೂ ಜರುಗಿದ್ದು, ಮೂಗಿಗೆ ಕಟ್ಟಿಕೊಂಡ ಮಾಸ್ಕನ್ನು ಆಚೆಈಚೆ ಸರಿಸುತ್ತಲೇ ಸೋಂಕಿತರು ಮದುವೆ ಮನೆಗೂ ಹೋಗಿ ಬಂದಿರುವ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ. ಇದರಿಂದ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂಬ ಅಭಿಪ್ರಾಯ ಸ್ಥಳೀಯವಾಗಿ ಕೇಳಿ ಬಂದಿದೆ.
ಕೊರೊನಾ ತಡೆಗೆ ಕಾರ್ಯಪಡೆ:
ಯಾವಾಗ ಜಿಲ್ಲಾಡಳಿತವೇ ಶಿರಾಲಿಯನ್ನು ಕಂಟೇನ್ಮೆಂಟ್ ಝೋನ್ ಎಂದು ಘೋಷಿಸಿತೋ, ಸ್ಥಳೀಯ ಆಡಳಿತವೂ ಜಾಗೃತವಾಗಿದೆ. ಶಿರಾಲಿ ಪಂಚಾಯತ ಮಟ್ಟದಲ್ಲಿ ಕಾರ್ಯಪಡೆ ರಚನೆಯಾಗಿದ್ದು, ಸೋಂಕಿತರು ಮನೆಯನ್ನು ಬಿಟ್ಟು ಹೊರಗೆ ಅಡ್ಡಾದಂತೆ ನಿರ್ದೇಶನ ನೀಡಲಾಗುತ್ತಿದೆ. ಲಾಕ್ಡೌನ್ನಿಂದ ಔಷಧ, ಆಹಾರ ಪೂರೈಕೆ ವ್ಯತ್ಯಯವಾಗದಂತೆ ಜನರಿಗೆ ನೆರವಾಗಲು ಕಾರ್ಯಪಡೆಯ ಸದಸ್ಯರಿಗೆ ಸೂಚಿಸಲಾಗಿದೆ. ಶಿರಾಲಿ ಭಾಗದ ವರ್ತಕರು ನಮ್ಮೊಂದಿಗೆ ಕೈ ಜೋಡಿಸುತ್ತಿರುವುದು ಸಂತಸದ ತಂದಿದೆ. ಇವೆಲ್ಲದರ ಒಟ್ಟಾರೆ ಫಲಿತಾಂಶ ಎಂಬಂತೆ ಕೆಲವೇ ದಿನಗಳಲ್ಲಿ ಶಿರಾಲಿಯಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರಲಿದೆ ಎಂದು ಪಂಚಾಯತ ಉಪಾಧ್ಯಕ್ಷರು, ಭಟ್ಕಳ ಬಿಜೆಪಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಭಾಸ್ಕರ ದೈಮನೆ ವಿಶ್ವಾಸ ವ್ಯಕ್ತಪಡಿಸುತ್ತಾರೆ.