ಭಟ್ಕಳ: ನಗರದಲ್ಲಿ ನಿರ್ಮಾಣವಾದ ೧೦ ಕೋಟಿ ರೂಪಾಯಿ ವೆಚ್ಚದ ಮಿನಿ ವಿಧಾನ ಸೌಧ ಕಟ್ಟಡದ ಉದ್ಘಾಟನೆಯು ಜ.೨೫ರಂದು ನಡೆಯಲಿದೆ ಎಂದು ಶಾಸಕ ಸುನಿಲ್ ನಾಯ್ಕ ಹೇಳಿದರು.
ಅವರು ಇಲ್ಲಿನ ಪ್ರವಾಸಿ ಬಂಗಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಮಿನಿ ವಿಧಾನ ಸೌಧದ ಉದ್ಘಾಟನೆಯನ್ನು ಕಂದಾಯ ಸಚಿವ ಆರ್. ಅಶೋಕ್ ಅವರು ನೆರವೇರಿಸುವರು. ನಂತರ ಅವರು ಅಲ್ಲಿಯೇ ಸಾರ್ವಜನಿಕ ಸಭೆಯೊಂದನ್ನು ನಡೆಸುತ್ತಿದ್ದು ಸಾರ್ವಜನಿಕರು ಕಂದಾಯ ಇಲಾಖೆಗೆ ಸಂಬAಧ ಪಟ್ಟಂತೆ ತಮ್ಮ ಅಹವಾಲುಗಳನ್ನು ಸಚಿವರಲ್ಲಿ ಸಲ್ಲಿಸಲು ಅವಕಾಶವಿದೆ ಎಂದ ಅವರು ಈಗಾಗಲೇ ವಿವಿಧ ಇಲಾಖೆಗಳ ಪೀಠೋಪಕರಣಗಳಿಗಾಗಿ ೩೩.೩೫ ಕೋಟಿ ರೂಪಾಯಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು ಪೀಠೋಪಕರಣಗಳು ಆದ ನಂತರ ಎಲ್ಲಾ ಕಚೇರಿಗಳು ಮಿನಿ ವಿಧಾನ ಸೌಧಕ್ಕೆ ಬರಲಿವೆ ಎಂದರು. ಇಲ್ಲಿನ ತಹಸೀಲ್ದಾರ್ ಕಚೇರಿಯು ಮಿನಿ ವಿಧಾನ ಸೌಧಕ್ಕೆ ಸ್ಥಳಾಂತರವಾದ ನಂತರ ಈಗಾಗಲೇ ದುರಸ್ತಿಯಲ್ಲಿರುವ ಸಬ್ ಜೈಲ್ ಹೊಸದಾಗಿ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಹೊಸದಾಗಿ ಸಬ್ ಜೈಲ್ ನಿರ್ಮಾಣವಾಗಲಿದೆ ಎಂದರು. ಈಗಾಗಲೇ ಭಟ್ಕಳ ಮತದಾರ ಕ್ಷೇತ್ರದ ಅಭಿವೃದ್ಧಿಗೆ ೪೬೦ ಕೋಟಿಗೂ ಅಧಿಕ ಹಣವನ್ನು ಸರಕಾರ ಮಂಜೂರಿ ಮಾಡಿದ್ದು ಇಡಗುಂಜಿಯ ಏತ ನೀರಾವರಿಗೆ ೭ ಕೋಟಿ ರೂಪಾಯಿ, ಭಟ್ಕಳ ತಾಲೂಕಿನ ಕುಡಿಯುವ ನೀರಿಗೆ ೫ ಕೋಟಿ ರೂಪಾಯಿ, ಮಂಕಿ ಕುಡಿಯುವ ನೀರಿನ ಯೋಜನೆಗೆ ೧೫೬ ಕೋಟಿ ರೂಪಾಯಿ ಮಂಜೂರಿಯಾಗಿದೆ ಎಂದರು.
ಭಟ್ಕಳ ನಗರದ ಕುಡಿಯುವ ನೀರಿನ ಏಕೈಕ ಯೋಜನೆಯಾದ ಕಡವಿನಕಟ್ಟೆ ಡ್ಯಾಂ ಹೂಳೆತ್ತುವ ಕಾಮಗಾರಿಯನ್ನು ಎರಡು ಹಂತಗಳಲ್ಲಿ ಕೈಗೆತ್ತಿಕೊಂಡು ಸಂಪೂರ್ಣ ಹೂಳು ತೆಗೆಯುವ ಯೋಜನೆಯಿದೆ. ಅನೇಕ ಗ್ರಾಮೀಣ ರಸ್ತೆಗಳ ಕಾಮಗಾರಿಯಾಗಿದ್ದು ಗ್ರಾಮೀಣ ಜನರಿಗೆ ಅನುಕೂಲವಾಗಿದೆ. ಮುಖ್ಯ ಮಂತ್ರಿಗಳ ಪರಿಹಾರ ನಿಧಿಯಿಂದ ಅತೀ ಹೆಚ್ಚು ಪರಿಹಾರ ಧನವನ್ನು ಜನರಿಗೆ ಕೊಡಿಸಿದ್ದೇನೆ. ಇಲ್ಲಿನ ತಾಲೂಕಾ ಆಸ್ಪತ್ರೆಯಲ್ಲಿ ಅತ್ಯುತ್ತಮವಾಗಿ ಜನತೆಗೆ ಸೇವೆ ನೀಡಲಾಗುತ್ತಿದ್ದು ಇಲ್ಲಿನ ಆಸ್ಪತ್ರೆ ಇಲ್ಲವೇ ಹೊನ್ನಾವರದ ಆಸ್ಪತ್ರೆಯನ್ನು ಹೈಟೆಕ್ ಆಸ್ಪತ್ರೆಯನ್ನಾಗಿಸಿ ಟ್ರೋಮಾ ಸೆಂಟರ್ ಮಾಡಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಭಟ್ಕಳದಲ್ಲಿ ಈಗಾಗಲೇ ಸರಕಾರಿ ಕಾಲೇಜಿನ ಪಕ್ಕದಲ್ಲಿ ಜಾಲಿಯಲ್ಲಿ ೪ ಎಕರೆ ಜಾಗಾವನ್ನು ಮಂಜೂರು ಮಾಡಿಸಿ ಕಾಯ್ದಿರಿಸಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಶಿವಾನಿ ಶಾಂತಾರಾಮ್, ತಾಲೂಕಾ ಅಧ್ಯಕ್ಷ ಸುಬ್ರಾಯ ದೇವಡಿಗ, ನಿಕಟ ಪೂರ್ವ ಅಧ್ಯಕ್ಷ ರಾಜೇಶ ನಾಯ್ಕ, ಪ್ರಮುಖರಾದ ಪಾರ್ಶ್ವನಾಥ ಜೈನ್, ದಿನೇಶ ನಾಯ್ಕ, ಭಾಸ್ಕರ ದೈಮನೆ, ಗೋವರ್ಧನ ನಾಯ್ಕ, ದಾಸ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.