ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಪ್ರಾಧಿಕಾರದಿಂದ ನೋಟಿಸ್ ; ಕಾನೂನಾತ್ಮಕ ವಿಚಾರಣೆ ಪ್ರಕ್ರೀಯೆ ಸ್ಥಗಿತಗೊಳಿಸುವಂತೆ ರವೀಂದ್ರ ನಾಯ್ಕ ಅಗ್ರಹ
ಶಿರಸಿ: ಉ.ಕ.ಜಿಲ್ಲಾದ್ಯಂತ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಭೂಮಿ ಹಕ್ಕಿಗಾಗಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಪ್ರಾಧಿಕಾರದಲ್ಲಿ ಜರುಗಿಸುತ್ತಿರುವ ಕಾನೂನಾತ್ಮಕ ವಿಚಾರಣೆ ಪ್ರಕ್ರೀಯೆಯನ್ನು ಸ್ಥಗಿತಗೊಳಿಸಬೇಕೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಶಿರಸಿಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಆಗ್ರಹಿಸಿದೆ.
ಈ ಕುರಿತಂತೆ ಸೋಮವಾರ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ, ಶಿರಸಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಅವರಿಗೆ ಒಕ್ಕಲೆಬ್ಬಿಸುವ ನೋಟಿಸ್ ಪ್ರತಿಯನ್ನು ತೊರಿಸುತ್ತಾ ಕಾನೂನಾತ್ಮಕ ವಿಚಾರಣೆಯನ್ನು ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿದರು.
ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಕ್ಲೇಮುಗಳನ್ನು ಪ್ರತಿಪಾದಿಸುವ ಅರಣ್ಯವಾಸಿ ಅನುಸೂಚಿತ ಬುಡಕಟ್ಟಿನ ವ್ಯಕ್ತಿಯನ್ನು ಅಥವಾ ಇತರೇ ಪಾರಂಪರಿಕ ಅರಣ್ಯವಾಸಿಯ ಮಾನ್ಯತೆ ಮತ್ತು ಪರಿಶೀಲನಾ ಪ್ರಕ್ರಿಯೆಯು ಪೂರ್ಣ ಆಗುವವರೆಗೆ ಅಧಿಭೋಗದಲ್ಲಿರುವ ಅರಣ್ಯಭೂಮಿಯಿಂದ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸತಕ್ಕದಲ್ಲ ಅಥವಾ ಹೊರಹಾಕತಕ್ಕದಲ್ಲ”ಎಂದು ಉಲ್ಲೇಖ ಇದ್ದಾಗಿಯೂ, ಪ್ರಾಧಿಕಾರದಿಂದ ಅತಿಕ್ರಮಣದಾರರಿಗೆ ಒಕ್ಕಲೆಬ್ಬಿಸುವ ನೋಟಿಸ್ ನೀಡುತ್ತಿರುವುದು ವಿಷಾದಕರ ಎಂದರು.
ಕಾಗೋಡ ತಿಮ್ಮಪ್ಪ ಅವರು ವಿದಾನ ಸಭೆಯ ಸಭಾಧ್ಯಕ್ಷರಾಗಿರುವ ಸಂದರ್ಭದಲ್ಲಿ ವಿಧಾನ ಸಭೆಯಲ್ಲಿ ಚರ್ಚಿಸಿ ತಿರ್ಮಾನಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಈಗಾಗಲೇ ಅರಣ್ಯ ಹಕ್ಕು ಕಾಯಿದೆಯಲ್ಲಿ ಅರ್ಜಿ ಸಲ್ಲಿಸಿದವರನ್ನ ಒಕ್ಕಲೆಬ್ಬಿಸುವ ಪ್ರಕ್ರಿಯೆಗೆ ಒಳಪಡಿಸತಕ್ಕದ್ದಲ್ಲ ಎಂದು ನಿರ್ಧೇಶನ ನೀಡಿದಾಗಿಯೂ ಜಿಲ್ಲೆಯಲ್ಲಿ ಅರಣ್ಯ ಅಧಿಕಾರಿಗಳು ಅರಣ್ಯವಾಸಿಗಳಿಗೆ ಪದೇ ಪದೇ ಒಕ್ಕಲೆಬ್ಬಿಸುವ ವಿಚಾರಣೆಯ ನೋಟಿಸ್ ನೀಡುತ್ತಿರುವುದು ಖಂಡನಾರ್ಹ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.