ಲೈಂಗಿಕ ಕಿರುಕುಳ ಪ್ರಕರಣ ಮುಚ್ಚಿ ಹಾಕಲು ಬಿಜೆಪಿ ಯತ್ನ: ಕಾಂಗ್ರೆಸ್ ಆರೋಪ
ಹೊಸದಿಲ್ಲಿ: ಚಂಡಿಗಢ ಆಡಳಿತ ಹಾಗೂ ಪೊಲೀಸರನ್ನು ನಿಯಂತ್ರಿಸುವ ಮೂಲಕ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣವನ್ನು ಮುಚ್ಚಿ ಹಾಕಲು ಬಿಜೆಪಿ ಹಾಗೂ ಕೇಂದ್ರ ಗೃಹ ಸಚಿವಾಲಯ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಸೋಮವಾರ ಆರೋಪಿಸಿದೆ.
ಈ ಪ್ರಕರಣ ಅಪಹರಣ ಹಾಗೂ ಮಹಿಳೆಯ ಗೌರವಕ್ಕೆ ಕುಂದು ತರುವಂತದ್ದು. ಇವೆರೆಡು ಜಾಮೀನು ರಹಿತ ಪ್ರಕರಣ ಎಂದು ಪೂರ್ವ ಚಂಡಿಗಢದ ಡಿಎಸ್ಪಿ ಹಾಗೂ ತನಿಖಾಧಿಕಾರಿ ಸತೀಶ್ ಕುಮಾರ್ 2.30ಕ್ಕೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಆದರೆ, 5 ಗಂಟೆಗೆ ನಡೆಸಿದ ಇನ್ನೊಂದು ಪತ್ರಿಕಾಗೋಷ್ಠಿಯಲ್ಲಿ ಸತೀಶ್ ಕುಮಾರ್, ಇದು ಹಿಂಬಾಲಿಸಿದ ಹಾಗೂ ತಡೆಗಟ್ಟಿದ ಪ್ರಕರಣ ಎಂದು ಹೇಳಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲ ಅವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ತನ್ನ ಪಕ್ಷದ ನಾಯಕ ಹಾಗೂ ಆತನ ಪುತ್ರನನ್ನು ರಕ್ಷಿಸಲು ಪ್ರಕರಣ ಮುಚ್ಚಿ ಹಾಕಲು ಗೃಹ ಸಚಿವಾಲಯ ಹಾಗೂ ಬಿಜೆಪಿ ಚಂಡಿಗಢ ಆಡಳಿತ ಹಾಗೂ ಚಂಡಿಗಢ ಪೊಲೀಸರನ್ನು ನೇರವಾಗಿ ನಿಯಂತ್ರಿಸುತ್ತಿದೆ ಎಂದು ಅವರು ಪ್ರತಿಪಾದಿಸಿದರು.
ಈ ಪ್ರಕರಣ ಭಾರತೀಯ ದಂಡ ಸಂಹಿತೆಯ 365ನೇ ಕಲಂ ಹಾಗೂ 511 ಕಲಂ ಅಡಿಯಲ್ಲಿ ಬರುತ್ತದೆ ಎಂದು ಕುಮಾರ್ ಉಲ್ಲೇಖಿಸಿರುವುದಾಗಿ ಅವರು ಹೇಳಿದರು.
ಆರೋಪಿ ಬಾಲಕಿಯನ್ನು 7 ಕಿಲೋ ಮೀಟರ್ ವರೆಗೆ ಹಿಂಬಾಲಿಸಲು ಯತ್ನಿಸಿದ್ದರು. ಅವರು ಆಕೆಯ ಕಾರಿನ ಮೇಲೆ ದಾಳಿ ಮಾಡಿದರು. ಇದು ಅಪಹರಣದ ಕಾನೂನನ ಅಡಿಯಲ್ಲಿ ಬರುವುದಿಲ್ಲವೇ ? ಚಂಡಿಗಢ ಪೊಲೀಸರ ಹೇಳಿಕೆಯಲ್ಲಿನ ಭಿನ್ನತೆ ಚಂಡಿಗಢ ಪೊಲೀಸರು ಬಿಜೆಪಿ ಅಣತಿಯಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬುದನ್ನು ಸಾಬೀತು ಮಾಡುವುದಿಲ್ಲವೇ ಎಂದು ಅವರು ಪ್ರಶ್ನಿಸಿದರು.
ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿರುವ ಕೇಂದ್ರ ಸರಕಾರದ ನಿರ್ದೇಶನದಂತೆ ಪೊಲೀಸರು ಜಾಮೀನು ಸಹಿತ ಅಪರಾಧದ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಅವರು ತಿಳಿಸಿದರು.
ಈ ಘಟನೆಯನ್ನು ಪೂರ್ಣವಾಗಿ ದಾಖಲಿಸಿಕೊಂಡ ಏಳು ವಿವಿಧ ಕ್ಯಾಮೆರಾಗಳಲ್ಲಿ ಐದು ಕ್ಯಾಮೆರಾಗಳ ದೃಶ್ಯಾವಳಿ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ. ಇದಕ್ಕೆ ಬಿಜೆಪಿ ಹಾಗೂ ಚಂಡಿಗಢ ಆಡಳಿತ ಉತ್ತರ ನೀಡಬಲ್ಲುದೇ ? ಈ ಎಲ್ಲ ಕೆಮರಾಗಳು ಒಮ್ಮೆಲೆ ಕಾರ್ಯಾಚರಿಸುವುದನ್ನು ಹೇಗೆ ಸ್ಥಗಿತಗೊಳಿಸಿದವು. ಬಿಜೆಪಿಯ ರಾಜ್ಯಾಧ್ಯಕ್ಷ ಹಾಗೂ ಅವರ ಮಕ್ಕಳನ್ನು ರಕ್ಷಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಉತ್ತರಿಸಬಲ್ಲರೇ ಎಂದು ಸುರ್ಜೇವಾಲ ಪ್ರಶ್ನಿಸಿದ್ದಾರೆ.