ಭಟ್ಕಳ: ಹೊಸ ಕಟ್ಟಡ ನಿರ್ಮಾಣಕ್ಕೆ ಒಪ್ಪಿಗೆ
ಭಟ್ಕಳ: ನ್ಯಾಯಾಲಯದಲ್ಲಿ ಇತ್ತೀಚೆಗೆ ಸುಟ್ಟು ಹೋಗಿರುವ ಭಾಗವನ್ನು ರಿಪೇರಿ ಮಾಡಲು ತುರ್ತು ಕ್ರಮ ಕೈಗೊಂಡಿದ್ದು, ಈಗಾಗಲೇ ಕಾಮಗಾರಿ ಮುಗಿಯುವ ಹಂತದಲ್ಲಿದೆ ಎಂದು ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ರಾಜಶೇಖರ ಹೇಳಿದರು.
ಇಲ್ಲಿನ ನ್ಯಾಯಾಲಯಕ್ಕೆ ಭೇಟಿ ನೀಡಿ ನ್ಯಾಯಾಲಯದ ಕಟ್ಟಡದ ಕಾಮಗಾರಿಯನ್ನು ಪರಿಶೀಲಿಸಿ, ವಕೀಲರ ಸಂಘಕ್ಕೆ ಭೇಟಿ ನೀಡಿದ ಅವರು ವಕೀಲರು ನೀಡಿದ ಗೌರವವನ್ನು ಸ್ವೀಕರಿಸಿ ಮಾತನಾಡಿ, ನೂತನವಾಗಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿರುವ ನ್ಯಾಯಾಲಯದ ಸಂಕೀರ್ಣದ ಕಟ್ಟಡದ ಪರಿಷ್ಕೃತ ನೀಲನಕ್ಷೆಯನ್ನು ಉಚ್ಚ, ನ್ಯಾಯಾಲಯಕ್ಕೆ ಕಳುಹಿಸಲಾಗಿದ್ದು, ವಕೀಲರ ಸಂಘದ ಮನವಿಯಂತೆ ಈಗಿರುವ ಕಟ್ಟಡದ ಸ್ಥಳದಲ್ಲಿಯೇ ಹೊಸ ಕಟ್ಟಡ ನಿರ್ಮಾಣಕ್ಕೆ ಒಪ್ಪಿಗೆ ದೊರೆಯುವ ಸಾಧ್ಯತೆ ಇದೆ. ಈ ಬಗ್ಗೆ ಸೂಕ್ತ ಆದೇಶದೊಂದಿಗೆ ಶೀಘ್ರದಲ್ಲಿಯೇ ಮಂಜೂರಿ ದೊರೆಯುವ ನಿರೀಕ್ಷೆ ಇದೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಜಗದೀಶ ಶಿವಪೂಜೆ, ಪ್ರಧಾನ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ. ನ್ಯಾಯಾಧೀಶ ಫವಾಜ್ ಪಿ.ಎ., ವಕೀಲರ ಸಂಘದ ಅಧ್ಯಕ್ಷ ಎಂ.ಎಲ್. ನಾಯ್ಕ, ಕಾರ್ಯದರ್ಶಿ ಜೆ.ಡಿ. ಭಟ್ಟ, ವಕೀಲರುಗಳಾದ ಆರ್. ಆರ್. ಶೆಟ್ಟಿ, ಜೆ.ಡಿ. ನಾಯ್ಕ, ಎಂ.ಜೆ. ನಾಯ್ಕ, ಮಹೇಶ ನಾಯ್ಕ, ರಾಜೇಶ ನಾಯ್ಕ, ನಾಗರಾಜ ಎಸ್. ನಾಯ್ಕ, ಎಸ್.ಜೆ. ನಾಯ್ಕ, ಶಂಕರ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.