ಹೊಸದಿಲ್ಲಿ: ಉಪಚುನಾವಣೆಯ ಫಲಿತಾಂಶ ನಾಲ್ಕು ವರ್ಷಗಳ ಮೋದಿ ಆಡಳಿತಕ್ಕೆ ಜನತೆ ನೀಡಿದ ಆದೇಶವಾಗಿದೆ ಮತ್ತು ಬಿಜೆಪಿ ಸಾಮ್ರಾಜ್ಯದ ಅಂತ್ಯದ ಆರಂಭವಾಗಿದೆ ಎಂದು ಕಾಂಗ್ರೆಸ್ ವಿಶ್ಲೇಷಿಸಿದೆ.
ಗೋಡೆಯ ಮೇಲಿನ ಬರಹ ಸ್ಪಷ್ಟವಾಗಿದೆ. ಬಿಜೆಪಿಯ ನಿರ್ಗಮನ ಮತ್ತು ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳ ಯಶಸ್ಸು ಖಚಿತಗೊಂಡಿದೆ ಎಂದು ಕಾಂಗ್ರೆಸ್ ಮುಖಂಡ ಪ್ರಮೋದ್ ತಿವಾರಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಮೋದಿ ಸರಕಾರ ಬಡಜನತೆಯನ್ನು ಹಾಗೂ ರೈತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಕಳೆದ ನಾಲ್ಕು ವರ್ಷ ಸುಳ್ಳು, ವಂಚನೆ ಹಾಗೂ ವಿಶ್ವಾಸದ್ರೋಹದ ತಳಹದಿಯಲ್ಲಿ ನಿಂತಿದ್ದ ಬಿಜೆಪಿ ಸಾಮ್ರಾಜ್ಯದ ಅಂತ್ಯದ ಆರಂಭವಾಗಿದೆ . ಮುಂದಿನ ಲೋಕಸಭಾ ಚುನಾವಣೆಗೆ ಇದು ಸೆಮಿಫೈನಲ್ ಎಂದು ಪರಿಗಣಿಸಲಾಗಿತ್ತು. ಇದರಲ್ಲಿ ಬಿಜೆಪಿ ಸೋತಿದೆ. 2019ರ ಮಹಾ ಚುನಾವಣೆಯಲ್ಲೂ ಅವರ ಸೋಲು ಖಚಿತ ಎಂದು ತಿವಾರಿ ಹೇಳಿದರು.
ಬಿಜೆಪಿ ವಿರೋಧ ಪಕ್ಷಗಳ ವಿರುದ್ಧ ಸೇಡಿನ ರಾಜಕೀಯ ನಡೆಸಿ ಸಿಬಿಐ, ಜಾರಿ ನಿರ್ದೇಶನಾಲಯ ಮುಂತಾದ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂದು ತಿವಾರಿ ಆರೋಪಿಸಿದರು. ಆದರೆ ಉಪಚುನಾವಣೆಯನ್ನು ಮೋದಿ ಮತ್ತು 12ಕ್ಕೂ ಹೆಚ್ಚು ವಿಪಕ್ಷಗಳ ನಡುವಿನ ಯುದ್ಧ ಎಂದು ಬಿಂಬಿಸುವುದು ಸರಿಯಲ್ಲ . ವಾಸ್ತವವಾಗಿ ಮೋದಿಯವರ ಜೊತೆ ಸುಮಾರು 47 ಪಕ್ಷಗಳಿವೆ. ಆದ್ದರಿಂದ ಹೀಗೆ ಹೇಳುವುದು ಸರಿಯಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರವಾಗಿ ಹೇಳಿದರು.