ಹೊಸದಿಲ್ಲಿ: ರೈತರ ಪ್ರತಿಭಟನೆಗೆ ನೂರು ದಿನ ಕರಾಳ ದಿನಾಚರಣೆ
ಹೊಸದಿಲ್ಲಿ: ಕೇಂದ್ರದ ಮೂರು ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ದಿಲ್ಲಿಯ ಗಡಿಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯು ಶನಿವಾರ ನೂರನೇ ದಿನವನ್ನು ಪ್ರವೇಶಿಸಿದ್ದು, ಕರಾಳ ದಿನವನ್ನು ಆಚರಿಸಿದ ರೈತರು 136 ಕಿ.ಮೀ.ಉದ್ದದ ಕುಂಡ್ಲಿ-ಮನೇಸರ್-ಪಲ್ವಾಲ ಷಟ್ಟಥ ಹೆದ್ದಾರಿಯಲ್ಲಿ ಕೆಲವು ಕಡೆ ತಡೆಗಳನ್ನು ನಿರ್ಮಿಸಿದ್ದರು. ಇದರಿಂದಾಗಿ ಸಾವಿರಾರು ವಾಹನಗಳು, ಪ್ರಯಾಣಿಕರು ಹೆದ್ದಾರಿಯಲ್ಲಿ ಬಾಕಿಯಾಗಿದ್ದರು. ಬೆಳಗ್ಗೆ 11 ಗಂಟೆಗೆ ಆರಂಭವಾಗಿದ್ದ ರಸ್ತೆ ತಡೆಯು ಮಧ್ಯಾಹ್ನ ಮೂರು ಗಂಟೆಗೆ ಅಂತ್ಯಗೊಂಡಿತು. ಪ್ರತಿಭಟನಾಕಾರರು ತುರ್ತು ವಾಹನಗಳ ಸಂಚಾರಕ್ಕೆ ಯಾವುದೇ ಅಡ್ಡಿಯನ್ನುಂಟು ಮಾಡಿರಲಿಲ್ಲ.
ಪ್ರತಿಭಟನಾನಿರತ ರೈತ ಸಂಘಟನೆಗಳ ನೇತೃತ್ವ ವಹಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ ಶನಿವಾರದ 'ಚಕ್ಕಾ ಜಾಮ್'ಗೆ ಕರೆನೀಡಿತ್ತು. ಪ್ರತಿಭಟನೆ ಶಾಂತಿಯುತವಾಗಿತ್ತು ಎಂದು ಭಾರತೀಯ ಕಿಸಾನ್ ಯೂನಿಯನ್ (ದಕೊಂಡಾ)ನ ಪ್ರಧಾನ ಕಾರ್ಯದರ್ಶಿ ಜಗಮೋಹನ್ ಸಿಂಗ್ ಅವರು ಸುದ್ದಿಗಾರರಿಗೆ ತಿಳಿಸಿದರು.
ಕರಾಳ ದಿನಾಚರಣೆ: ಕೃಷಿ ಕಾನೂನುಗಳನ್ನು ಹಿಂದೆಗೆದುಕೊಳ್ಳಬೇಕೆಂಬ ಬೇಡಿಕೆಯನ್ನು ಪುನರುಚ್ಚರಿಸಿದ ಮಾಜಿ ಯೂನಿಯನ್ ನಾಯಕ ಧೀರಜ್ ಸಿಂಗ್ ಅವರು, 'ನಮ್ಮ ಪ್ರತಿಭಟನೆಯು ಶಾಂತಿಯುತವಾಗಿರುತ್ತದೆ. ಯಾವುದೇ ವ್ಯಕ್ತಿ ಅಥವಾ ಆಸ್ತಿಗೆ ಹಾನಿಯನ್ನುಂಟು ಮಾಡುವುದಿಲ್ಲ' ಎಂದು ಹೇಳಿದರು. ಹೆದ್ದಾರಿಯಲ್ಲಿ ತಡೆಗಳನ್ನು ನಿರ್ಮಿಸಲು ತಮ್ಮ ಟ್ರ್ಯಾಕ್ಟರ್ ಗಳನ್ನು ತಂದಿದ್ದ ಹರ್ಯಾಣದ ಸೋನಿಪತ್ನ ರೈತರು ಅವುಗಳನ್ನು ರಸ್ತೆಗೆ ಅಡ್ಡವಾಗಿ ನಿಲ್ಲಿಸಿದ್ದರು ಮತ್ತು ಇದು ಸಂಚಾರ ದಟ್ಟಣೆಗೆ ಕಾರಣವಾಗಿತ್ತು. ಕಪ್ಪು ಧ್ವಜಗಳನ್ನು ಹಿಡಿದಿದ್ದ ಪ್ರತಿಭಟನಾಕಾರರು ಕೇಂದ್ರ ಸರಕಾರದ ವಿರುದ್ದ ಘೋಷಣೆಗಳನ್ನು ಕೂಗಿದರು.