ಹೊಸದಿಲ್ಲಿ: ಜಮೀಯತ್-ಉಲೇಮಾ-ಎ-ಹಿಂದ್ ಅನ್ನು ರವಿವಾರ ಮನಸಾರೆ ಪ್ರಶಂಸಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಅದರ ಸ್ವಯಂಸೇವಕರು ಇತ್ತೀಚಿಗೆ ಗುಜರಾತ್ನಲ್ಲಿ ಪ್ರವಾಹದಿಂದ ಹಾನಿಗೀಡಾಗಿದ್ದ 22 ದೇವಸ್ಥಾನಗಳು ಮತ್ತು ಎರಡು ಮಸೀದಿಗಳನ್ನು ಸ್ವಚ್ಛಗೊಳಿಸುವ ಮೂಲಕ ಏಕತೆಯ ಅತ್ಯುತ್ತಮ ಮತ್ತು ಸ್ಫೂರ್ತಿದಾಯಕ ನಿದರ್ಶನವನ್ನು ಮೆರೆದಿದ್ದಾರೆ ಎಂದು ಹೇಳಿದರು.
ತನ್ನ ಮಾಸಿಕ ‘ಮನ್ ಕೀ ಬಾತ್’ ರೇಡಿಯೊ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತವು ವೈವಿಧ್ಯಗಳಿಂದ ಕೂಡಿದ ದೇಶವಾಗಿದ್ದು, ಇದು ಆಹಾರ, ಜೀವನಶೈಲಿ ಮತ್ತು ವೇಷಭೂಷಣಗಳಿಗಷ್ಟೇ ಸೀಮಿತವಾಗಿಲ್ಲ, ಇದು ಜೀವನದ ಪ್ರತಿಯೊಂದು ಕ್ಷೇತ್ರ ದಲ್ಲಿಯೂ ಕಂಡುಬರುತ್ತಿದೆ ಎಂದರು.
ಗುಜರಾತ್ ಇತ್ತೀಚಿಗೆ ಭೀಕರ ನೆರೆಹಾವಳಿಗೆ ಸಾಕ್ಷಿಯಾಗಿತ್ತು. ಹಲವಾರು ಜನರು ಪ್ರಾಣಗಳನ್ನು ಕಳೆದುಕೊಂಡಿದ್ದಾರೆ. ನೆರೆನೀರು ಇಳಿದಾಗ ಎಲ್ಲೆಡೆಗಳಲ್ಲಿಯೂ ಗಲೀಜು ತುಂಬಿಕೊಂಡಿತ್ತು. ಆಗ ಬನಾಸಕಾಂತಾ ಜಿಲ್ಲೆಯ ಧನೇರಾದಲ್ಲಿ ಜಮೀಯತ್-ಉಲೇಮಾ-ಎ-ಹಿಂದ್ನ ಸ್ವಯಂಸೇವಕರು ಹಂತಹಂತವಾಗಿ ಕೊಳಚೆ ತುಂಬಿಕೊಂಡಿದ್ದ 22 ದೇವಸ್ಥಾನಗಳು ಮತ್ತು ಎರಡು ಮಸೀದಿಗಳನ್ನು ಸ್ವಚ್ಛಗೊಳಿಸುವ ಮೂಲಕ ಏಕತೆಯ ಆದರ್ಶವನ್ನು ಮೆರೆದಿದ್ದಾರೆ. ಈ ಸ್ವಯಂಸೇವಕರು ಸ್ವಚ್ಛತೆಗಾಗಿ ಏಕತೆಯ ಸ್ಫೂರ್ತಿದಾಯಕ ನಿದರ್ಶನವನ್ನು ಹಾಕಿದ್ದಾರೆ. ಸ್ವಚ್ಛತೆಯ ಕುರಿತು ಈ ಬದ್ಧ ಪ್ರಯತ್ನವು ನಮ್ಮಲ್ಲಿ ಅಂತರ್ಗತಗೊಂಡರೆ ನಮ್ಮ ದೇಶವು ಖಂಡಿತವಾಗಿಯೂ ಹೊಸ ಎತ್ತರಕ್ಕೆ ಏರಲಿದೆ ಎಂದು ಒತ್ತಿ ಹೇಳಿದರು.
ಭಾರತವು ಸಾವಿರಾರು ವರ್ಷಗಳ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ ಎಂದು ಬೆಟ್ಟು ಮಾಡಿದ ಮೋದಿ, ದೇಶದ ವೈವಿಧ್ಯತೆಯನ್ನು ಬಿಂಬಿಸುವ ಹಲವಾರು ಹಬ್ಬಗಳ ಬಗ್ಗೆ ಮಾತನಾಡಿದರು.
ನಮ್ಮ ಸಾಂಸ್ಕೃತಿಕ ಪರಂಪರೆಗಳು, ಸಾಮಾಜಿಕ ರಿವಾಜುಗಳು ಮತ್ತು ಐತಿಹಾಸಿಕ ಘಟನೆಗಳನ್ನು ನೋಡಿದರೆ ಹಬ್ಬ ಅಥವಾ ಉತ್ಸವಗಳು ನಡೆಯದ ಒಂದೇ ಒಂದು ದಿನವೂ ಇಲ್ಲವೇನೋ ಎಂದು ಅನ್ನಿಸುತ್ತದೆ. ಭಾರತೀಯ ಹಬ್ಬಗಳು ಪ್ರಕೃತಿಯೊಂದಿಗೆ ನೇರವಾಗಿ ಗುರುತಿಸಿಕೊಂಡಿವೆ. ನಮ್ಮ ಹೆಚ್ಚಿನ ಉತ್ಸವಗಳು ನೇರವಾಗಿ ರೈತರು ಮತ್ತು ಮೀನುಗಾರರಿಗೆ ಸಂಬಂಧಿಸಿವೆ ಎಂದ ಅವರು, ಶನಿವಾರ ಜೈನ ಸಮುದಾಯವು ಆಚರಿಸಿದ ಸಂವತ್ಸರಿ ಜೊತೆಗೆ ಗಣೇಶ ಚತುರ್ಥಿ, ಓಣಂ, ನವರಾತ್ರಿ, ದುರ್ಗಾ ಪೂಜಾ ಮತ್ತು ಈದ್-ಉಲ್-ಅಝ್ ಹಾಗಳನ್ನು ಪ್ರಸ್ತಾಪಿಸಿದರು. ರಾಷ್ಟ್ರಕ್ಕೆ ಹಬ್ಬಗಳ ಸಂದರ್ಭದಲ್ಲಿ ಶುಭಾಶಯಗಳನ್ನೂ ಅವರು ಕೋರಿದರು.