ಹಾಸನ : ರಾಜ್ಯಾದ್ಯಂತ ಸೆ.18 ಮತ್ತು ಸೆ.19 ರಂದು ನಡೆಯುವ ದ್ವಿತೀಯ ದರ್ಜೆ ಸಹಾಯಕ ಪರೀಕ್ಷೆಯನ್ನು ಯಾವುದೇ ಲೋಪದೋಷವಾಗದಂತೆ ಎಚ್ಚರವಹಿಸಿ ಯಶಸ್ವಿಗೊಳಿಸುವಂತೆ ಕರ್ನಾಟಕ ಲೋಕ ಸೇವಾ ಆಯೋಗದ ಕಾರ್ಯದರ್ಶಿ ಪಿ. ಸತ್ಯವತಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ಎಸ್.ಡಿ.ಎ ಪರೀಕ್ಷೆ ಕುರಿತು ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು ಪರೀಕ್ಷೆಯ ನಡೆಯುವ ಕೇಂದ್ರಗಳ ಬಳಿ ಯಾವುದೆ ಜೆರಾಕ್ಸ್ ಅಂಗಡಿಗಳಿದ್ದಲ್ಲಿ ಮುಚ್ಚಿಸಬೇಕು ಎಂದ ಅವರು ಅಭ್ಯರ್ಥಿಗಳು ಕೊಠಡಿಯೊಳಗೆ ಯಾವುದೇ ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳನ್ನು ತರದಂತೆ ಹೆಚ್ಚಿನ ನಿಗಾವಹಿಸಬೇಕು ಎಂದರು.
ಪ್ರಶ್ನೆ ಪತ್ರಿಕೆಗಳನ್ನು ಪೊಲೀಸ್ ಬಂದೋಬಸ್ತ್ ನಲ್ಲಿ ಪರೀಕ್ಷೆ ಕೇಂದ್ರಗಳಿಗೆ ಸುರಕ್ಷಿತವಾಗಿ ತೆಗೆದುಕೊಂಡು ಹೋಗಬೇಕು. ಪ್ರಶ್ನೆ ಪತ್ರಿಕೆ ತೆರೆಯುವ ವೇಳೆ ಸಿ.ಸಿ. ಕ್ಯಾಮೆರಾದಲ್ಲಿ ವಿಡಿಯೋ ರೆಕಾರ್ಡ್ ಆಗುವಂತೆ ನೋಡಿಕೊಳ್ಳಬೇಕು ಎಂದರು.
ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡಬೇಕು. ಕೋವಿಡ್ ಸೋಂಕು ಲಕ್ಷಣವುಳ್ಳವರನ್ನು ಪ್ರತ್ಯೇಕ ಕೊಠಡಿ ಮೀಸಲಿರಿಸಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಿಕೊಡುವಂತೆ ಆದೇಶ ನೀಡಿದರು.
ಪರೀಕ್ಷೆಗೆ ಗೈರು ಹಾಜರಾದ ಅಭ್ಯರ್ಥಿಗಳ ಓ.ಎಂ.ಆರ್ ಪ್ರಶ್ನೆ ಪತ್ರಿಕೆಗಳಿಗೆ ಸೀಲ್ ಹಾಕಿ ಪರೀಕ್ಷೆ ಮುಗಿಯುವವರೆಗೆ ಕೊಠಡಿ ಮೇಲ್ವಿಚಾರಕರ ಬಳಿ ಇಟ್ಟುಕೊಳ್ಳುವಂತೆ ಸೂಚನೆ ನೀಡಿದರು.
ಕರ್ನಾಟಕ ಲೋಕ ಸೇವಾ ಆಯೋಗದ ಪರೀಕ್ಷಾಂಗ ನಿಯಂತ್ರಕರಾದ ಕನಗವಲ್ಲಿ ಅವರು ಮಾತನಾಡಿ ಕ್ರಿಮಿನಲ್ ಕೇಸ್, ಎಫ್.ಐ.ಆರ್. ಪ್ರಕರಣಗಳು ದಾಖಲಾಗಿರುವ ಅಭ್ಯರ್ಥಿಗಳ ಮೇಲೆ ಹೆಚ್ಚಿನ ನಿಗಾವಹಿಸಿ, ಪರೀಕ್ಷೆ ಕೇಂದ್ರಗಳ ಬಳಿ ತರಬೇತಿ ಕೇಂದ್ರಗಳಿದ್ದರೆ ಮುಚ್ಚಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ ಅವರು ಮಾತನಾಡಿ ಪ್ರಶ್ನೆ ಪತ್ರಿಕೆ ತೆರೆಯುವ ವೇಳೆ ಸಿ.ಸಿ.ಟಿ.ವಿ.ಯಲ್ಲಿ ವೀಡಿಯೊ ರೆಕಾರ್ಡ್ ಮಾಡಬೇಕು ಎಂದ ಅವರು ಕೋವಿಡ್ ಸೋಂಕು ಲಕ್ಷಣವಿರುವವರಿಗೆ ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಒಂದು ಪ್ರತ್ಯೇಕ ಕೊಠಡಿಯನ್ನು ಮೀಸಲಿರಿಸುವಂತೆ ಆದೇಶ ನೀಡಿದರು.
ಪರೀಕ್ಷಾ ಕೊಠಡಿಗಳನ್ನು ಪೂರ್ಣ ಸ್ಯಾನಿಟೈಸರ್ ಮಾಡುವುದರ ಜೊತೆಗೆ ಕುಡಿಯವ ನೀರಿನ ವ್ಯವಸ್ಥೆಯನ್ನು ಮಾಡುವಂತೆ ಹೇಳಿದರು.
ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ ಬಲರಾಮ ವಿವಿಧ ಕಾಲೇಜು ಅಧ್ಯಾಪಕರುಗಳು ಹಾಗೂ ಮತ್ತಿತರರು ಹಾಜರಿದ್ದರು.