ನಿತೀಶ್ ಕುಮಾರ್- ಬಿಜೆಪಿ ಮೈತ್ರಿ ಅನೈತಿಕ ಮತ್ತು ಜನರ ತೀರ್ಮಾನಕ್ಕೆ ವಿರುದ್ಧ - ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ
ನವದೆಹಲಿ; ಬಿಹಾರದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬರುವ ನಿತೀಶ್ ಕುಮಾರ್-ಬಿಜೆಪಿ ಸರಕಾರದ ರಚನೆಯನ್ನು ವೆಲ್ಫೇರ್ ಪಾರ್ಟಿಯು ಬಲವಾಗಿ ಖಂಡಿಸಿದೆ. ಮಾತ್ರವಲ್ಲ, ಈ ಹೊಸ ಸರಕಾರವು ಅನೈತಿಕ ಮೈತ್ರಿಯಾಗಿದ್ದು, ಜನರ ತೀರ್ಮಾನಕ್ಕೆ ವಿರುದ್ಧವಾಗಿದೆ. ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಸ್ ಕ್ಯೂ ಆರ್ ಇಲ್ಯಾಸ್ ಅಭಿಪ್ರಾಯ ಪಟ್ಟಿದ್ದು, ಈ ನಿಟ್ಟಿನಲ್ಲಿ ಹೊಸದಾಗಿ ಜನರ ಅಭಿಪ್ರಾಯವನ್ನು ತೆಗೆದುಕೊಳ್ಳಬೇಕೆಂದು ಅವರು ನಿತೀಶ್-ಮೋದಿ ಮೈತ್ರಿಕೂಟವನ್ನು ಆಗ್ರಹಿಸಿದ್ದಾರೆ.
ಜೆಡಿಯು-ಆರ್ಜೆಡಿ-ಕಾಂಗ್ರೆಸ್ನ ಮೈತ್ರಿಯು ಕೋಮುವಾದಿ ಸಂಘವಿರೋಧಿ ಧೋರಣೆ ತಳೆದು ಬಲವಾದ ಜಾತ್ಯತೀತ ವೇದಿಕೆ ರಚಿಸಿ ಜನರ ತೀರ್ಪಿನಂತೆ ಬಿಹಾರದಲ್ಲಿ ಅಧಿಕಾರಕ್ಕೆ ಬಂದಿತು.
ಇದು ದೇಶಾದ್ಯಂತ ಎಲ್ಲಾ ಕೋಮು ವಿರೋಧಿ ಶಕ್ತಿಗಳಿಗೆ ಹೊಸ ಭರವಸೆಯನ್ನು ಉಂಟು ಮಾಡಿತ್ತು. ಆದರೆ ಈಗ ಅವರು ಇಂತಹ ಅಪವಿತ್ರ ಮೈತ್ರಿಗೆ ಹೋಗುವ ಮೊದಲು ಕನಿಷ್ಠ ಪಕ್ಷ ತಮ್ಮ ಶಾಸನಸಭೆಯ ಸದಸ್ಯರಲ್ಲಿ ಚರ್ಚಿಸಬೇಕಿತ್ತು. ಈ ಬೆಳವಣಿಗೆಯಿಂದ ತತ್ವಾದರ್ಶಗಳು ಮತ್ತು ಮೌಲ್ಯಗಳಿಗಿಂತ ಅಧಿಕಾರಕ್ಕೆ ಹೆಚ್ಚು ಬೆಲೆಕೊಡುವ ವ್ಯಕ್ತಿ ಎಂದು ನಿತೀಶ್ ಕುಮಾರ್ ನಿಸ್ಸಂಶಯವಾಗಿ ಸಾಬೀತು ಪಡಿಸಿದ್ದಾರೆ ಎಂದು ಅವರು ಹೇಳಿದರು.
ಲಾಲು ಮತ್ತು ಅವರ ಮಗನ ವಿರುದ್ಧ ಭ್ರಷ್ಟಾಚಾರದ ಕೂಗು ಇಂತಹ ದೊಡ್ಡ ಪಿತೂರಿಯ ಭಾಗವಾಗಿತ್ತು ಎಂಬುದು ಈಗ ದೃಢೀಕರಣಗೊಂಡಿದೆ.
ಅಧಿಕಾರಿಗಳು ರಾಜಕೀಯ ಸಾಧನಗಳಾಗಿ ಮಾರ್ಪಟ್ಟಿದ್ದಾರೆ ಎಂಬ ಆರೋಪವು, ಪಾಟ್ನಾದಲ್ಲಿ ನಡೆದ ಬೆಳವಣಿಗೆಯಿಂದಾಗಿ ಮತ್ತೊಮ್ಮೆ ಸಾಬೀತಾಗಿದೆ. ಸಾಂವಿಧಾನಿಕ ಘನತೆಯನ್ನು ಸ್ಥಾಪಿಸಲು ರಾಜ್ಯಪಾಲರನ್ನು ವಜಾ ಮಾಡಬೇಕಾಗಿದೆ"ಎಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ.