ಕಾರವಾರ: ‘ಭಗವದ್ಗೀತೆ, ಖುರಾನ್ ಅಥವಾ ಬೈಬಲ್ ಧರ್ಮಗ್ರಂಥಗಳು ಯಾರನ್ನೂ ದ್ವೇಷಿಸಬೇಕೆಂದು ಹೇಳುವುದಿಲ್ಲ. ಯಾವುದೇ ಧರ್ಮವೂ ಮನುಷ್ಯರನ್ನ ಪ್ರೀತಿಸುವುದನ್ನು ಕಲಿಸುತ್ತದೆಯೇ ಹೊರತು ಬೇರೇನನ್ನೂ ಅಲ್ಲ’ ಎಂದು ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಹೇಳಿದರು.
ನಗರದ ಸುಭಾಷ್ ವೃತ್ತದ ಬಳಿ ಮಂಗಳವಾರ ಜಮಾಅತೆ ಇಸ್ಲಾಮಿ ಹಿಂದ್ ಹಮ್ಮಿಕೊಂಡಿದ್ದ ಪ್ರವಾದಿ ಎಲ್ಲರಿಗಾಗಿ ಸೀರತ್ ಅಭಿಯಾನದ ಉದ್ಘಾಟನೆ ಹಾಗೂ ಪ್ರವಾದಿ ಮುಹಮ್ಮದ್ ಪೈಗಂಬರರ ಕುರಿತಂತೆ ರಚಿಸಲಾದ ‘ಪ್ರವಾದಿ ಮುಹಮ್ಮದ್ (ಸ) ಎಲ್ಲರಿಗಾಗಿ’ ಎಂಬ ಕೃತಿಯ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
‘ಪ್ರವಾದಿ ಮೊಹಮ್ಮದ್ರ ಸಂದೇಶಗಳನ್ನು ಸಾರುವ ಪುಸ್ತಕವನ್ನು ಸಾರ್ವಜನಿಕರಿಗೆ ಹಂಚುವ ಮೂಲಕ ಭಾವೈಕ್ಯವನ್ನು ಸಾರಲಾಗುತ್ತಿದೆ. ಪೈಗಂಬರ್, ಏಸು, ಶ್ರೀರಾಮಚಂದ್ರ ಅಥವಾ ರಾಮಾಯಣ ಬರೆದ ವಾಲ್ಮೀಕಿಯೂ ಇನ್ನೊಂದು ಧರ್ಮದ ಬಗ್ಗೆ ದ್ವೇಷಿಸುವಂತೆ ಹೇಳಿಲ್ಲ. ಅವರ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು. ಅವರು ನಡೆದ ದಾರಿಯಲ್ಲಿ ಸಾಗಬೇಕು. ಪ್ರಕೃತಿಯಲ್ಲಿ ನೀರು, ಗಾಳಿ, ಬೆಳಕು ನೀನು ಯಾವ ಜಾತಿ ಎಂದು ಕೇಳುವುದಿಲ್ಲ. ಅವು ಒಟ್ಟಾಗಿರುವಂತೆ ಮಾನವರೂ ಒಟ್ಟಾಗಿ, ಸಹೋದರತ್ವದ ಭಾವದಿಂದ ಬಾಳಬೇಕು. ಮಾನವ ತತ್ವದ ಸಂದೇಶ ಸಾರಬೇಕು’ ಎಂದರು.
ಜಮಾತೆ ಇಸ್ಲಾಮಿ ಹಿಂದ್ ಹಾಗೂ ರಬ್ತಾ ಇ- ಮಿಲ್ಲತ್ ಕಾರ್ಯದರ್ಶಿ ತಲ್ಹಾ ಸಿದ್ದಿಬಾಪಾ, ಮಾತನಾಡಿ, ‘ಪ್ರವಾದಿಯವರ ಜೀವನದ ಸಂದೇಶ ದೇಶಕ್ಕೆ ಬೇಕಾಗಿದೆ. ಎಲ್ಲರೂ ಒಂದು ಕುಟುಂಬ ಎಂದು ಪ್ರವಾದಿಯವರು ಹೇಳಿದ್ದರು. ಆ ಮೂಲಕ ಎಲ್ಲರಿಗೂ ಸಮಾನತೆ ಸಾರಿದ್ದರು. ಪ್ರೀತಿ, ಸದ್ಭಾವನೆ ಈ ದೇಶಕ್ಕೆ ಬೇಕು’ ಎಂದರು.
ಈ ವೇಳೆ ಸಾರ್ವಜನಿಕರಿಗೆ ‘ಪ್ರವಾದಿ ಮುಹಮ್ಮದ್ (ಸ) ಎಲ್ಲರಿಗಾಗಿ’ ಕೃತಿ ಹಾಗೂ ಸಿಹಿ ಹಂಚಲಾಯಿತು.
ಪ್ರಮುಖರಾದ ಅಲ್ತಾಫ್ ಶೇಖ್, ಖಲೀಲುಲ್ಲಾ, ಮೊಹಮ್ಮದ್ ಇಕ್ಬಾಲ್ ಶೇಖ್, ಅತಾ ಉಲ್ಲಾ, ಮಂಜುಲ್ ಇದ್ದರು.