ಜನವಸತಿ ಸ್ಥಳದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಬೇಡ. ಭಟ್ಕಳದ ಮಾವಿನಕುರ್ವೆ, ಬೆಳ್ನಿ, ಬಂದರ ಹಾಗೂ ಡೊಂಗರಪಳ್ಳಿ ನಾಗರಿಕರ ಮನವಿ.
ಭಟ್ಕಳ : ಘನತ್ಯಾಜ್ಯ ವಿಲೇವಾರಿ ಘಟಕದ ಕೆಲಸ ನಿಲ್ಲಿಸಬೇಕೆಂದು ತಾಲೂಕಿನ ಮಾವಿನಕುರ್ವೆ, ಬೆಳ್ನಿ, ಬಂದರ ಹಾಗೂ ಡೊಂಗರಪಳ್ಳಿ ನಾಗರಿಕರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಮನವಿ ನೀಡಿದ್ದಾರೆ. ಈ ಭಾಗದಲ್ಲಿ ಹಲವು ಮನೆಗಳು, ಪುರಾತನ, ದರ್ಗಾ, ದೇವಸ್ಥಾನ ಇದ್ದು ರೈತರ ಜಮೀನು ಕೂಡಾ ಇರುತ್ತದೆ. ಹೀಗಿರುವಲ್ಲಿ ಮಾವಿನಕುರ್ವೆ ಗ್ರಾಮ ಪಂಚಾಯತ್ ನಮ್ಮ ಈ ಭಾಗದಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಮೀನು ಮಂಜೂರಿ ಮಾಡಲಾಗಿದೆ ಎನ್ನುವ ಕುರಿತು ತಿಳಿದು ಬಂದಿದ್ದು ಇದಕ್ಕೆ ನಮ್ಮ ತೀವ್ರ ವಿರೋಧವಿದೆ.
ನಮ್ಮ ಜನವಸತಿ ಪ್ರದೇಶದಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ಮಾಡಿದ್ದರೆ ಈ ಭಾಗದಲ್ಲಿ ರೋಗ ರುಜಿನಗಳು ಹರಡುವ ಭೀತಿ ಇರುತ್ತದೆ. ಅಲ್ಲದೇ ಈ ಭಾಗದಿಂದ ಕೆಳ ಭಾಗದಲ್ಲಿ ನೂರಾರು ಹಿಂದೂ ಮುಸ್ಲಿಂ ಮನೆಗಳದ್ದು ನಮ್ಮ ಮನೆಯ ಕುಡಿಯುವ ನೀರಿನ ಬಾವಿಗೆ ಕಲುಷಿತ ನೀರು ಬಂದು ನಂತರದಲ್ಲಿ ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ಬಂದರೆ ಆಶ್ಚರ್ಯವಿಲ್ಲ. ಹೀಗಾಗಿ ಇಲ್ಲಿನ ಮನೆಗಳು ಅಲ್ಲದೇ ಶಾಲೆ, ಪುರಾತನ, ಮಸೀದಿ, ದೇವಸ್ಥಾನ, ದರ್ಗಾ ಇದ್ದು ಕಸ ವಿಲೇವಾರಿ ಘಟಕದಿಂದ ನಮ್ಮ ಪಾವಿತ್ರ್ಯತೆಗೆ ಧಕ್ಕೆಯಾಗುತ್ತದೆ.
ಒಂದು ವೇಳೆ ಘನ ತ್ಯಾಜ್ಯ ವಿಲೇವಾರಿ ಘಟಕದ ಕೆಲಸ ಮುಂದುವರಿದರೆ ನಾವು ತೀವ್ರ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ. ಹೀಗಾಗಿ ತಕ್ಷಣ ಕೆಲಸ ನಿಲ್ಲಿಸಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.
ಯಾವುದೇ ಜನವಸತಿ ಪ್ರದೇಶದಲ್ಲಿ ಊರಿನ ಕಸ, ತ್ಯಾಜ್ಯ ಹಾಕುವುದಕ್ಕೆ ಸರಕಾರವಿರಲಿ, ಜಿಲ್ಲಾಡಳಿತವಿರಲಿ ಯಾವುದೇ ನೈತಿಕ ಹಕ್ಕು ಇಲ್ಲ. ಅಲ್ಲದೇ ಜನರ ಮಧ್ಯದಲ್ಲಿ ಕಸ ಹಾಕಲು ಪರಿಸರ ಮಾಲಿನ್ಯ ಇಲಾಖೆಯವರು ಕೂಡಾ ಒಪ್ಪತಕ್ಕದ್ದಲ್ಲ. ಈ ರೀತಿಯಾಗಿ ಏನಾದರು ನಮ್ಮ ವಿರೋಧದ ನಡುವೆಯೂ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕೆಲಸ ಮುಂದುವರಿದರೆ ಮುಂದಾಗುವ ಪರಿಣಾಮಕ್ಕೆ ಜಿಲ್ಲಾಡಳಿತ ಹಾಗೂ ಗ್ರಾಮ ಪಂಚಾಯತ್ ಹೊಣೆಯಾಗಬೇಕಾಗುತ್ತದೆ. ಕಾರಣ ತಕ್ಷಣ ವಿಲೇವಾರಿ ಘಟಕಕ್ಕೆ ಕೆಲಸ ನಿಲ್ಲಿಸಬೇಕಾಗಿ ಸಾರ್ವಜನಿಕರು ಮನವಿ ಮಾಡಿದ್ದಾರೆ