ಶ್ರೀನಿವಾಸಪುರ: ಪಟ್ಟಣದ ಹೊರ ವಲಯದ ರೈಲು ನಿಲ್ದಾಣದಲ್ಲಿ, ರೈಲ್ವೆ ಇಲಾಖೆ ಶ್ರೀನಿವಾಸಪುರದ ಮೂಲಕ ದೆಹಲಿಗೆ ಹೊಸ ರೈಲು ಸಂಚಾರ ಪ್ರಾರಂಭಿಸಿದ್ದಕ್ಕಾಗಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಕಾರ್ಯಕರ್ತರು ಮಂಗಳವಾರ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಮಾತನಾಡಿ, ಈ ಮಾರ್ಗದಲ್ಲಿ ಹೊಸ ರೈಲುಗಳ ಸೇವೆ ಪ್ರಾರಂಭಿಸುವಂತೆ ಆಗ್ರಹಿಸಿ ಕೆಪಿಆರ್ಎಸ್ ಕಾರ್ಯರ್ತರು ಹಲವು ಬಾರಿ ಪ್ರತಿಭಟನೆ ನಡೆಸಿದ್ದರು. ಅದರ ಪರಿಣಾಮವಾಗಿ ದೆಹಲಿಗೆ ರೈಲು ಸೇವೆ ಲಭ್ಯವಾಗಿದೆ. ಇದರಿಂದ ಈ ಪ್ರದೇಶದ ಜನರಿಗೆ ಹೆಚ್ಚಿನ ಉಪಯೋಗವಾಗಿದೆ ಎಂದು ಹೇಳಿದರು.
ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪಾತಕೋಟ ನವೀನ್ ಕುಮಾರ್ ಮಾತನಾಡಿ, ’ಇದು ನಮ್ಮ ಸಂಘಟನೆಯ ಹೋರಾಟಕ್ಕೆ ಸಂದ ಗೆಲುವಾಗಿದೆ. ಸಾರ್ವಜನಿಕರ ಸಂಘಟಿತ ಹೋರಾಟಕ್ಕೆ ಜಯ ಸಿಕ್ಕೇ ಸಿಗುತ್ತದೆ. ನಮ್ಮ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಇನ್ನಷ್ಟು ರೈಲು ಹಾಗೂ ಗೂಡ್ಸ್ ರೈಲುಗಳ ಸೇವೆ ಪ್ರಾರಂಭಿಸಲು ಹೋರಾಟ ನಡೆಸಲಾಗುವುದು’ ಎದು ಹೇಳಿದರು.
ಸಂಸದ ಕೆ.ಎಚ್.ಮುನಿಯಪ್ಪ, ಕೆಪಿಆರ್ಎಸ್ ಮುಖಂಡರಾದ ಎನ್.ವೀರಪ್ಪರೆಡ್ಡಿ, ಆರ್. ವೆಂಕಟೇಶ್್, ಸೈಯದ್ ಫಾರೂಕ್, ಎಂ.ನಾಗರಾಜ್, ನಾರೆಪ್ಪ, ಸಿ.ಎಂ.ಗೌಡ, ಆಂಜಮ್ಮ, ಶ್ರೀನಿವಾಸ್, ನಾಗರಾಜ್, ಶಿವಣ್ಣ, ಸೋಮಶೇಖರ್, ಅಮಾಲಿ ಮೂರ್ತಿ ಇದ್ದರು.