ಹೊಸದಿಲ್ಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ರಾಜಕೀಯ ಪಕ್ಷಗಳಿಗೆ ಯಾವುದೇ ಅಧಿಕಾರವಿಲ್ಲ. ಕೇವಲ ಶಂಕರಾಚಾರ್ಯರಿಗೆ ಅಥವಾ ಧರ್ಮಾಚಾರ್ಯರಿಗೆ ಈ ಅಧಿಕಾರವಿದೆ ಎಂದು ದ್ವಾರಕ-ಶಾರದಾ ಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಹೇಳಿದ್ದಾರೆ.
ವೃಂದಾವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತವು ಜಾತ್ಯಾತೀತ ರಾಷ್ಟ್ರವಾಗಿರುವ ಕಾರಣ ಸರಕಾರವೂ ರಾಮಮಂದಿರ ನಿರ್ಮಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಭಾರತದಲ್ಲಿ ವಾಸಿಸುವವರು ಎಲ್ಲರೂ ಹಿಂದೂಗಳು ಎಂಬ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಭಾರತದಲ್ಲಿ ಹುಟ್ಟಿದವರೆಲ್ಲರೂ ಹಿಂದೂಗಳು ಎಂಬ ಹೇಳಿಕೆ ವಿವೇಚನೆ ರಹಿತವಾದುದು ಎಂದರು. ಸಮಾಜದ ಮೂಲ ಸ್ವರೂಪವನ್ನೇ ಇದು ನಾಶಗೊಳಿಸುತ್ತದೆ.ನೈಜ ಹಿಂದೂ ವೇದ ಮತ್ತು ಶಾಸ್ತ್ರಗಳಲ್ಲಿ ನಂಬಿಕೆ ಇರಿಸಿದ್ದರೆ ಮುಸ್ಲಿಮರು ಕುರಾನ್, ಕ್ರಿಶ್ಚಿಯನ್ನರು ಬೈಬಲ್ ಅನ್ನು ಅನುಸರಿಸುತ್ತಾರೆ ಎಂದು ಶಂಕರಾಚಾರ್ಯರು ಹೇಳಿದರು.
ಚುನಾವಣೆಯಲ್ಲಿ ಇವಿಎಂ (ವಿದ್ಯುನ್ಮಾನ ಮತಯಂತ್ರ) ಬಳಕೆಯ ಬಗ್ಗೆ ಉತ್ತರಿಸಿದ ಅವರು, ತಾನು ಮತಪತ್ರ ಬಳಸಿ ನಡೆಯುವ ಚುನಾವಣೆಯ ಪರವಾಗಿದ್ದೇನೆ ಎಂದರು. ಬಹುತೇಕ ಪಕ್ಷಗಳು ಇವಿಎಂಗೆ ವಿರೋಧ ಸೂಚಿಸಿದರೆ ಚುನಾವಣಾ ಆಯೋಗ ಅದನ್ನು ಪರಿಗಣಿಸಬೇಕು ಎಂದು ಅಭಿಪ್ರಾಯಪಟ್ಟರು.
ಗಂಗಾ ಮತ್ತು ಯಮುನಾ ನದಿಗಳಲ್ಲಿ ಮಾಲಿನ್ಯ ಬಹಳಷ್ಟು ಹೆಚ್ಚಿದೆ. ಈ ಎರಡೂ ನದಿಗಳ ಅಣೆಕಟ್ಟು ಮತ್ತು ಬ್ಯಾರೇಜ್ಗಳನ್ನು ಮುಚ್ಚುವ ಮೂಲಕ ನದಿಗಳ ಪ್ರಾಕೃತಿಕ ಹರಿವಿಗೆ ಸರಕಾರ ಅನುವು ಮಾಡಿಕೊಡಬೇಕು ಎಂದು ಅವರು ಅಭಿಪ್ರಾಯಪಟ್ಟರು.