ಹೊಸದಿಲ್ಲಿ: ಗೋರಕ್ಷಣೆಯ ಹೆಸರಿನಲ್ಲಿ ಜನರು ಕಾನೂನನ್ನು ಉಲ್ಲಂಘಿಸಿದಲ್ಲಿ ಪೊಲೀಸ್ ದೂರಾ ದಾಖಲಿಸುವಂತೆ ಕೇಂದ್ರ ಸರಕಾರವು ರಾಜ್ಯ ಸರಕಾರಗಳಿಗೆ ಸೂಚನೆ ನೀಡಿದೆಯೆಂದು ಸಹಾಯಕ ಗೃಹ ಸಚಿವ ಹಂಸರಾಜ್ ಅಹಿರ್ ಮಂಗಳವಾರ ಲೋಕಸಭೆಗೆ ತಿಳಿಸಿದ್ದಾರೆ.
ಕಾನೂನು ಹಾಗೂ ಶಿಸ್ತು ಕಾಪಾಡುವುದು, ಜಾನುವಾರು ವ್ಯಾಪಾರಿಗಳು, ಪಶುಸಂಗೋಪನೆ ರೈತರು ಹಾಗೂ ಅಲ್ಪಸಂಖ್ಯಾತ ಸಮುದಾಯದ ಜನರ ಮೇಲಿನ ದಾಳಿಗಳನ್ನು ತಡೆಗಟ್ಟುವುದು ರಾಜ್ಯ ಸರಕಾರದ ಕರ್ತವ್ಯವಾಗಿದೆ ಎಂದು ಅವರು ಸದನಕ್ಕೆ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರವನ್ನು ನೀಡಿದ ಅಹಿರ್, ಗೋರಕ್ಷಣೆಯ ಹೆಸರಿನಲ್ಲಿ ಕಾನೂನು ಮುರಿಯುವವರ ವಿರುದ್ಧ ಕಡ್ಡಾಯವಾಗಿ ಪೊಲೀಸ್ ದೂರು ಅಥವಾ ಎಫ್ಐಆರ್ ದಾಖಲಿಸುವಂತೆ ರಾಜ್ಯ ಸರಕಾರಗಳಿಗೆ ಕೇಂದ್ರ ಸರಕಾರ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.
ಗೋರಕ್ಷಣೆಯ ಹೆಸರಿನಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳುವ ಸಮಾಜವಿರೋಧಿ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕಳೆದ ವಾರ ರಾಜ್ಯಸರಕಾರಗಳಿಗೆ ತಿಳಿಸಿದ್ದರು. ಗೋರಕ್ಷಣೆಯ ಹೆಸರುಹೇಳಿಕೊಂಡು ನರಹತ್ಯೆ, ಹಲ್ಲೆಗಳನ್ನು ನಡೆಸುವುದು ಹಿಂದುತ್ವದ ವಿರೋಧಿಯಾಗಿದೆ ಎಂದು ಬಿಜೆಪಿಯ ಮಿತ್ರಪಕ್ಷವಾದ ಶಿವಸೇನೆ ಕೂಡಾ ತೀವ್ರವಾಗಿ ಖಂಡಿಸಿತ್ತು. ಇಂತಹ ಘಟನೆಗಳನ್ನು ತಡೆಯಲು ಕೇಂದ್ರ ಸರಕಾರವು ನೀತಿಯೊಂದನ್ನು ರೂಪಿಸಬೇಕೆಂದು ಅದು ಪ್ರಧಾನಿ ಮೋದಿಯನ್ನು ಆಗ್ರಹಿಸಿತ್ತು.