ಭಟ್ಕಳ : ತಾಲೂಕಿನ ಹೆಬಳೆ ಗ್ರಾಮ ಪಂಚಾಯತ್, ಜಾಲಿ ಪಟ್ಟಣ ಪಂಚಾಯತ್ ಮತ್ತು ಇತರ ಕಡೆಗಳಲ್ಲಿ ಅರಣ್ಯ ಭೂಮಿಯನ್ನು ಅತಿಕ್ರಮಿಸಿಕೊಂಡು ನಿರ್ಮಿಸಲಾಗಿದ್ದ ಮನೆ, ಅಂಗಡಿ ಮತ್ತು ಕಂಪೌಂಡ್ಗಳನ್ನು ತೆರವುಗೊಳಿಸಿದ ಅಧಿಕಾರಿಗಳ ವರ್ತನೆ ಖಂಡಿಸಿ ಅತಿಕ್ರಮಣದಾರರು ಅರಣ್ಯ ಇಲಾಖೆ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಡೆದಿದೆ.
ತಾಲೂಕಿನ ಹೆಬಳೆ ಸರ್ವೆ ನಂಬರ್ 214, 220, 228, ಜಾಲಿ ಸರ್ವೆ ನಂಬರ್ 108, 73, ,ಜಾಲಿ ಮೂಸಾನಗರ ಸರ್ವೆ ನಂಬರ್ 65, 228ರಲ್ಲಿ ಅರಣ್ಯಾಧಿಕಾರಿಗಳು ತೆರವು ಕಾರ್ಯಾಚರಣೆಗೆ ಮುಂದಾದರು. ಕೆಲವೆಡೆ ಸೆಂಟ್ರಿಂಗ್ ಕಾಮಗಾರಿ ಮುಂದುವರಿಸಲು ತಡೆಯೊಡ್ಡಲಾಗಿತ್ತು. ಅಂಗಡಿಗೆ ಹೊದಿಸಲಾಗಿದ್ದ ಶಿಟ್ಗಳನ್ನು ತೆರವುಗೊಳಿಸಲಾಯಿತು. ಹೀಗಾಗಿ ಅತಿಕ್ರಮಣದಾರರು ವಿರೋಧ ವ್ಯಕ್ತಪಡಿಸಿದರು. ಆದರೂ ಕೂಡ ತಮ್ಮ ಕಾರ್ಯಾಚರಣೆಯನ್ನ ಮುಂದುವರೆಸಿದರು.
ಹೀಗಾಗಿ ಅತಿಕ್ರಮಣದಾರರು ಅರಣ್ಯ ಇಲಾಖೆ ಕಚೇರಿಯ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು. ನಾವು ಕಳೆದ 25/30 ವರ್ಷಗಳಿಂದ ಈ ಅರಣ್ಯ ಭೂಮಿಯಲ್ಲಿ ನೆಲೆಸಿದ್ದೇವೆ. ನಮಗೆ ಈ ಭೂಮಿ ಬಿಟ್ಟು ಬೇರೆ ನೆಲೆ ಇಲ್ಲ. ಅರಣ್ಯಾಧಿಕಾರಿಗಳು ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸುವುದು ಸರಿಯಾದ ಕ್ರಮ ಅಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಆರ್ಎಫ್ಓ ಸವಿತಾ ದೇವಾಡಿಗ, ನಾವು ಹಳೆಯ ಅತಿಕ್ರಮಣವನ್ನು ತೆರವುಗೊಳಿಸಿಲ್ಲ. ಹೊಸದಾಗಿ ಅರಣ್ಯ ಭೂಮಿಗೆ ಕೈ ಹಾಕಿದರೆ ಸುಮ್ಮನಿರಲು ಸಾಧ್ಯ ಇಲ್ಲ. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.